ದ್ವೀಪರಾಷ್ಟ್ರ ಶ್ರೀಲಂಕಾ ಹಿಂದೆಂದೂ ಕಂಡಿರದಂತಾ ಆರ್ಥಿಕ ಬಿಕ್ಕಟ್ಟಿದೆ ಸಿಲುಕಿದೆ. ಜನ ಸಾಮಾನ್ಯರಿಗೆ ದಿನಬಳಕೆಯ ವಸ್ತುಗಳು ಕೂಡ ದೊರೆಯದಂತಾ ಹೀನಾಯ ಸ್ಥಿತಿ ಶ್ರೀಲಂಕಾದಲ್ಲದೆ. ದುಬಾರಿ ಬೆಲೆ ಜನಸಾಮಾನ್ಯರನ್ನು ಅಕ್ಷರಶಃ ಕಂಗೆಡಿಸಿದೆ. 1948ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ಬಳಿಕ ಶ್ರೀಲಂಕಾ ಇದೇ ಮೊದಲ ಬಾರಿಗೆ ಇಂಥಾ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮತ್ತೊಂದೆಡೆ ಶ್ರೀಲಂಕಾ ಸರ್ಕಾರದ ಎಲ್ಲಾ ಕ್ಯಾಬಿನೆಟ್ ಸಚಿವರು ಕೂಡ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದ್ದು ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ತುರ್ತು ಪರಿಸ್ಥಿತಿ ಹೇರಿದ್ದು ಕರ್ಫ್ಯೂ ವಿಧಿಸಿದ್ದಾರೆ.
ಶ್ರೀಲಂಕಾದ ಈ ಪರಿಸ್ಥಿತಿಯ ಬಗ್ಗೆ ಶ್ರೀಲಂಕಾದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಕಳವಳವನ್ನು ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಕ್ರಿಕೆಟಿಗರಾದ ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ, ಲಸಿತ್ ಮಲಿಂಗಾ ಸೇರಿದಂತೆ ಅನೇಕ ಹಾಲಿ ಹಾಗೂ ಮಾಜಿ ಆಟಗಾರರು ತಮ್ಮ ಆತಂಕವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಮಾಜಿ ಕ್ರಿಕೆಟಿಗರು ಕೂಡ ಪ್ರಸ್ತುತ ಭಾರತದಲ್ಲಿದ್ದು ಐಪಿಎಲ್ನಲ್ಲಿ ಭಾಗಿಯಾಗಿದ್ದಾರೆ.
IPL 2022: RCB vs RR ಪಂದ್ಯದ ಡ್ರೀಮ್ ಟೀಂ, ಪ್ಲೇಯಿಂಗ್ 11, ಪಿಚ್ ರಿಪೋರ್ಟ್
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿರುವ ಕುಮಾರ ಸಂಗಕ್ಕರ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಶ್ರೀಲಂಕಾದ ಜನರು ಊಹಿಸಲೂ ಸಾಧ್ಯವಾಗದಂತಾ ಸಂಕಷ್ಟದ ಸಂದರ್ಭದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. "ಶ್ರೀಲಂಕಾದ ಜನರು ಈಗ ಊಹೆಯೂ ಮಾಡಲಾಗದಷ್ಟು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಂಕಾದ ಜನರು ಮತ್ತು ಕುಟುಂಬಗಳು ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ. ಈ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ" ಎಂದು ಕುಮಾರ ಸಂಗಕ್ಕರ ಪ್ರತಿಕ್ರಿಯಿಸಿದ್ದಾರೆ" ಎಂದಿದ್ದಾರೆ ಕುಮಾರ ಸಂಗಕ್ಕರ.
"ಜನರು ತಮ್ಮ ಅಗತ್ಯಗಳ ಬಗ್ಗೆ ಧ್ವನಿಯೆತ್ತುತ್ತಿದ್ದಾರೆ. ಪರಿಹಾರವನ್ನು ಕೇಳುತ್ತಿದ್ದಾರೆ. ಕೆಲವರು ಆ ಧ್ವನಿಗೆ ಅಸಮಾಧಾನ ಮತ್ತು ಕೋಪದಿಂದ ಪ್ರತಿಕ್ರಿಯಿಸಿದರೆ, ಇತರರು ಅದರ ಅನಗತ್ಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ ಕುಮಾರ ಸಂಗಕ್ಕರ.
ಇನ್ನು ಮಾಜಿ ವೇಗದ ಬೌಲರ್ ಲಸಿತ್ ಮಲಿಂಗಾ ಪ್ರತಿಕ್ರಿಯಿಸಿದ್ದು "ನನ್ನ ಶ್ರೀಲಂಕಾದ ಜನರೊಂದಿಗೆ ನಾನಿದ್ದೇನೆ" ಎಂದು ಟ್ವೀಟ್ನಲ್ಲಿ ಸಾಂದರ್ಭಿಕ ಚಿತ್ರವೊಂದನ್ನು ಹಂಚಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ದನೆ "ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಕಾನೂನು ಹಾಗೂ ಕರ್ಫ್ಯೂಯೂ ವಿಧಿಸಿರುವುದನ್ನು ನೋಡಲು ಬೇಸರವಾಗುತ್ತದೆ. ಪ್ರತಿಭಟನೆಯ ಹಕ್ಕನ್ನು ಹೊಂದಿರುವ ಸಾಮಾನ್ಯ ಜನರ ಅಗತ್ಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಂತಹವರನ್ನು ಬಂಧಿಸುವುದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಮತ್ತು ಅವರ ರಕ್ಷಣೆಗೆ ಧಾವಿಸಿದ ಕೆಚ್ಚೆದೆಯ ಶ್ರೀಲಂಕಾದ ವಕೀಲರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ" ಎಂದಿದ್ದಾರೆ ಜಯವರ್ಧನೆ.
ರೋಹಿತ್ ಶರ್ಮಾ ಮುಂಬೈಗೂ ಮೊದಲೇ ಡೆಕ್ಕನ್ ಚಾರ್ಜಸ್ ಕ್ಯಾಪ್ಟನ್ ಆಗ್ಬೇಕಿತ್ತು: ಪ್ರಗ್ಯಾನ್ ಓಜಾ
ಇನ್ನು ಶ್ರೀಲಂಕಾ ತಂಡದ ಮತ್ತೋರ್ವ ಮಾಜಿ ನಾಯಕ ಸನತ್ ಜಯಸೂರ್ಯ "ಕಳೆದ ಒಂದು ತಿಂಗಳಿನಿಂದ ಎಲ್ಲವನ್ನೂ ಮೌನವಾಗಿಯೇ ತಡೆದುಕೊಂಡಿದ್ದರು ಶ್ರೀಲಂಕಾದ ಜನರು. ಆದರೆ ಪ್ರತೀ ತಾಳ್ಮೆಗೂ ಒಂದು ಮಿತಿಯಿರುತ್ತದೆ. ಈಗ ನಾವು ಆ ಮಿತಿಯನ್ನು ತಲುಪಿದ್ದೇವೆ. ನಿನ್ನೆ ನಡೆದ ಪ್ರತಿಭಟನೆ ಜನರ ಮೇಲಾಗುತ್ತಿರುವ ಅನ್ಯಾಯದ ಭಾಗವಾಗಿದೆ. ನಾವು ಯಾವತ್ತಿಗೂ ಬಣ್ಣ, ಜಾತಿ, ಧರ್ಮಗಳ ಆಧಾರದಲ್ಲಿ ಬೇರ್ಪಡದೆ ಒಂದಾಗೋಣ. ನಮಗಾಗಿ, ನಮ್ಮ ಮಕ್ಕಳಿಗಾಗಿ ಹಾಗೂ ಮುಂದಿನ ಭವಿಷ್ಯಕ್ಕಾಗಿ ಎದ್ದು ನಿಲ್ಲೋಣ" ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸನತ್ ಜಯಸೂರ್ಯ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಯಾವುದೇ ಆಸ್ತಿ ಪಾಸ್ತಿಗಳಿಗೆ ನಷ್ಟವನ್ನುಂಟು ಮಾಡದ ಹಾಗೆ ಶಾಂತಿಯಿಂದ ಪ್ರತಿಭಟನೆ ನಡೆಸಲು ಮನವಿ ಮಾಡಿಕೊಂಡಿದ್ದಾರೆ.