ಬಾರ್ಬಡೋಸ್, ಜೂನ್ 26: ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಣ ಮೂರನೇ ಹಾಗೂ ಅಂತಿಮ ಟೆಸ್ಟ್ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ.
ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲ ಮಾಡಿಕೊಳ್ಳಲು ಶ್ರೀಲಂಕಾ ತಂಡಕ್ಕೆ ಕೇವಲ 63 ರನ್ಗಳ ಅವಶ್ಯಕತೆಯಿದೆ. ಆದರೆ ಕೈಯಲ್ಲಿ ಐದು ವಿಕೆಟ್ಗಳು ಮಾತ್ರ ಉಳಿದುಕೊಂಡಿವೆ.
ಮಯಂಕ್ ಅಗರ್ವಾಲ್ ಶತಕಕ್ಕೆ ತಲೆಬಾಗಿದ ವೆಸ್ಟ್ ಇಂಡೀಸ್ 'ಎ'
ಮೂರು ಪಂದ್ಯಗಳ ಸರಣಿಯನ್ನು 2-0ರಿಂದ ಗೆದ್ದುಕೊಳ್ಳಲು ವೆಸ್ಟ್ ಇಂಡೀಸ್ ತಂಡ ಶತಪ್ರಯತ್ನ ನಡೆಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಮಳೆರಾಯ ಕೈಕೊಡದೆ ಇದ್ದರೆ ಬುಧವಾರದ ಬೆಳಗಿನ ಅವಧಿಯಲ್ಲಿಯೇ ಪಂದ್ಯ ಮುಗಿಯವ ಸಾಧ್ಯತೆ ಇದೆ.
ಬಾರ್ಬಡೋಸ್ನ ಬ್ರಿಡ್ಜ್ಟೌನ್ನಲ್ಲಿನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಪಂದ್ಯದ ಮೂರನೇ ದಿನದ ಆಟದಲ್ಲಿ 20 ವಿಕೆಟ್ಗಳು ಪತನಗೊಂಡವು.
ಸೋಮವಾರದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದ್ದ ಶ್ರೀಲಂಕಾ ತಂಡ, ಮೂರನೇ ದಿನವಾದ ಮಂಗಳವಾರ 55 ರನ್ ಸೇರಿಸುವಷ್ಟರಲ್ಲಿ ಉಳಿದ 5 ವಿಕೆಟ್ಗಳನ್ನು ಕಳೆದುಕೊಂಡಿತು.
ನವೆಂಬರ್ 11ಕ್ಕೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರ
ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ 42 ರನ್ ಗಳಿಸಿ ಕೊನೆಯಲ್ಲಿ ಹೋರಾಟ ನಡೆಸಿದರು. ಉಳಿದಂತೆ ತಂಡದ ನಾಲ್ವರು ಬ್ಯಾಟ್ಸ್ಮನ್ಗಳು ಸೊನ್ನೆ ಸುತ್ತಿದರು.
ವೆಸ್ಟ್ ಇಂಡೀಸ್ ಪರ ನಾಯಕ ಜೇಸನ್ ಹೋಲ್ಡರ್ ಕೇವಲ 19 ರನ್ ಇತ್ತು 4 ವಿಕೆಟ್ ಪಡೆದರು. ಶನೋನ್ ಗೇಬ್ರಿಯಲ್ 3 ಮತ್ತು ಕೀಮರ್ ರೋಚ್ 2 ವಿಕೆಟ್ ಕಬಳಿಸಿ ಶ್ರೀಲಂಕಾವನ್ನು ನಿಯಂತ್ರಿಸಿದರು.
50 ರನ್ಗಳ ಮುನ್ನಡೆಯೊಂದಿಗೆ ಎರಡನೆಯ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ವೇಗದ ಬೌಲರ್ಗಳಿಗೆ ನೆರವು ನೀಡುತ್ತಿದ್ದ ಪಿಚ್ನಲ್ಲಿ ಲಂಕಾ ಬೌಲರ್ಗಳ ಎದುರು ತತ್ತರಿಸಿದರು.
ಕೇವಲ 93 ರನ್ಗಳಿಗೆ ವೆಸ್ಟ್ ಇಂಡೀಸ್ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. 9ನೇ ಕ್ರಮಾಂಕದ ಕೀಮರ್ ರೋಚ್ 23 ರನ್ ಗಳಿಸಿದ್ದೇ ವೆಸ್ಟ್ ಇಂಡೀಸ್ ತಂಡದ ಅತ್ಯಧಿಕ ಮೊತ್ತವೆನಿಸಿತು. ತಂಡದ ಏಳು ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತ ದಾಟಲು ವಿಫಲರಾದರು.
ನಾಯಕ ಸುರಂಗಾ ಲಕ್ಮಲ್ ಮತ್ತು ಕಸುನ್ ರಜಿತಾ ಅವರು ತಲಾ ಮೂರು ವಿಕೆಟ್ ಪಡೆದು ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದರು.
144 ರನ್ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ನಾಯಕ ಹೋಲ್ಡರ್ ಮತ್ತೆ ಆಘಾತ ನೀಡಿದ್ದಾರೆ. ದಿನದಾಂತ್ಯಕ್ಕೆ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. 21 ರನ್ ನೀಡಿ 4 ವಿಕೆಟ್ ಪಡೆದಿರುವ ಹೋಲ್ಡರ್, ವೆಸ್ಟ್ ಇಂಡೀಸ್ ಪಾಳಯದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದಾರೆ.
25 ರನ್ ಗಳಿಸಿರುವ ಕುಸಾಲ್ ಮೆಂಡಿಸ್ ಮತ್ತು 1 ರನ್ ಗಳಿಸಿರುವ ದಿಲ್ರುವಾನ್ ಪೆರೇರಾ ಕ್ರೀಸ್ನಲ್ಲಿದ್ದಾರೆ. ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ಮನ್ ಕುಸಾಲ್ ಪೆರೇರಾ ಇನ್ನೂ ಕಣಕ್ಕಿಳಿದಿಲ್ಲ. ಹೀಗಾಗಿ ಶ್ರೀಲಂಕಾ ಕೂಡ ನಾಲ್ಕನೆಯ ದಿನದ ಆಟದಲ್ಲಿ ಬಾಕಿ ಉಳಿದಿರುವ 63 ರನ್ಗಳ ಗುರಿ ತಲುಪುವ ವಿಶ್ವಾಸದಲ್ಲಿದೆ.
ಕುಸಾಲ್ ಪೆರೇರಾಗೆ ಗಾಯ
ವೆಸ್ಟ್ ಇಂಡೀಸ್ ತಂಡದ ಎರಡನೆಯ ಇನ್ನಿಂಗ್ಸ್ ವೇಳೆ ಕೊನೆಯ ಬ್ಯಾಟ್ಸ್ಮನ್ ಶನೊನ್ ಗೇಬ್ರಿಯಲ್ ಅವರು ಬಾರಿಸಿದ ಚೆಂಡನ್ನು ಹಿಡಿಯಲು ಹೋಗಿ ಕುಸಾಲ್ ಪೆರೇರಾ ತೀವ್ರವಾಗಿ ಗಾಯಗೊಂಡಿದ್ದಾರೆ.
ದಿಲ್ರುವಾಲ್ ಪೆರೇರಾ ಅವರ ಬೌಲಿಂಗ್ನಲ್ಲಿ ಗೇಬ್ರಿಯಲ್ ಅವರು ಆಕಾಶದೆತ್ತರಕ್ಕೆ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯಲು ಕುಸಾಲ್ ಮುಂದಾದರು. ಲಾಂಗ್ಆನ್ನಲ್ಲಿ ಚೆಂಡು ಬೌಂಡರಿ ಗೆರೆ ದಾಟಿತು. ಆದರೆ, ಕುಸಾಲ್ ನಿಯಂತ್ರಣ ಸಿಗದೆ ಜಾಹಿರಾತು ಫಲಕಕ್ಕೆ ಡಿಕ್ಕಿ ಹೊಡೆದರು.
ಕುಸಾಲ್ ಅವರ ಮುಖ ಮತ್ತು ಪಕ್ಕೆಲುವಿಗೆ ಪೆಟ್ಟಾಗಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಕೂಡಲೇ ಧಾವಿಸಿದ ವೈದ್ಯಕೀಯ ಸಿಬ್ಬಂದಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದರು.
ಸ್ಕ್ಯಾನಿಂಗ್ನಲ್ಲಿ ಯಾವುದೇ ತೊಂದರೆ ಕಂಡುಬರದ ಕಾರಣ ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಳಿಕ ಅವರು ಮೈದಾನಕ್ಕೆ ಹಿಂತಿರುಗಿದರು.
ಕುಸಾಲ್ ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದೆ. ಆದರೆ, ಅವಶ್ಯಕತೆ ಇದ್ದರೆ ಅವರು ನಾಳೆ ಬ್ಯಾಟಿಂಗ್ಗೆ ಇಳಿಯುತ್ತಾರೆ ಎಂದು ಶ್ರೀಲಂಕಾ ತಂಡದ ಮೂಲಗಳು ತಿಳಿಸಿವೆ.
ಕುಸಾಲ್ ಅವರ ಗೈರು ಹಾಜರಿಯಲ್ಲಿ ಶ್ರೀಲಂಕಾ ತಂಡದ ಎರಡನೆಯ ಇನ್ನಿಂಗ್ಸ್ಅನ್ನು ದನುಷ್ಕಾ ಗುಣತಿಲಕ ಆರಂಭಿಸಿದರು.