ಭಾರತಕ್ಕೆ ಎಚ್ಚರಿಕೆ ನೀಡಿದ ಮಾಜಿ ನಾಯಕ ಯಾರು?
ಹೀಗೆ ಹೇಳಿದ್ದು ಬೇರೆ ಯಾರೂ ಅಲ್ಲ. ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ವಾ. ಕಳೆದ ಬಾರಿ ಅಂದರೆ 2019ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಜಯವನ್ನು ಗಳಿಸಿರಬಹುದು. ಆದರೆ ಮುಂದಿನ ಸರಣಿ ಟೀಮ್ ಇಂಡಿಯಾಗೆ ಅಷ್ಟು ಸುಲಭವಾಗಿರಲ್ಲ ಎಂಬ ಮಾತನ್ನು ಹೇಳಿದ್ದಾರೆ ಸ್ಟೀವ್ ವಾ.
ಕಳೆದ ಬಾರಿಯ ಗೆಲುವಿಗೆ ಇದು ಕಾರಣವಂತೆ!
ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ವಾ ಈ ರೀತಿ ಹೇಳುವುದಕ್ಕೂ ಕಾರಣವಿದೆ. ಕಳೆದ ಸರಣಿಯಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ನಿಶೇಧಕ್ಕೆ ಒಳಗಾಗಿದ್ದ ಕಾರಣ ಆವರು ಭಾರತದ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಮುಂದಿನ ಸರಣಿಯಲ್ಲಿ ಅವರಿಬ್ಬರೂ ಆಡಲಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.
ಉತ್ತಮ ಆಟಗಾರನಿದ್ದಾನೆ ಆಸ್ಟ್ರೇಲಿಯಾದಲ್ಲಿ
ಟೀಮ್ ಇಂಡಿಯಾ ವಿರುದ್ಧದ ಸರಣಿಯ ಬಳಿಕ ಆಸ್ಟ್ರೇಲಿಯಾಗೆ ಮತ್ತೋರ್ವ ಉತ್ತಮ ಆಟಗಾರ ಸಿಕ್ಕಿದ್ದಾನೆ. ಆತನೆ ಮರ್ನಾಸ್ ಲ್ಯಾಬುಶೈನ್. ಆಸ್ಟ್ರೇಲಿಯಾದಲ್ಲಿ ಮರ್ನಾಸ್ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ ಎಂದು ಸ್ಟೀವ್ ವಾ ಹೇಳಿದ್ದಾರೆ.
ಡೇ ನೈಟ್ ಪಂದ್ಯದ ಅನುಭವ
ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಫೇವರೀಟ್ ತಂಡ ಎನಿಸಲು ಸ್ಟೀವ್ ವಾ ಮತ್ತೊಂದು ಪ್ರಮುಖ ವಿಚಾರವನ್ನು ತಿಳಿಸಿದ್ದಾರೆ. ಆಸ್ಟ್ರೇಲಿಯಾಗೆ ತನ್ನ ನೆಲದ ಪಿಚ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅರಿವಿದೆ ಎಂದಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಹಲವು ಡೇ-ನೈಟ್ ಪಂದ್ಯಗಳಲ್ಲಿ ಆಡಿದ ಅನುಭವವೂ ಆಸ್ಟ್ರೇಲಿಯಾಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಟೀಮ್ ಇಂಡಿಯಾದಲ್ಲಿ ದೊಡ್ಡ ದೌರ್ಬಲ್ಯವಿಲ್ಲ
ಇದೇ ಸಂದರ್ಭದಲ್ಲಿ ಸ್ಟೀವ್ ವಾ ಟೀಮ್ ಇಂಡಿಯಾವನ್ನೂ ಹೊಗಳಿದ್ದಾರೆ. ಟೀಮ್ ಇಂಡಿಯಾ ಸದ್ಯ ಹೇಳಿಕೊಳ್ಳುವಂತಾ ದೌರ್ಬಲ್ಯವನ್ನು ಹೊಂದಿಲ್ಲ ಹೀಗಾಗಿ ಈ ಸರಣಿ ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂಬ ಮಾತನ್ನು ಸ್ಟೀವ್ ವಾ ಹೇಳಿದ್ದಾರೆ.
ಆಸ್ಟ್ರೇಲಿಯಾಗೆ ಉತ್ತಮ ನಾಯಕ
ಇದೇ ಸಂದರ್ಭದಲ್ಲಿ ಸ್ಟೀವ್ ವಾ ಆಸ್ಟ್ರೇಲಿಯಾ ನಾಯಕತ್ವದ ಬಗ್ಗೆಯೂ ಮಾತನಾಡಿದ್ದಾರೆ. ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ಉತ್ತಮ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ಹೀಗಾಗಿ ನಾಯಕತ್ವದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ಸ್ಟೀವ್ ವಾ ಹೇಳಿದ್ದಾರೆ.