ನನ್ನಲ್ಲಿನ್ನೂ ಸಾಕಷ್ಟು ಕ್ರಿಕೆಟ್ ಉಳಿದುಕೊಂಡಿದೆ
ಕ್ರಿಕ್ ಇನ್ಫೋ ಜೊತೆಗೆ ಮಾತನಾಡಿದ ಸಂದರ್ಭದಲ್ಲಿ ಕರ್ನಾಟಕದ ರಾಬಿನ್ ಉತ್ತಪ್ಪ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಚುಟುಕು(ಟಿ20 ಕ್ರಿಕೆಟ್) ಮಾದರಿಯಲ್ಲಿ ಟೀಮ್ ಇಂಡಿಯಾಗೆ ಮತ್ತೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಫಿನಿಷರ್ ಆಗಿ ಬರುವೆ
ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಮಡಿದ್ದ ಸದರ್ಭದಲ್ಲಿ ಉತ್ತಪ್ಪ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಈಗ ಉತ್ತಪ್ಪ ಆರಂಭಿಕ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ. ಟೀಮ್ ಇಂಡಿಯಾಗೆ ಉತ್ತಮ ಫಿನಿಷರ್ ಆಗಬಲ್ಲೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಫಿನಿಷರ್ ಆಗಿಯೇ ಕಮ್ಬ್ಯಾಕ್ ಮಾಡುತ್ತೇನೆ ಎಂದಿದ್ದಾರೆ ರಾಬಿನ್ ಉತ್ತಪ್ಪ.
2015ರಿಂದ ಟೀಮ್ ಇಂಡಿಯಾದಲ್ಲಿ ಅವಕಾಶವಿಲ್ಲ
ಕರ್ನಾಟಕದ ಅನುಭವಿ ಆಟಗಾರ 2011ರಿಂದ ಈವರೆಗೆ ಟೀಮ್ ಇಂಡಿಯಾ ಪರವಾಗಿ ಪರ 8 ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.2015ರ ಜೂಲೈನಲ್ಲಿ ಜಿಂಬಾಬ್ವೆ ಪ್ರವಾಸದ ವೇಳೆ ಕೊನೆಯದಾಗಿ ಭಾರತ ತಂಡದ ಪರವಾಗಿ ಆಡಿದ್ದರು.
ಕೆಕೆಆರ್ನಲ್ಲಿ ಉತ್ತಪ್ಪ ಮಿಂಚು
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಕೆಆರ್ ಸೇರಿದಂತೆ ಪ್ರಮುಖ ತಂಡಗಳ ಪರ ಆಡಿ ಮಿಂಚಿರುವ ಉತ್ತಪ್ಪ, ಐಪಿಎಲ್ 2020 ಟೂರ್ನಿ ಸಲುವಾಗಿ ಕಳೆದ ಡಿಸೆಂಬರ್ನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದರು.
ಟಿ20 ಕ್ರಿಕೆಟ್ ಮೇಲೆ ಚಿತ್ತ
'' ನಾನು ಯಾವಾಗಲು ಸ್ಪರ್ಧಾತ್ಮಕವಾಗಿರಲು ಬಯಸುತ್ತೇನೆ. ನನ್ನಲ್ಲಿ ಇನ್ನೂ ಆಟವಿದೆ, ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡಲು ಬಯಸುತ್ತೇನೆ. ನನ್ನಲ್ಲಿ ಮತ್ತೊಂದು ವಿಶ್ವಕಪ್ ಆಡುವ ಸಾಮರ್ಥ್ಯ ಉಳಿದಿದೆ ಎಂದು ಪ್ರಾಮಾಣಿಕವಾಗಿ ನಂಬಿದ್ದೇನೆ. ಇದನ್ನು ಸಾಧಿಸುವ ಪ್ರಯತ್ನದಲ್ಲಿದ್ದೇನೆ, ಪ್ರಮುಖವಾಗಿ ಟಿ20 ಕ್ರಿಕೆಟ್ನಲ್ಲಿ," ಎಂದು ಉತ್ತಪ್ಪ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಉತ್ತಪ್ಪಗೆ ಉಳಿದಿರುವ ಕಡೇಯ ಅವಕಾಶ
ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗನಾಗಿರುವ ರಾಬಿನ್ ಉತ್ತಪ್ಪ ತಾವು ಹೇಳಿಕೊಂಡಂತೆ ತಂಡದಲ್ಲಿ ಸ್ಥಾನವನ್ನು ಗಳಿಸಿಕೊಳ್ಳಬೇಕಾದರೆ ದಾರಿ ಸುಲಭವಿಲ್ಲ. ಸದ್ಯ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಐಪಿಎಲ್ ನಡೆಯುವುದೇ ಅನುಮಾನವೆನಿಸಿದೆ. ಐಪಿಎಲ್ ನಡೆಯದ ಹೊರತಾಗಿ ಬೇರೆ ದಾರಿ ಉತ್ತಪ್ಪ ಮುಂದಿಲ್ಲ. ಐಪಿಎಲ್ ನಡೆದರೂ ಅಮೋಘ ಪ್ರದರ್ಶನವನ್ನು ನೀಡಿ ಆಯ್ಕೆಗಾರರ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡಬೇಕು.