ಭಾರೀ ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಮಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರ ಆರಂಭವಾಗಲಿರುವ ಈ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ಬೆಂಬಲಕ್ಕೆ ಅನುಭವಿ ದಿನೇಶ್ ಕಾರ್ತಿಕ್ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಪೂಜಾರ ಅವರ ಸ್ಟ್ರೇಕ್ರೇಟ್ ಬಗ್ಗೆ ಜನರು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಎಂದಿದ್ದಾರೆ.
"ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟ್ರೈಕ್ರೇಟ್ ಸಂಪೂರ್ಣ ಅಸಂಬದ್ದ. ನೀವು ಟೆಸ್ಟ್ ಪಂದ್ಯಗಳ ಫಳಿತಾಂಶವನ್ನು ಗಮನಿಸಿದರೆ ಬಹುತೇಕ 4 ದಿನಕ್ಕೆ ಅಂತ್ಯವಾಗಿರುತ್ತದೆ. ಅದರ ಪ್ರಮಾಣ 80-82 ಶೇಕಡಾದಷ್ಟು ಇರುತ್ತದೆ. ಹಾಗಿದ್ದಾಗ ಸ್ಟ್ರೈಕ್ರೇಟ್ನ ಬಗ್ಗೆ ತಲೆಕೆಡಿಸಿಕೊಳ್ಳವು ಅಗತ್ಯವೇನಿದೆ? ಎಷ್ಟೇ ಕಡಿಮೆ ಸ್ಟ್ರೈಕ್ರೇಟ್ ಇದ್ದರೂ ಆತನನ್ನು ಆತನ ಶೈಲಿಗೆ ಆಡಲು ಬಿಡುವುದು ಸೂಕ್ತ. ಈ ಮೂಲಕ ಸುದೀರ್ಘ ಇನ್ನಿಂಗ್ಸ್ ಆಡಿ ಭಾರತವನ್ನು ಗೆಲ್ಲಿಸಲು ಸಾಧ್ಯವಾಗಲಿದೆ" ಎಂದು ದಿನೇಶ್ ಕಾರ್ತಿಕ್ ಚೇತೇಶ್ವರ್ ಪೂಜಾರಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
WTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದು
"ಪೂಜಾರ ಅವರಿಂದ ಹೆಚ್ಚಿನ ರನ್ಗಳು ಬಂದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅವರು ಆಡಿದ ಅಂತಿಮ ಪಂದ್ಯವನ್ನು ಗಮನಿಸಿದರೆ ಅವರು ಶ್ರೇಷ್ಠ ಬೌಲರ್ಗಳ ವಿರುದ್ಧ ಆಡುತ್ತಿದ್ದರು. ಅಲ್ಲಿ ತಂಡ 200 ರನ್ಗಳಿಸಲು ಒದ್ದಾಡುತ್ತಿದ್ದಾಗ ಪೂಜಾರ ಅವರಿಂದ ನೀವು ಶತಕವನ್ನು ನಿರೀಕ್ಷಿಸುವುದು ನ್ಯಾಯವಲ್ಲ. ಕಠಿಣ ಸಂದರ್ಭಗಳಲ್ಲಿ ಆಡುತ್ತಿರುವಾಗ ಆಟಗಾರನನ್ನು ಸಮರ್ಥಿಸಿಕೊಳ್ಳುವುದಕ್ಕೆ ಅಂಕಿಅಂಶಗಳು ಮುಖ್ಯವಾಗುವುದಿಲ್ಲ" ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
"ಚೇತೇಶ್ವರ್ ಪೂಜಾರ ಅವರ ಶಕ್ತಿ ಏನೆಂಬುದು ನಮಗೆ ಗೊತ್ತಿದೆ. ಅವರ ಉತ್ಕೃಷ್ಟತೆಯ ಬಗ್ಗೆ ಹಾಗೂ ಸುದೀರ್ಘ ಕಾಲ ಇನ್ನಿಂಗ್ಸ್ ಆಡಬಲ್ಲ ಅವರ ಸಾಮರ್ಥ್ಯದ ಅರಿವು ಕೂಡ ನಮಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಪೂಜಾರ ನಮ್ಮಲ್ಲಿರುವ ದೊಡ್ಡ ಅಸ್ತ್ರ ಎಂಬುದರಲ್ಲಿ ನನಗೆ ಅನುಮಾನಗಳಿಲ್ಲ. ಅವರು 100ಕ್ಕಿಂತ ಹೆಚ್ಚು ರನ್ಗಳಿಸಲು ಎಷ್ಟು ಎಸೆತಗಳನ್ನು ಬಳಸಿಕೊಂಡರು ಎಂಬ ಲೆಕ್ಕಾಚಾರಗಳ ಅಗತ್ಯವಿಲ್ಲ. ಆಟಗಾರನ ಸಾಮರ್ಥ್ಯ, ಗುಣಮಟ್ಟ ಗೊತ್ತಿದ್ದಾಗ ಇವೆಲ್ಲವೂ ಅವಶ್ಯಕವಾಗುವುದಿಲ್ಲ. ಇಂತಾ ಸಂದರ್ಭದಲ್ಲಿ ನಾವು ಅಂತಾ ಆಟಗಾರ ಶತಕವನ್ನು ಗಳಿಸದಿದ್ದಾಗಲೂ ಬೆಂಬಲವನ್ನು ನೀಡಬೇಕು" ಎಂದು ದಿನೇಶ್ ಕಾರ್ತಿಕ್ ಚೇತೇಶ್ವರ್ ಪೂಜಾರ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ.