ಮುಂಬೈ, ಆಗಸ್ಟ್ 17: ಕರ್ನಾಟಕದ ಆಲ್ ರೌಂಡರ್ ಆಟಗಾರ ಸ್ಟುವರ್ಟ್ ಬಿನ್ನಿ ಅವರಿಗೆ ಟೀಂ ಇಂಡಿಯಾದ ಟೆಸ್ಟ್ ತಂಡ ಸೇರುವಂತೆ ಬಿಸಿಸಿಐನಿಂದ ಕರೆ ಬಂದಿದೆ. ಮೂರು ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಬಿನ್ನಿ ಅವರು ತಂಡದ ಜೊತೆ ಕೂಡಿಕೊಳ್ಳಲಿದ್ದಾರೆ.
ಆಲ್ ರೌಂಡರ್ ಬಿನ್ನಿ ಅವರನ್ನು ಕೂಡಲೇ ಶ್ರೀಲಂಕಾಕ್ಕೆ ತೆರಳಿ ಅಭ್ಯಾಸ ನಿರತರಾಗುವಂತೆ ಸೂಚಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಸೂಚಿಸಿತ್ತು.
ಅದರೆ, ಯಾವ ಆಟಗಾರನ ಬದಲಿಗೆ ಬಿನ್ನಿ ಅವರನ್ನು ಕರೆಸಿಕೊಳ್ಳಲಾಗುತ್ತಿದೆ ಎಂಬುದನ್ನು ಹೇಳಿರಲಿಲ್ಲ. 16ನೇ ಆಟಗಾರರನಾಗಿ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಆರಂಭಿಕ ಆಟಗಾರ ಮುರಳಿ ವಿಜಯ್ ಅವರು ಸ್ನಾಯುಸೆಳೆತಕ್ಕೆ ಒಳಗಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.[ಶ್ರೀಲಂಕಾ ಟೆಸ್ಟ್ ಸರಣಿಯಿಂದ ಶಿಖರ್ ಧವನ್ ಔಟ್]
ಗುರುವಾರ (ಆಗಸ್ಟ್ 20)ದಿಂದ ಕೊಲಂಬೋದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ವಿಜಯ್ ಲಭ್ಯರಿರುತ್ತಾರೆ. ಈ ನಡುವೆ ಮೂರು ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಬಿನ್ನಿ ಅವರು ತಂಡಕ್ಕೆ ಹೆಚ್ಚಿನ ಬಲ ತರುವುದರಲ್ಲಿ ಸಂಶಯವಿಲ್ಲ.
ಮೊದಲ ಟೆಸ್ಟ್ ಪಂದ್ಯವನ್ನು 63 ರನ್ ಗಳಿಂದ ಸೋತಿರುವ ವಿರಾಟ್ ಕೊಹ್ಲಿ ಪಡೆ ಈಗ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿಂದಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 20ರಿಂದ ಕೊಲಂಬೋದಲ್ಲಿ ಆರಂಭವಾಗಲಿದೆ. (ಒನ್ ಇಂಡಿಯಾ ಸುದ್ದಿ)