ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕ, ಹಿಟ್ಮ್ಯಾನ್ ರೋಹಿತ್ ಶರ್ಮಾ ಆಯ್ಕೆಯಾಗದಿರುವುದು ಅವರ ಅಭಿಮಾನಿಗಳಲ್ಲಿ ಸಹಜವಾಗಿ ಬೇಸರ ಮೂಡಿಸಿದೆ. ಇದರ ನಡುವೆ ಅವರು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗದೇ ಇರುವ ಕುರಿತು ಸಾಕಷ್ಟು ಪ್ರಶ್ನೆಗಳು ಸೃಷ್ಟಿಯಾಗಿವೆ.
ಭಾರತದ ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಆಯ್ಕೆ ಮಾಡದೇ ಇರುವುದರ ಕುರಿತು ಯಾವುದೇ ಸ್ಪಷ್ಟತೆಯನ್ನು ನೀಡಲಾಗಿಲ್ಲ. ಹೀಗಾಗಿ ಇಡೀ ವಿಷಯದ ಬಗ್ಗೆ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಸ್ಪಷ್ಟೀಕರಣವನ್ನು ಕೋರಿದ್ದಾರೆ ಮತ್ತು ತಂಡದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದು ಅಭಿಮಾನಿಯಾಗಿ ಅವರ ಹಕ್ಕು ಎಂದು ಹೇಳಿದರು.
"ನಾನು ಯಾವುದೇ ಸಾಮಾಜಿಕ ಜಾಲತಾಣದಲ್ಲಿಲ್ಲ, ನನಗೆ ಗೊತ್ತಿಲ್ಲ, ಆದರೆ ಮುಂಬೈ ಇಂಡಿಯನ್ಸ್ ಪರವಾಗಿ ರೋಹಿತ್ ಅಭ್ಯಾಸ ಮಾಡುತ್ತಿರುವ ಬಗ್ಗೆ ನನಗೆ ತಿಳಿದಿದೆ. ಹಾಗಾಗಿ ಇದು ಯಾವ ರೀತಿಯ ಗಾಯ ಎಂದು ನನಗೆ ತಿಳಿದಿಲ್ಲ. ಏಕೆಂದರೆ ಗಾಯವು ಗಂಭೀರವಾಗಿದ್ದರೆ ಅವರನ್ನು ಪ್ಯಾಡ್ ಅಪ್ ಮಾಡಲಾಗುವುದಿಲ್ಲ "ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದ ರೋಹಿತ್ ಶರ್ಮಾ ಫೋಟೋ
ಮಾತನ್ನು ಮುಂದುವರಿಸಿರುವ ಗವಾಸ್ಕರ್, "ಆದ್ದರಿಂದ ನಾವು ಟಿ 20 ಮತ್ತು ಏಕದಿನ ಆಟಗಾರರಿಗಾಗಿ ನವೆಂಬರ್ ಅಂತ್ಯದಲ್ಲಿ ಪ್ರಾರಂಭವಾಗುವ ಪ್ರವಾಸದ ಬಗ್ಗೆ ಮಾತನಾಡುತ್ತಿದ್ದೇವೆ ಆದರೆ ಟೆಸ್ಟ್ ಪಂದ್ಯಗಳು ಡಿಸೆಂಬರ್ 17 ರಂದು ಪ್ರಾರಂಭವಾಗುತ್ತವೆ, ಅದು ಒಂದೂವರೆ ತಿಂಗಳು ದೂರದಲ್ಲಿದೆ. ಇದರ ಜೊತೆಗೆ ಅವನು(ರೋಹಿತ್) ಮುಂಬೈ ಇಂಡಿಯನ್ಸ್ ಪರವಾಗಿ ಅಭ್ಯಾಸ ಮಾಡುತ್ತಿದ್ದರೆ ಅದು ಯಾವ ರೀತಿಯ ಗಾಯ ಎಂದು ಪ್ರಾಮಾಣಿಕವಾಗಿ ತಿಳಿದಿಲ್ಲ. " ಎಂದು ಲಿಟ್ಲ್ ಮಾಸ್ಟರ್ ಅನುಮಾನ ವ್ಯಕ್ತಪಡಿಸಿದ್ದಾರೆ.
''ತಂಡದಲ್ಲಿ ರೋಹಿತ್ಗೆ ಏಕೆ ಅವಕಾಶ ನೀಡಲಾಗಿಲ್ಲ ಎಂಬುದರ ಪಾರದರ್ಶಕತೆ ಇದ್ದರೆ ಎಲ್ಲರಿಗೂ ಸಹಾಯವಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಭಾರತೀಯ ಕ್ರಿಕೆಟ್ ಅಭಿಮಾನಿ ಎಲ್ಲಕ್ಕಿಂತ ಹೆಚ್ಚಾಗಿ ತಿಳಿದುಕೊಳ್ಳಲು ಅರ್ಹರು'' ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಎದುರಾಳಿಗಳಿಗೆ ಯಾವುದೇ ಮಾನಸಿಕ ಪ್ರಯೋಜನವನ್ನು ನೀಡಲು ಬಯಸುವುದಿಲ್ಲ, ಹೀಗಾಗಿಯೇ ಆತನನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸುತ್ತಿರಬಹುದು ಎಂದು ಸುನಿಲ್ ಗವಾಸ್ಕರ್ ಅಂದಾಜಿಸಿದ್ದಾರೆ.
ಏತನ್ಮಧ್ಯೆ, ಭಾರತದ ಆಸ್ಟ್ರೇಲಿಯಾ ಪ್ರವಾಸವು ನವೆಂಬರ್ 27 ರಂದು ನಡೆಯುವ ಮೊದಲ ಏಕದಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಪ್ರವಾಸದ ಅಂತಿಮ ಪಂದ್ಯವು ಜನವರಿ 19 ರಂದು ಕೊನೆಗೊಳ್ಳುತ್ತದೆ ಮತ್ತು ಭಾರತದ ಟೆಸ್ಟ್ ಸರಣಿಯು ಆ ದಿನವೇ ಕೊನೆಗೊಳ್ಳುತ್ತದೆ.