ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಎರಡು ಇನ್ನಿಂಗ್ಸ್ನಲ್ಲಿಯೂ ಪೂಜಾರ ಸಂಪೂರ್ಣವಾಗಿ ವಿಫಲರಾಗಿದ್ದರು.
ಸೌಥಾಂಪ್ಟನ್ನ ಏಜಸ್ಬೌನ್ ಅಂಗಳದಲ್ಲಿ ನಡೆದ ಐತಿಹಾಸಿಕ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 8 ರನ್ಗಳಿಸಿದ್ದರೆ ಎರಡನೇ ಇನ್ನಿಂಗ್ಸ್ನಲ್ಲಿ 15 ರನ್ಗಳಿಸಿದ್ದರು. ಪೂಜಾರ ರನ್ಗಳಿಸದ ವಿಚಾರವಾಗಿ ಮಾತ್ರವಲ್ಲ ಎರಡೂ ಇನ್ನಿಂಗ್ಸ್ಗಳಲ್ಲಿ 19ಕ್ಕಿಂತ ಕಡಿಮೆ ಸ್ಟ್ರೈಕ್ರೇಟ್ ಹೊಂದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ಗೆ 8 ವಿಕೆಟ್ಗಳಿಂದ ಶರಣಾಗಿತ್ತು.
'ಗ್ರೇಟ್ವಾಲ್-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!
"ನಾವು ನ್ಯೂಜಿಲೆಂಡ್ ಕೂಡ ಹೇಗೆ ಬ್ಯಾಟಿಂಗ್ ಮಾಡಿತು ಎಂಬುದನ್ನು ಗಮನಿಸಬೇಕು. ಪರಿಸ್ಥಿತಿ ಬ್ಯಾಟಿಂಗ್ ನಡೆಸಲು ಅನುಕೂಲಕರವಾಗಿರಲಿಲ್ಲ. ಅದು ಬೌಲಿಂಗ್ಗೆ ಅನುಕೂಲಕರವಾಗಿತ್ತು. ಎರಡೂ ಇನ್ನಿಂಗ್ಸ್ಗಳಲ್ಲಿ ಕಾನ್ವೆ ಹಾಗೂ ವಿಲಿಯಮ್ಸನ್ ಬ್ಯಾಟಿಂಗ್ ಮಾಡಿದ ರೀತಿಯನ್ನು ನೀವು ಗಮನಿಸಬಹುದು" ಎಂದು ಸುನಿಲ್ ಗವಾಸ್ಕರ್ ಇಂಡಿಯಾ ಟುಡೇಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಮ್ ಇಂಡಿಯಾ ಪರವಾಗಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ ಚೇತೇಶ್ವರ್ ಪೂಜಾರ. ಆದರೆ ಇತ್ತೀಚೆಗೆ ಪೂಜಾರ ಪ್ರದರ್ಶನ ತುಂಬಾ ಕಳಪೆಯಾಗಿದೆ. ಈ ವರ್ಷದಲ್ಲಿ ಪೂಜಾರ ಅವರ ಸರಾಸರಿ 30ರ ಆಸುಪಾಸಿನಲ್ಲಿದೆ. ಸ್ಟ್ರೈಕ್ ರೇಟ್ 32ಕ್ಕಿಂತ ಕೆಳಗಿದೆ. ಇನ್ನೊಂದು ಪ್ರಮುಖ ಸಂಗತಿಯೆಂದರೆ ಪೂಜಾರ ಕಳೆದ ಎರಡು ವರ್ಷಗಳಲ್ಲಿ ಒಂದು ಶತಕವನ್ನು ಕೂಡ ಬಾರಿಸಿಲ್ಲ.
'ಅವರು ನಮ್ಮ ಪಾಸ್ಪೋರ್ಟ್ ಕಿತ್ತುಕೊಂಡು ಗದೆ ಎಲ್ಲಿದೆ ಎಂದರು': ವ್ಯಾಗ್ನರ್
ಆದರೆ ಸುನಿಲ್ ಗವಾಸ್ಕರ್ ಪೂಜಾರ ಬ್ಯಾಟಿಂಗ್ ಶೈಲಿಯ ಬಗ್ಗೆ ಯಾವುದೇ ಅಸಮಾಧಾನವನ್ನು ವ್ಯಕ್ತಪಡಿಸಿಲ್ಲ. "ರಾಸ್ ಟೇಲರ್ ಬ್ಯಾಟಿಂಗ್ ಆರಂಭಿಸಿದ ರೀತಿ ನೋಡಿ. ಅವರು ಕೂಡ ನಿಧಾನಗತಿಯಲ್ಲಿಯೇ ಆರಂಭಿಸಿದರು. ಆದರೆ ನೀವು ಪೂಜಾರ ಅವರತ್ತ ಮಾತ್ರವೇ ಬೆರಳು ತೋರಿಸಿದರೆ ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ ಸುನಿಲ್ ಗವಾಸ್ಕರ್.