ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಬೌಲಿಂಗ್ ವೈಫಲ್ಯದ ಕುರಿತಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ರು. ಇದ್ರ ಜೊತೆಗೆ ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆದ ಭಾರತ, ಮೊದಲ ಏಕದಿನ ಪಂದ್ಯದಲ್ಲಿ ಬೌಲರ್ಗಳನ್ನ ಬಳಸಿಕೊಂಡ ರೀತಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಪಾರ್ಲ್ನ ಬೊಲ್ಯಾಂಡ್ ಪಾರ್ಕ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ 31 ರನ್ಗಳ ಗೆಲುವನ್ನ ಸಾಧಿಸಿದೆ. ವೇಗಿ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದ್ದು ಬಿಟ್ರೆ, ಬೇರೆ ಯಾವೊಬ್ಬ ಬೌಲರ್ ಕೂಡ ಅತ್ಯಂತ ಯಶಸ್ವಿ ಎನಿಸಲಿಲ್ಲ. ಭುವನೇಶ್ವರ್ ಕುಮಾರ್, ಯುಜವೇಂದ್ರ ಚಹಾಲ್ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್ ಇಲ್ಲದೆ ನಿರಾಸೆ ಮೂಡಿಸಿದ್ರು.
ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ಒಡಿಐ ಪಂದ್ಯವನ್ನಾಡಿದ ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ಗೆ ಒಂದೇ ಒಂದು ಓವರ್ ಬೌಲಿಂಗ್ ಕೊಡದೇ ಇರುವುದಕ್ಕೆ ಈಗಾಗಲೇ ಸಾಕಷ್ಟು ಟೀಕೆ ಕೇಳಿಬಂದಿದೆ. ಗೌತಮ್ ಗಂಭೀರ್, ಆಕಾಶ್ ಚೋಪ್ರಾ ನೇರವಾಗಿಯೇ ವಾಗ್ದಾಳಿ ನಡೆಸಿದ್ರು. ಆದ್ರೀಗ ಮಾಜಿ ಕ್ರಿಕೆಟಿಗ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್, ಕೆ.ಎಲ್ ರಾಹುಲ್ ನಾಯಕತ್ವದ ತಂತ್ರಗಳ ಕುರಿತು ಪ್ರಶ್ನಿಸಿದ್ದಾರೆ.
ಐಪಿಎಲ್ನಲ್ಲಿ ಕೆಕೆಆರ್ ಪರ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ವೆಂಕಟೇಶ್ ಅಯ್ಯರ್, ಬೌಲಿಂಗ್ನಲ್ಲೂ ತಂಡಕ್ಕೆ ಆಧಾರವಾಗಿದ್ರು. ಆದ್ರೆ ಚೊಚ್ಚಲ ಏಕದಿನ ಪಂದ್ಯದಲ್ಲಿ ಆತನನ್ನ ಆಲ್ರೌಂಡರ್ ಆಗಿ ಪ್ಲೇಯಿಂಗ್ 11ನಲ್ಲಿ ಸೇರಿಸಿಕೊಂಡ ಬಳಿಕ ಆತನಿಗೆ ಒಂದೇ ಒಂದು ಓವರ್ ಬೌಲಿಂಗ್ ಕೊಡದೇ ಇರುವುದು ಯಾವ ರೀತಿಯ ಸ್ಟ್ರಾಟರ್ಜಿ ಎಂದು ರಾಹುಲ್ರನ್ನ ಗವಾಸ್ಕರ್ ಟೀಕಿಸಿದ್ದಾರೆ.
'' ವೆಂಕಟೇಶ್ ಅಯ್ಯರ್ ಒಮ್ಮೆಯೂ ಬೌಲಿಂಗ್ ಮಾಡದೇ ಇರುವುದಕ್ಕೆ ನಾಯಕನ ಬಳಿ ಮಾತ್ರ ಉತ್ತರವಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಹೆಸರು ಮಾಡಿರುವ ಯುವ ಆಟಗಾರ ಭಾರತ ತಂಡಕ್ಕೆ ಸೇರಿದ್ದಾರೆ. ಎದುರಾಳಿ ತಂಡಕ್ಕೆ ಅವರ ಬಗ್ಗೆ ಹೆಚ್ಚು ತಿಳಿದಿಲ್ಲ. ಹೀಗಿರುವಾಗ ಒಂದೆರಡು ಓವರ್ಗಳನ್ನ ನೀಡಿದ್ದರೆ ಆತನಿಗೂ ಬ್ಯಾಟರ್ಗಳ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ'' ಎಂದು ಸುನಿಲ್ ಗವಾಸ್ಕರ್ ಸ್ಪೋರ್ಟ್ಸ್ ಟಾಕ್ನಲ್ಲಿ ಮಾತನಾಡುತ್ತಾ ಹೇಳಿದರು.
'' ಒಂದು ವೇಳೆ ಆತನಿಗೆ ಕೆಲವು ಓವರ್ ನೀಡಿದ್ದರೆ, ಏನು ಬೇಕಾದರೂ ಆಗುವ ಸಾಧ್ಯತೆಯಿತ್ತು. ಒಂದು ವೇಳೆ ಆತ 20 ರಿಂದ 25 ರನ್ ಬಿಟ್ಟುಕೊಟ್ಟಿದ್ದರೂ ಅಷ್ಟು ದೊಡ್ಡ ಮಟ್ಟಿಗೆ ತೊಂದರೆಯಾಗುತ್ತಿರಲಿಲ್ಲ'' ಎಂದು ಮಾಜಿ ವಿಶ್ವಕಪ್ ವಿಜೇತ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ವೆಂಕಟೇಶ್ ಅಯ್ಯರ್ ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಚುಟುಕು ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆದ ಆ ಪಂದ್ಯಗಳಲ್ಲೂ ಕೂಡ ವೆಂಕಟೇಶ್ ಅಯ್ಯರ್ಗೆ ಬೌಲಿಂಗ್ ನೀಡಲಿಲ್ಲ. ಆದ್ರೀಗ ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ವೆಂಕಟೇಶ್ ಅಯ್ಯರ್ ತಮ್ಮ ಚೊಚ್ಚಲ ಪಂದ್ಯವನ್ನ ಸ್ಮರಿಸಿಕೊಳ್ಳುವಷ್ಟು ನೀವು ಅವಕಾಶ ಮಾಡಿಕೊಡಲಿಲ್ಲ ಎಂದು ಮಾಜಿ ಕ್ರಿಕೆಟಿಗ ಗವಾಸ್ಕರ್ ಟೀಕಿಸಿದ್ದಾರೆ.
297 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಪರ ಶಿಖರ್ ಧವನ್ 79 ರನ್, ವಿರಾಟ್ ಕೊಹ್ಲಿ 51 ರನ್ ಕಲೆಹಾಕಿ ಎರಡನೇ ವಿಕೆಟ್ಗೆ 92 ರನ್ಗಳ ಜೊತೆಯಾಟವಾಡಿದ್ರು. ಆದ್ರೆ ಈ ಜೋಡಿ ಬೇರ್ಪಟ್ಟ ಬಳಿಕ ತಂಡಕ್ಕೆ ಮಧ್ಯಮ ಕ್ರಮಾಂಕ ಆಧಾರವಾಗಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (16), ಶ್ರೇಯಸ್ ಅಯ್ಯರ್ (17), ವೆಂಕಟೇಶ್ ಅಯ್ಯರ್ (2) ರನ್ ದಾಖಲಿಸುವ ಮೂಲಕ ಭಾರತದ ಮಧ್ಯಮ ಕ್ರಮಾಂಕವು ಕುಸಿಯಲ್ಪಟ್ಟಿತು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ್ರೂ ಸಹ ಅದಾಗಲೇ ಸಮಯ ಮೀರಿತ್ತು. ಪರಿಣಾಮ ಭಾರತ 8 ವಿಕೆಟ್ ನಷ್ಟಕ್ಕೆ 265 ರನ್ಗಳಿಸಲಷ್ಟೇ ಸಾಧ್ಯವಾಯಿತು.