ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಆಟಗಾರ ದಿನೇಶ್ ಕಾರ್ತಿಕ್. ಫಿನಿಷರ್ ಆಗಿ ಕಣಕ್ಕಿಳಿದು ಒತ್ತಡದ ಸಂದರ್ಭದಲ್ಲಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡುವುದನ್ನು ದಿನೇಶ್ ಕಾರ್ತಿಕ್ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಟಿ20 ವಿಶ್ವಕಪ್ನ ತಂಡಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಜೋರಾಗಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದಿಂದ ಹೊರಬಿದ್ದು ಸುಮಾರು ಮಾರು ವರ್ಷಗಳಾಗಿದೆ. ಐಪಿಎಲ್ ಹೊರತುಪಡಿಸಿದರೆ ಈ ಅವಧಿಯಲ್ಲಿ ಕಾಮೆಂಟೇಟರ್ ಆಗಿ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ಈ ಸಂದರ್ಭದಲ್ಲಿ ದಿಗ್ಗಜ ಸುನಿಲ್ ಗವಾಸ್ಕರ್ ಅವರೊಂದಿಗೂ ಸಾಕಷ್ಟು ಕಾಲ ಕಳೆದಿದ್ದಾರೆ ಅನುಭವಿ ಆಟಗಾರ. ಹೀಗಾಗಿ ದಿನೇಶ್ ಕಾರ್ತಿಕ್ ಅವರನ್ನು ಹತ್ತಿರದಿಂದ ಬಲ್ಲ ಗವಾಸ್ಕರ್ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತೀಯ ತಂಡದಲ್ಲಿ ದಿನೇಶ್ ಕಾರ್ತಿಕ್ಗೆ ಸ್ಥಾನ ದೊರೆಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬಲವಾದ ಕಾರಣವನ್ನು ಕೂಡ ನೀಡಿದ್ದಾರೆ ಗವಾಸ್ಕರ್.
ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ
"ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಸಂದರ್ಭದಲ್ಲಿ ನಾವು ಜೊತೆಯಾಗಿ ಕಾಮೆಂಟರಿ ಮಾಡಿದ್ದೆವು. ಅದಕ್ಕೂ ಮುನ್ನ ನಾವು ಕ್ವಾರಂಟೈನ್ನಲ್ಲಿದ್ದಾಗಲೂ ಸಾಕಷ್ಟು ಉತ್ತಮ ಸಮಯವನ್ನು ಜೊತೆಯಾಗಿ ಕಳೆದಿದ್ದೇವೆ. ಆಗಿನಿಂದಲೂ ನನಗೆ ಆತ 2021 ಹಾಗೂ 2022ರ ಟಿ20 ವಿಶ್ವಕಪ್ನ ತಂಡದಲ್ಲಿ ಸ್ಥಾನ ಪಡೆಯಲು ಎಷ್ಟು ಪರಿಶ್ರಮ ಪಡುತ್ತಿದ್ದಾರೆ ಎಂಬುದು ಗೊತ್ತಿದೆ. 2021ರ ಟಿ20 ವಿಶ್ವಕಪ್ಗೆ ಆತ ಆಯ್ಕೆಯಾಗಿರಲಿಲ್ಲ. ಆದರೆ ಐಪಿಎಲ್ 2022ರಲ್ಲಿ ಆತ ನೀಡುತ್ತಿರುವ ಪ್ರದರ್ಶನವನ್ನು ನೋಡಿದಾಗ ನಾನು ಆಯ್ಕೆಗಾರನಾಗಿದ್ದರೆ ಖಂಡಿತವಾಗಿಯೂ ಆತನನ್ನು ಆಯ್ಕೆ ಮಾಡುತ್ತಿದ್ದೆ" ಎಂದಿದ್ದಾರೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್.
"ಫಾರ್ಮ್ ಎಂಬುದು ಬಹಳ ಮುಖ್ಯವಾಗುತ್ತದೆ. ಫಾರ್ಮ್ ಎಂಬುದು ತಾತ್ಕಾಲಿಕ, ಕ್ಲಾಸ್ ಶಾಶ್ವತ ಎಂಬ ಒಂದು ಮಾತಿದೆ. ಆದರೆ ಕ್ಲಾಸ್ ಆಟಗಾರನೋರ್ವ ಫಾರ್ಮ್ನಲ್ಲಿದ್ದಾಗ ನೀವು ಆತನನ್ನು ಆಯ್ಕೆ ಮಾಡಲೇಬೇಕಾಗುತ್ತದೆ. ಆತವ ನೀಡುತ್ತಿರುವ ಪ್ರದರ್ಶನವನ್ನು ನೋಡಿದರೆ ನೀವು ಆತನನ್ನು ಖಂಡಿತವಾಗಿಯೂ ಆಯ್ಕೆ ಮಾಡಲೇಬೇಕಿದೆ. ಆತನನ್ನು ಪೂರ್ಣಪ್ರಮಾಣದ ಬ್ಯಾಟರ್ ಆಗಿ ನೀವು ಪರಿಗಣಿಸಬೇಕಿದ್ದು ವಿಕೆಟ್ ಕೀಪರ್ ಹೆಚ್ಚುವರಿ ಆಯ್ಕೆಯಾಗಿದೆ" ಎಂದಿದ್ದಾರೆ ಗವಾಸ್ಕರ್.
ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ತಮ್ಮ ವೃತ್ತಿ ಜೀವನದುದ್ದಕ್ಕೂ ಟೀಮ್ ಇಂಡಿಯಾದಲ್ಲಿ ಸ್ಥಿರ ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ಆದರೆ ವೃತ್ತಿ ಜೀವನದ ಅಂತಿ ಘಟ್ಟದಲ್ಲಿರುವಾಗ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿರುವ ಕಾರಣ ಆತನನ್ನು ಮುಂದಿನ ಟಿ20 ವಿಶ್ವಕಪ್ಗೆ ಪರಿಗಣಿಸಬೇಕು ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.
ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?
"ಆತನ ವಯಸ್ಸಿನ ಬಗ್ಗೆ ಯೋಚಿಸಬೇಕಿಲ್ಲ. ಆತ ಬಿಸಿಯಾದ ವಾತಾವರಣದಲ್ಲಿ 20 ಓವರ್ಗಳ ಕಾಲ ಕೀಪಿಂಗ್ ಮಾಡಿದ ನಂತರ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆತನ ಫಾರ್ಮ್ನ ಕಾರಣದಿಂದಾಗಿ ಆತನನ್ನು ಪರಿಗಣಿಸಬೇಕಿದೆ. ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಗಳು ಇದ್ದು ಕೆಎಲ್ ರಾಹುಲ್ ಅತ್ಯುತ್ತಮ ಫಾರ್ಮ್ನಲ್ಲಿದ್ದರೆ ರಿಷಭ್ ಪಂತ್ ಫಾರ್ಮ್ ಮೇಲೆ ಕೆಳಗೆ ಆಗುತ್ತಿದೆ. ಆದರೆ ಆತನನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿದೆ" ಎಂದಿದ್ದಾರೆ ಗವಾಸ್ಕರ್.
ಮುಂದುವರಿಸು ಮಾತನಾಡಿದ ಸುನಿಲ್ ಗವಾಸ್ಕರ್ ಮೂರು ವಿಕೆಟ್ ಕೀಪರ್ಗಳನ್ನು ನೀವು ಆಯ್ಕೆ ಮಾಡಬಾರದು ಎಂದು ಎಲ್ಲೂ ಬರೆದಿಟ್ಟಿಲ್ಲ. ಕೀಪರ್ ಕೂಡ ಆಲ್ರೌಂಡರ್ ಆಗಬಲ್ಲರು. ಹಾಗಾಗಿ ನೀವು ಆತನನ್ನು ಆಲ್ರೌಂಡರ್ ಎಂದು ಪರಿಗಣಿಸಿ ಆಯ್ಕೆ ಮಾಡಿಕೊಳ್ಳಬಹುದು" ಎಂದಿದ್ದಾರೆ ಸುನಿಲ್ ಗವಾಸ್ಕರ್.