ನವದೆಹಲಿ, ಆಗಸ್ಟ್ 9: ನ್ಯಾಯಮೂರ್ತಿ ಲೋಧಾ ಸಮಿತಿ ಸಿದ್ಧಪಡಿಸಿರುವ ಹೊಸ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂಕೋರ್ಟ್ ಕೆಲವು ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ.
'ಒಂದು ರಾಜ್ಯ ಒಂದು ಮತ' ನೀತಿ ಕುರಿತ ಶಿಫಾರಸುಗಳಲ್ಲಿ ಸಡಿಲಗೊಳಿಸಿರುವುದು ಮತ್ತು ಅಧಿಕಾರಿಗಳ ಅಧಿಕಾರಾವಧಿ ಮಿತಿಯ ಮೇಲಿನ ನಿಯಮಗಳಲ್ಲಿ ಬದಲಾಣೆಗಳನ್ನು ಮಾಡಿರುವುದು ಬಿಸಿಸಿಐಗೆ ಕೊಂಚ ನಿರಾಳತೆ ಉಂಟುಮಾಡಿದೆ.
ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ ಅನುರಾಗ್ ಠಾಕೂರ್
ಒಂದು ರಾಜ್ಯ, ಒಂದು ಮತ' ಮಾನದಂಡವನ್ನು ತೆರವುಗೊಳಿಸಿರುವುದರಿಂದ ಗುಜರಾತ್ (ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ) ಹಾಗೂ ಮಹಾರಾಷ್ಟ್ರದ (ಮಹಾರಾಷ್ಟ್ರ, ಮುಂಬೈ, ವಿದರ್ಭ) ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐನಲ್ಲಿ ಸಂಪೂರ್ಣ ಸದಸ್ಯತ್ವ ದೊರಕಿದೆ. ಈ ಹಿಂದೆ ಲೋಧಾ ಸಮಿತಿಯ ಶಿಫಾರಸಿನಂತೆ ಈ ಸಂಸ್ಥೆಗಳ ಸದಸ್ಯತ್ವವನ್ನು ಕೋರ್ಟ್ ರದ್ದುಗೊಳಿಸಿತ್ತು.
ಜತೆಗೆ, ವಿಶ್ವವಿದ್ಯಾಲಯಗಳು, ನ್ಯಾಷನಲ್ ಕ್ರಿಕೆಟ್ ಕ್ಲಬ್ (ಕೋಲ್ಕತ್ತಾ) ಹಾಗೂ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾಗಳ ಪೂರ್ಣ ಸದಸ್ಯತ್ವವನ್ನು ತೆಗೆದುಹಾಕಲಾಗಿತ್ತು. ಈಗ ವಿಶ್ವವಿದ್ಯಾಲಯಗಳಿಗೂ ಮತದಾನದ ಹಕ್ಕು ಮರಳಿ ದೊರಕಲಿದೆ.
ಬಿಸಿಸಿಐ-ಆಡಳಿತ ಸಮಿತಿ ಗುದ್ದಾಟ ತಾರಕಕ್ಕೆ
ಹೊಸ ಸಂವಿಧಾನವನ್ನು ಬಿಸಿಸಿಐ ನಾಲ್ಕುವಾರಗಳಲ್ಲಿ ಹಾಗೂ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು 30 ದಿನಗಳಲ್ಲಿ ಅಳವಡಿಸಿಕೊಳ್ಳವಂತೆ ಸೂಚಿಸಲಾಗಿದೆ.
ಬಿಸಿಸಿಐ ಅಧಿಕಾರಿಗಳು ಒಂದು ಅವಧಿಯ ಬದಲು ಎರಡು ಸತತ ಅವಧಿಗಳಲ್ಲಿ ಕೆಲಸ ನಿರ್ವಹಿಸುವಂತೆ ಸುಪ್ರೀಂಕೋರ್ಟ್ ಸಂವಿಧಾನದ ಕರಡು ಪ್ರತಿಯಲ್ಲಿ ಬದಲಾವಣೆ ಮಾಡಿದೆ.
ಬಿಸಿಸಿಐ, ಅದರ ಸದಸ್ಯತ್ವ ಸಂಸ್ಥೆಗಳು ಅಥವಾ ಎರಡರಲ್ಲಿಯೂ ಸತತ ಆರು ವರ್ಷ ಅಧಿಕಾರದಲ್ಲಿರಲು ಈ ಹಿಂದೆ ಅವಕಾಶವಿತ್ತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಈ ಸೂಚನೆಗಳನ್ನು ನೀಡಿದೆ.
2016ರ ಜುಲೈ 18ರಂದು ಲೋಧಾ ಸಮಿತಿ ನೀಡಿದ ಶಿಫಾರಸುಗಳಲ್ಲಿ ಹೆಚ್ಚಿನ ಅಂಶಗಳನ್ನು ಒಪ್ಪಿಕೊಂಡಿದ್ದ ಸುಪ್ರೀಂಕೋರ್ಟ್, ಅವುಗಳನ್ನು ಜಾರಿಗೆ ತರುವಂತೆ ಬಿಸಿಸಿಐಗೆ ನಿರ್ದೇಶಿಸಿತ್ತು.
ಆದರೆ, ಬಿಸಿಸಿಐ ಮತ್ತು ಅದರ ಸದಸ್ಯ ಸಂಸ್ಥೆಗಳು ಅದನ್ನು ಅನುಷ್ಠಾನಗೊಳಿಸದ ಕಾರಣ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ತಮ್ಮ ಹುದ್ದೆಗಳಿಂದ ವಜಾಗೊಳಿಸಿತ್ತು.
ಬಳಿಕ ಬಿಸಿಸಿಐನ ಆಡಳಿತದ ಮೇಲೆ ನಿಗಾವಹಿಸಲು ವಿನೋದ್ ರಾಯ್ ನೇತೃತ್ವದ ಆಡಳಿತ ಸಮಿತಿಯನ್ನು ನೇಮಕ ಮಾಡಿತ್ತು.