ನವದೆಹಲಿ, ಜುಲೈ 07: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರಿಗೆ ಬೇಷರತ್ ಕ್ಷಮಾಪಣೆ ಯಾಚಿಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠವು ಶುಕ್ರವಾರ(ಜುಲೈ 07)ದಂದು ಸೂಚಿಸಿದೆ.ಕ್ಷಮಾಪಣೆ ಕೇಳದೇ ಇದ್ದರೆ ನಿಂದನೆ ಪ್ರಕರಣದ ಕುರಿತ ವಿಚಾರಣೆಯನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ. ಖಾನ್ ವಿಲ್ಕರ್ ಮತ್ತು ಡಿ.ವೈ. ಚಂದ್ರಾಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಅನುರಾಗ್ ಠಾಕೂರ್ ಅವರು ಸಲ್ಲಿಸಿದ್ದ ಕ್ಷಮಾಪಣಾ ಅಫಿಡೇವಿಟ್ ಅನ್ನು ಕೋರ್ಟ್ ತಿರಸ್ಕರಿಸಿದ್ದು, ಜುಲೈ 14ರಂದು ಖುದ್ದು ಹಾಜರಾಗಿ ಕ್ಷಮಾಪಣೆ ಕೇಳುವಂತೆ ಸೂಚಿಸಲಾಗಿದೆ. ನ್ಯಾ. ಲೋಧಾ ಸಮಿತಿ ಶಿಫಾರಸ್ಸುಗಳನ್ನು ಅಳವಡಿಸಲು ವಿಫಲವಾದ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಅನುರಾಗ್ ಠಾಕೂರ್ ಅವರು ಅನಿವಾರ್ಯವಾಗಿ ಕೆಳಗಿಳಿಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ನಂತರ ಠಾಕೂರ್ ವಿರುದ್ಧ ನಿಂದನೆ ಪ್ರಕರಣ ಕೂಡಾ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.