ಗುವಾಹಟಿ: ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಅರ್ಜುನ ಪ್ರಶಸ್ತಿ ವಿಜೇತೆ ಸೂರಜ್ ಲತಾ ದೇವಿ ತನ್ನ ಪತಿಯ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ತನ್ನ ಮೇಲೆ ವರದಕ್ಷಿಣೆಗಾಗಿ ಪತಿ ಕಿರುಕುಳವನ್ನು ನೀಡಿದ್ದಲ್ಲದೆ ದೈಹಿಕ ಹಲ್ಲೆಯನ್ನು ನಡೆಸಿದ್ದಾರೆ ಎಂದು ಸೂರಜ್ ಲತಾ ದೇವಿ ದೂರಿದ್ದಾರೆ.
ಸೂರಜ್ ಲತಾ ದೇವಿ ಅವರ ಪತಿ ಶಾಂತ ಕುಮಾರ್ ಈ ಹಿಂದೆ ಮುಂಬೈನ ಪಶ್ಚಿಮ ರೈಲ್ವೇ ವಿಭಾಗದ ಉದ್ಯೋಗಿಯಾಗಿದ್ದ ಎಂದು ತಿಳಿದುಬಂದಿದೆ. ಸೂರಜ್ ಲತಾ ದೇವಿ ಅವರ ಕೈಗಳನ್ನು ಕಟ್ಟಿಹಾಕಿ ಎರಡರಿಂದ ಮೂರು ಗಂಟೆಗಳ ಕಾಲ ನಿರ್ದಾಕ್ಷಿಣ್ಯವಾಗಿ ಹಲ್ಲೆಯನ್ನು ನಡೆಸಲಾಗಿದೆ ಎಂದು ಸ್ವತಃ ಸೂರಜ್ ಲತಾ ದೇವಿ ಆರೋಪಿಸಿದ್ದಾರೆ.
ಮಹಿಳಾ ಹಾಕಿ ತಂಡದ ನಾಯಕಿ ಆರೋಪಿಸಿದ ಪ್ರಕಾರ ಶಾಂತ ಕುಮಾರ್ ಭೂಮಿಗಾಗಿ ಬೇಡಿಕೆಯನ್ನು ಇಡುತ್ತಿದ್ದಾನೆ ಎನ್ನಲಾಗಿದೆ. ಕಳೆದ ನವೆಂಬರ್ನಲ್ಲಿ ಇದೇ ಬೇಡಿಕೆಯನ್ನು ಇಟ್ಟಿದ್ದ ಎಂದು ಸೂರಜ್ ಲತಾ ದೇವಿ ಆರೋಪವನ್ನು ಮಾಡಿದ್ದಾರೆ. ಇದೇ ವಿಚಾರಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆಯನ್ನು ನೀಡಲಾಗ್ತಿದೆ ಎಂದು ದೂರನ್ನು ನೀಡಿದ್ದಾರೆ ಸೂರಜ್ ಲತಾ ದೇವಿ.
ಈ ಸಂದರ್ಭದಲ್ಲಿ ಹಾಕಿಯಲ್ಲಿ ಮಾಡಿದ ಸಾಧನೆಯೂ ಪತಿಹೆ ಹಿಡಿಸುತ್ತಿರಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಈ ಪದಕಗಳಿಂದ ಏನು ಪ್ರಯೋಜನ ಎಂಬಂತೆ ಮಾತುಗಳನ್ನಾಡುತ್ತಿದ್ದ ಪತಿ ಬಳಿಕ ಅರ್ಜುನ ಪ್ರಶಸ್ತಿ ಬಂದಾಗಲೂ ಇದಕ್ಕೆ 'ಅನೈತಿಕ ವರ್ತನೆಯ ಕಾರಣದಿಂದಲೇ ಪ್ರಶಸ್ತಿ ಪಡೆದುಕೊಂಡಿರುವುದಾಗಿ ಆರೋಪವನ್ನು ಮಾಡಿದ್ದಾರೆ ಎಂದು ಸೂರಜ್ ಲತಾ ದೇವಿ ಆರೋಪವನ್ನು ಮಾಡಿದ್ದಾರೆ.
ಪತಿಯ ವರ್ತನೆಯಲ್ಲಿ ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ನಡೆದಿದ್ದನ್ನು ಸಹಿಸಿಕೊಂಡು ಬಂದೆ. ಈ ವಿಚಾರವನ್ನು ಸಾರ್ವಜನಿಕಗೊಳಿಸಲು ನಾನು ಬಯಸಿರಲಿಲ್ಲ. ಆದರೆ ನನ್ನ ತಾಳ್ಮೆಗೂ ಒಂದು ಮಿತಿ ಇದೆ ಎಂದು ಲತಾ ದೇವಿ ಹೇಳಿಕೊಂಡಿದ್ದಾರೆ.
ಸೂರಜ್ ಲತಾ ದೇವಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ತಂಡದ ನಾಯಕಿಯಾಗಿದ್ದರು. ಈ ಗೆಲುವು 'ಚಕ್ ದೇ ಇಂಡಿಯಾ'ದಂತ ಅದ್ಭುತ ಸಿನಿಮಾಗೆ ಸ್ಪೂರ್ತಿಯಾಗಿತ್ತು.