ವಾರ್ನರ್ ಆ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದು ನಾಚಿಕೆಗೇಡು ಎಂದ ಗೌತಮ್ ಗಂಭೀರ್
ಆಸ್ಟ್ರೇಲಿಯದ ಬ್ಯಾಟಿಂಗ್ ವೇಳೆ 8ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಎಸೆತವೊಂದನ್ನು ಹಾಕುವಾಗ ನಿಯಂತ್ರಣ ಕಳೆದುಕೊಂಡು ಎರಡರಿಂದ ಮೂರು ಪಿಚ್ ಬೀಳುವಂತಹ ಎಸೆತವನ್ನು ಪಿಚ್ನಿಂದ ತೀರ ಹೊರಕ್ಕೆ ಹಾಕಿಬಿಟ್ಟರು. ಹೀಗೆ ನಿಯಂತ್ರಣವನ್ನು ಕಳೆದುಕೊಂಡು ಮೊಹಮ್ಮದ್ ಹಫೀಜ್ ಎಸೆದ ಎಸೆತಕ್ಕೆ ಕಣದಲ್ಲಿದ್ದ ಡೇವಿಡ್ ವಾರ್ನರ್ ಪಿಚ್ನಿಂದ ಹೊರಹೋಗುತ್ತಿದ್ದ ಚೆಂಡಿನ ಸಮೀಪಕ್ಕೆ ಬಂದು ಸಿಕ್ಸರ್ ಬಾರಿಸಿದ್ದರು. ಹೀಗೆ ಡೇವಿಡ್ ವಾರ್ನರ್ ಬೌಲರ್ ನಿಯಂತ್ರಣ ಕಳೆದುಕೊಂಡು ಎಸೆದ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದಕ್ಕೆ ಗೌತಮ್ ಗಂಭೀರ್ ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಜರಿದಿದ್ದಾರೆ. "ಡೇವಿಡ್ ವಾರ್ನರ್ ಈ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಕ್ರಿಕೆಟ್ ಆಟದ ಚಿಂತಾಜನಕ ಪರಿಸ್ಥಿತಿಯನ್ನು ತೋರಿಸಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಏನಂತೀರಾ ರವಿಚಂದ್ರನ್ ಅಶ್ವಿನ್" ಎಂದು ಭಾರತದ ಆಟಗಾರ ರವಿಚಂದ್ರನ್ ಅಶ್ವಿನ್ ಅವರನ್ನು ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸುವ ಮೂಲಕ ಗೌತಮ್ ಗಂಭೀರ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಕೆಲ ಕ್ರಿಕೆಟ್ ಅಭಿಮಾನಿಗಳಿಂದಲೂ ವ್ಯಕ್ತವಾಗುತ್ತಿದೆ ವಿರೋಧ
ಗೌತಮ್ ಗಂಭೀರ್ ಮಾತ್ರವಲ್ಲದೆ ಇನ್ನೂ ಕೆಲ ಕ್ರಿಕೆಟ್ ಅಭಿಮಾನಿಗಳು ಕೂಡ ಡೇವಿಡ್ ವಾರ್ನರ್ ಹೊಡೆತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೌಲರ್ ನಿಯಂತ್ರಣ ಕಳೆದುಕೊಂಡು ತಪ್ಪಾದ ಎಸೆತವನ್ನು ಎಸೆದಿದ್ದೇನೆ ಎಂದು ತಿಳಿದ ಕೂಡಲೇ ಹಲವಾರು ದಿನಗಳಿಂದ ಕ್ರಿಕೆಟ್ ಆಡುತ್ತಿರುವ, ಸಾಕಷ್ಟು ಅನುಭವಿ ಎಂದು ಕರೆಸಿಕೊಂಡಿರುವ ಡೇವಿಡ್ ವಾರ್ನರ್ ಅವರು ಆ ಎಸೆತಕ್ಕೆ ಬ್ಯಾಟ್ ಬೀಸದೇ ಸುಮ್ಮನೆ ಇರಬೇಕಿತ್ತು. ಆದರೆ ಡೇವಿಡ್ ವಾರ್ನರ್ ಅಂತಹ ತಪ್ಪಾದ ಎಸೆತಕ್ಕೂ ಸಿಕ್ಸರ್ ಬಾರಿಸಿ ಕ್ರೀಡಾ ಸ್ಫೂರ್ತಿಯನ್ನು ಮರೆತುಬಿಟ್ಟಿದ್ದಾರೆ ಎಂದು ಕೆಲ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಡೇವಿಡ್ ವಾರ್ನರ್ ಔಟ್ ಕೂಡ ಹುಟ್ಟುಹಾಕಿದೆ ವಿವಾದ!
ಇನ್ನೂ ಇದೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕುರಿತಾಗಿ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಹೌದು, 11ನೇ ಓವರ್ ಮಾಡಲು ಬಂದ ಶಬಾದ್ ಖಾನ್ ಎಸೆತಕ್ಕೆ ಡೇವಿಡ್ ವಾರ್ನರ್ ಬ್ಯಾಟ್ ಬೀಸಿದ್ದರು. ಆದರೆ ಸರಿಯಾದ ರೀತಿಯಲ್ಲಿ ಹೊಡೆಯಲು ಡೇವಿಡ್ ವಾರ್ನರ್ ವಿಫಲರಾದ ಕಾರಣ ಚೆಂಡು ವಿಕೆಟ್ ಕೀಪರ್ ಕೈ ಸೇರಿತ್ತು. ಈ ಎಸೆತಕ್ಕೆ ಅಂಪೈರ್ ಕೀಪರ್ ಕ್ಯಾಚ್ ಔಟ್ ಎಂಬ ತೀರ್ಪನ್ನು ನೀಡಿದರು. ಹೀಗೆ ಅಂಪೈರ್ ತೀರ್ಪಿನ ನಂತರ ಡೇವಿಡ್ ವಾರ್ನರ್ ಯಾವುದೇ ಪ್ರತಿಕ್ರಿಯೆ ನೀಡದೆ ಮೈದಾನದಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆದರೆ ಸತ್ಯಾಂಶವೇನೆಂದರೆ ಡೇವಿಡ್ ವಾರ್ನರ್ ಹೊಡೆಯಲು ಪ್ರಯತ್ನಿಸಿದ್ದ ಎಸೆತದಲ್ಲಿ ಚೆಂಡು ಬ್ಯಾಟಿಗೆ ತಾಕಿರಲಿಲ್ಲ, ಹೀಗಾಗಿ ಡೇವಿಡ್ ವಾರ್ನರ್ ಔಟ್ ಇಲ್ಲದಿದ್ದರೂ ಪೆವಿಲಿಯನ್ ಕಡೆ ನಡೆದರು. ಅಷ್ಟೇ ಅಲ್ಲದೆ ಓರ್ವ ಬ್ಯಾಟ್ಸ್ಮನ್ಗೆ ಚೆಂಡು ಬ್ಯಾಟಿಗೆ ತಾಕಿದೆಯೋ ಇಲ್ಲವೋ ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಡೇವಿಡ್ ವಾರ್ನರ್ ಬಾರಿಸಲು ಯತ್ನಿಸಿದಾಗ ಚೆಂಡಿಗೂ ಮತ್ತು ಬ್ಯಾಟಿಗೂ ಅಪಾರವಾದ ಅಂತರವಿತ್ತು. ಈ ವಿಷಯ ಅನುಭವಿ ಬ್ಯಾಟ್ಸ್ಮನ್ ಆದ ಡೇವಿಡ್ ವಾರ್ನರ್ ಅವರಿಗೆ ತಿಳಿಯದೆ ಹೋಯಿತೇ ಎಂದು ನೆಟ್ಟಿಗರು ಡೇವಿಡ್ ವಾರ್ನರ್ ನಡೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಔಟ್ ಇಲ್ಲದಿದ್ದರೂ ಡೇವಿಡ್ ವಾರ್ನರ್ ಅಂಪೈರ್ ನಿರ್ಣಯವನ್ನು ಒಪ್ಪಿಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕುವ ಬದಲು ಡಿ.ಆರ್.ಎಸ್ ನಿಯಮವನ್ನು ಉಪಯೋಗಿಸಿಕೊಳ್ಳಬಹುದಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.