ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸುವುದು ನಿಜವಾದ ಗೆಲುವಲ್ಲ
ಈ ಮುಂಚೆಯೇ ಹೇಳಿದಂತೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು, ನ್ಯೂಜಿಲೆಂಡ್ ವಿರುದ್ಧ ಬೇರೆ ಯಾವುದಾದರೂ ಒಂದು ತಂಡ ಗೆಲುವು ಸಾಧಿಸಿದರೆ ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಹೀಗೆ ಅನ್ಯ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಆಧಾರದ ಮೇಲೆ ಈ ಬಾರಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬಹುದಾಗಿದ್ದು ಇದರ ಕುರಿತು ಕಪಿಲ್ ದೇವ್ ಆಕ್ರೋಶ ಹೊರಹಾಕಿದ್ದಾರೆ. "ನಾವು ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸಿದರೆ ಅದನ್ನು ಯಾವತ್ತಿಗೂ ಭಾರತ ಕ್ರಿಕೆಟ್ ಪ್ರಶಂಸಿಸುವುದಿಲ್ಲ. ನೀವು ವಿಶ್ವಕಪ್ ಗೆಲ್ಲಬೇಕೆಂದರೆ ಅಥವಾ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ನಿಮ್ಮ ಸ್ವಂತ ಆಟದಿಂದ ಸಾಧಿಸಿ. ಇತರರ ಮೇಲೆ ಅವಲಂಬಿತವಾಗುವುದು ಒಳ್ಳೆಯದಲ್ಲ" ಎಂದು ಕಪಿಲ್ ದೇವ್ ಹೇಳಿದ್ದಾರೆ.
ಸ್ಟಾರ್ ಆಟಗಾರರ ಬದಲು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ
"ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಯುವ ಆಟಗಾರರ ಕಡೆ ಗಮನ ಹರಿಸಬೇಕಿದೆ. ಕೆಟ್ಟ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆಟಗಾರರ ಬದಲು ಯುವ ಆಟಗಾರರಿಗೆ ಅವಕಾಶಗಳನ್ನು ನೀಡಬೇಕಿದೆ. ಆ ಯುವ ಆಟಗಾರರು ಸೋತರೆ ಅವರಿಗೆ ಒಂದೊಳ್ಳೆ ಅನುಭವ ಸಿಗಲಿದೆ. ಆದರೆ ದೊಡ್ಡ ದೊಡ್ಡ ಹೆಸರುಗಳನ್ನು ಹೊಂದಿರುವ ಆಟಗಾರರು ಕಳಪೆ ಪ್ರದರ್ಶನ ನೀಡಿದರೆ ದೊಡ್ಡ ಮಟ್ಟದ ಟೀಕೆಗಳು ಎದುರಾಗುತ್ತವೆ. ಹೀಗಾಗಿ ಬಿಸಿಸಿಐ ಈ ಕುರಿತು ಮಧ್ಯಪ್ರವೇಶಿಸಬೇಕಾದ ಅಗತ್ಯತೆ ಇದೆ" ಎಂದು ಕಪಿಲ್ ದೇವ್ ಹೇಳಿದ್ದಾರೆ.
ಟೂರ್ನಿಯಲ್ಲಿ ಸ್ಟಾರ್ ಆಟಗಾರರೆಲ್ಲಾ ಫ್ಲಾಪ್!
ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿದಂತೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರೆಲ್ಲಾ ಮುಗ್ಗರಿಸಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ತಂಡದ ಬೇರೆ ಯಾವುದೇ ಸ್ಟಾರ್ ಆಟಗಾರ ಕೂಡ ಜವಾಬ್ದಾರಿಯುತ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಲೇ ಇಲ್ಲ.