ಒತ್ತಡವನ್ನು ನಿಭಾಯಿಸುವ ತಂಡ ಗೆಲ್ಲಲಿದೆ
"ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿಯಲ್ಲಿ ಯಾವ ತಂಡ ಒತ್ತಡವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ಮೈದಾನದಲ್ಲಿ ಪ್ರದರ್ಶನ ನೀಡಲಿದೆಯೋ ಆ ತಂಡ ಗೆಲುವು ಸಾಧಿಸಲಿದೆ. ಹೇಳಬೇಕೆಂದರೆ, ಭಾರತ ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲಿಯೂ ಗೆಲುವನ್ನು ಸಾಧಿಸಿದೆ. ಆದರೆ ಪಾಕಿಸ್ತಾನ 186 ರನ್ ಗಳಿಸಿದರೂ ಕೂಡ ಸೌತ್ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೋಲನ್ನುಂಡಿದೆ" ಎಂದು ದನೀಶ್ ಕನೇರಿಯಾ ಹೇಳಿದರು.
ಗೆಲ್ಲುವ ಸಾಧ್ಯತೆ 70 - 30
"ಭಾರತದ ಬ್ಯಾಟ್ಸ್ಮನ್ಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ ಮತ್ತು ಟೀಮ್ ಇಂಡಿಯಾ ಬೌಲರ್ಗಳೂ ಕೂಡ ಇದೇ ಹಾದಿಯಲ್ಲಿದ್ದಾರೆ. ಆದರೆ ಪಾಕಿಸ್ತಾನ ತಂಡದಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟ್ಸ್ಮನ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುತ್ತಿಲ್ಲ. ಇನ್ನು ಪಾಕಿಸ್ತಾನ ಬೌಲಿಂಗ್ ವಿಭಾಗದಲ್ಲಿ ಶಾಹೀನ್ ಅಫ್ರಿದಿ ಮಾತ್ರ ಉತ್ತಮ ಫಾರ್ಮ್ ಹೊಂದಿದ್ದಾರೆ. ಹೀಗಾಗಿ ಭಾರತಕ್ಕೆ ಗೆಲ್ಲುವ ಸಾಧ್ಯತೆ 70% ಇದೆ ಮತ್ತು ಪಾಕಿಸ್ತಾನಕ್ಕೆ ಗೆಲ್ಲುವ ಸಾಧ್ಯತೆ ಕೇವಲ 30% ಇದೆ" ಎಂದು ದನಿಶ್ ಕನೇರಿಯಾ ಹೇಳಿದ್ದಾರೆ.
ಯಾವ ತಂಡ ಟ್ರೋಫಿ ಗೆಲ್ಲಲಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಹೇಳಿರುವ ದನಿಶ್ ಕನೇರಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡ ಟ್ರೋಫಿ ಗೆಲ್ಲಲಿದೆ ಎಂಬ ಪ್ರಶ್ನೆ ಎದುರಾದಾಗ "ಈ ಬಾರಿಯ ಟ್ವೆಂಟಿ ವಿಶ್ವಕಪ್ ಟ್ರೋಫಿ ಖಂಡಿತವಾಗಿಯೂ ಏಷ್ಯಾಗೆ ಬರಲಿದೆ" ಎಂದಿದ್ದಾರೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಏಷ್ಯಾದ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಭಾಗವಹಿಸುತ್ತಿದ್ದರು ಸಹ ಭಾರತ ಅಥವಾ ಪಾಕಿಸ್ತಾನ ಗೆಲ್ಲಲಿದೆ ಎಂಬರ್ಥದಲ್ಲಿ ದನೀಶ್ ಕನೇರಿಯಾ ಉತ್ತರಿಸಿದ್ದಾರೆ.