ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯವೊಂದರಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳ ನಡುವಿನ ಈ ಪಂದ್ಯ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 25ನೇ ಪಂದ್ಯವಾಗಿದೆ.
ಈ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಕ್ವಿಂಟನ್ ಡಿ ಕಾಕ್ ಮಂಡಿಯೂರುವುದರ ಮೂಲಕ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಕ್ವಿಂಟನ್ ಡಿ ಕಾಕ್ ಆಡಿದ ತಮ್ಮ ಹಿಂದಿನ ಪಂದ್ಯದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನದಡಿಯಲ್ಲಿ ಮಂಡಿಯೂರಲು ನಿರಾಕರಿಸಿದ್ದರು. ಅಷ್ಟೇ ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನಾಡದೇ ತಂಡದಿಂದ ಸ್ವತಃ ಹೊರಗುಳಿದಿದ್ದರು. ಕ್ವಿಂಟನ್ ಡಿ ಕಾಕ್ ಅವರ ಈ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ವಿವಾದವನ್ನೇ ಹುಟ್ಟುಹಾಕಿತ್ತು.
ಟಿ20 ವಿಶ್ವಕಪ್: ಫೈನಲ್ ಪ್ರವೇಶಿಸಲಿರುವ ತಂಡಗಳನ್ನು ಹೆಸರಿಸಿದ ಬೆನ್ ಸ್ಟೋಕ್ಸ್
ಹೌದು, ಹಲವಾರು ಪ್ರಮುಖ ಕ್ರಿಕೆಟಿಗರೇ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಅಭಿಯಾನದಡಿ ಮಂಡಿಯೂರುವುದರ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿರುವಾಗ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮಾತ್ರ ಈ ಅಭಿಯಾನದಲ್ಲಿ ಪಾಲ್ಗೊಳ್ಳದೇ ಪಂದ್ಯದಿಂದ ಹೊರಗುಳಿದಿರುವುದು ಅವರಲ್ಲಿನ ವರ್ಣಭೇದ ಮನೋಭಾವವನ್ನು ತೋರಿಸುತ್ತದೆ ಎಂದು ಹಲವಾರು ಮಂದಿ ಕ್ವಿಂಟನ್ ಡಿ ಕಾಕ್ ವಿರುದ್ಧ ಟೀಕೆ ಮಾಡಿದ್ದರು. ಹೀಗೆ ಅಪಾರವಾದ ಟೀಕೆಗಳು ತಮ್ಮ ವಿರುದ್ಧ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಕ್ವಿಂಟನ್ ಡಿ ಕಾಕ್ ಇಂದು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮಂಡಿಯೂರುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ.
#quintondekock#SAvSL #SouthAfrica #SriLanka #T20WorldCup pic.twitter.com/ACe1sP8G7o
— The Great One (@Kash786787) October 30, 2021
ಸದ್ಯ ಕ್ವಿಂಟನ್ ಡಿ ಕಾಕ್ ಶ್ರೀಲಂಕಾ ವಿರುದ್ಧದ ಈ ಪಂದ್ಯದ ವೇಳೆ ಮಂಡಿಯೂರಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ತಪ್ಪು ತಿದ್ದಿಕೊಂಡಿರುವ ಕ್ವಿಂಟನ್ ಡಿ ಕಾಕ್ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲ ಮಂದಿ ಈ ಕೆಲಸವನ್ನು ಮುಂಚೆಯೇ ಮಾಡಿದ್ದರೆ ಟೀಕೆಗಳಿಂದ ತಪ್ಪಿಸಿಕೊಳ್ಳಬಹುದಿತ್ತಲ್ಲ ಎಂದು ಕ್ವಿಂಟನ್ ಡಿ ಕಾಕ್ ಅವರ ಕಾಲೆಳೆಯುತ್ತಿದ್ದಾರೆ.
ಇನ್ನು ಕ್ವಿಂಟನ್ ಡಿ ಕಾಕ್ ತಾವು ಕಳೆದ ಪಂದ್ಯದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಅಭಿಯಾನದಡಿ ಮಂಡಿಯೂರಲು ನಿರಾಕರಿಸಿದ್ದು ಯಾಕೆ ಎಂಬುದಕ್ಕೆ ಕಾರಣವನ್ನು ಕೂಡ ಒಂದು ಬಹಿರಂಗ ಪತ್ರದ ಮೂಲಕ ತಿಳಿಸಿದ್ದರು. ಈ ಪತ್ರವನ್ನು ಸೌತ್ಆಫ್ರಿಕಾ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು.
ಕ್ವಿಂಟನ್ ಡಿಕಾಕ್ ಅಭಿಮಾನಿಗಳಿಗೆ ಬರೆದಿದ್ದ ಈ ವಿಶೇಷ ಪತ್ರದಲ್ಲಿ ಮೊದಲಿಗೆ ತನ್ನ ತಂಡದ ಸಹ ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದರು. ನಾನು ವಿವಾದವನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಮಂಡಿಯೂರಲು ನಿರಾಕರಿಸಿ ಹಿಂದೆ ಸರಿಯಲಿಲ್ಲ. ಕ್ರಿಕೆಟ್ ಆಟಗಾರರಾಗಿ ನಾವು ಕಪ್ಪು ವರ್ಣದ ಜನರ ಬದುಕಿಗಾಗಿ ಮಂಡಿಯೂರುವುದು ಎಷ್ಟು ಮಹತ್ವದ ಕಾರ್ಯ ಮತ್ತು ಉತ್ತಮ ಉದಾಹರಣೆ ಎಂಬುದು ತಿಳಿದಿದೆ. ನಾನು ಮಂಡಿಯೂರಿ ಅಭಿಯಾನದಲ್ಲಿ ಪಾಲ್ಗೊಳ್ಳುವುದರಿಂದ ಇತರರಿಗೆ ಕಪ್ಪು ವರ್ಣದ ಜನರನ್ನು ಸಮಾನವಾಗಿ ಕಾಣಬೇಕೆಂಬ ಪಾಠವಾಗಲಿದೆ ಎಂದರೆ ಖಂಡಿತವಾಗಿಯೂ ನಾನು ಖುಷಿಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಕ್ವಿಂಟನ್ ಡಿ ಕಾಕ್ ಬರೆದುಕೊಂಡಿದ್ದರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಾಗಬೇಕಾದ ಬದಲಾವಣೆಗಳನ್ನು ತಿಳಿಸಿದ ಪಠಾಣ್
ಇನ್ನೂ ಮುಂದುವರೆದು ಬರೆದುಕೊಂಡಿದ್ದ ಕ್ವಿಂಟನ್ ಡಿ ಕಾಕ್ ನಾನು ಮಿಶ್ರ ವರ್ಣದ ಸದಸ್ಯರು ಇರುವಂತಹ ಕುಟುಂಬದಿಂದ ಬಂದಿರುವವನು. ನನಗೆ ಕಪ್ಪು ವರ್ಣದ ಜನರ ಬದುಕಿನ ಮೇಲೆ ಕಾಳಜಿ ಇಲ್ಲ ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಆದರೆ ನನ್ನ ಮಲತಾಯಿ ಕಪ್ಪು ವರ್ಣದವರು ಮತ್ತು ನನ್ನ ಸೋದರಿಯರು ಬಿಳಿ ವರ್ಣದವರು. ಹೀಗಾಗಿ ನಾನು ನನ್ನ ಬಾಲ್ಯದಿಂದಲೂ ಸಹ ಕಪ್ಪು ವರ್ಣದ ಜನರ ಬದುಕಿನೊಂದಿಗೆ ಬೆಳೆದು ಬಂದವನು. ಹೀಗಿರುವಾಗ ನಾನೇಕೆ ಕಪ್ಪು ವರ್ಣದ ಜನರ ಬದುಕಿಗೆ ಬೆಂಬಲ ನೀಡುವುದಿಲ್ಲ ಎಂದು ಕ್ವಿಂಟನ್ ಡಿಕಾಕ್ ಬರೆದುಕೊಂಡಿದ್ದರು.