ಮಂಡಿಯೂರಿದ್ದ ಹಾರ್ದಿಕ್ ಪಾಂಡ್ಯ
ಅದೇ ರೀತಿ ಕ್ರಿಕೆಟ್ನಲ್ಲಿಯೂ ಆಟಗಾರರು ಕಪ್ಪುವರ್ಣದ ಜನರ ಬದುಕಿಗಾಗಿ ಕ್ರೀಡಾಂಗಣದಲ್ಲಿ ಮಂಡಿಯೂರುವುದರ ಮೂಲಕ ತಮ್ಮ ಪಾಲಿನ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಈ ಟ್ರೆಂಡ್ ಜಗತ್ತಿನ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಕಾಲಿಟ್ಟಿತ್ತು. ಹೌದು, 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಂಡಿಯೂರಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಮಂಡಿಯೂರದೇ ಹಿಂದೆ ಸರಿದಿದ್ದ ಕ್ವಿಂಟನ್ ಡಿ ಕಾಕ್
ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಸಹ ವಿವಿಧ ತಂಡಗಳ ಹಲವಾರು ಆಟಗಾರರು ಈ ಅಭಿಯಾನದಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಅದರಲ್ಲಿಯೂ ಕಪ್ಪು ವರ್ಣದ ಜನರು ಹೆಚ್ಚಾಗಿರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ಪಂದ್ಯಗಳಲ್ಲಿ ಈ ಅಭಿಯಾನ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ.
ಇದೀಗ ಈ ಅಭಿಯಾನವು ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೂ ಕಾಲಿಟ್ಟಿದೆ. ಹೌದು, ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಹಲವಾರು ಪಂದ್ಯಗಳಲ್ಲಿ ವಿವಿಧ ತಂಡಗಳ ಆಟಗಾರರು ಮಂಡಿಯೂರುವುದರ ಮೂಲಕ ಈ ಅಭಿಯಾನಕ್ಕೆ ತಮ್ಮ ಪಾಲಿನ ಬೆಂಬಲವನ್ನು ಸೂಚಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಕೂಡ ಈ ಅಭಿಯಾನಕ್ಕೆ ಬೆಂಬಲವನ್ನು ಸೂಚಿಸಿದ್ದು, ಇಂಗ್ಲೆಂಡ್ ಸೇರಿದಂತೆ ಹಲವಾರು ತಂಡಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿವೆ. ಆದರೆ, ಇತ್ತೀಚೆಗಷ್ಟೇ ಈ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನದಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಕ್ವಿಂಟನ್ ಡಿ ಕಾಕ್ ಹಿಂದೇಟು ಹಾಕಿದ್ದರು. ಹೌದು, ಕ್ವಿಂಟನ್ ಡಿ ಕಾಕ್ ಮೈದಾನದಲ್ಲಿ ಮಂಡಿಯೂರಲು ನಿರಾಕರಿಸಿದ್ದು ಮಾತ್ರವಲ್ಲದೆ ನಂತರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಿಂದ ಕೂಡ ಹಿಂದೆ ಸರಿದಿದ್ದರು. ಕ್ವಿಂಟನ್ ಡಿ ಕಾಕ್ ಅವರ ಈ ನಡೆಗೆ ಭಾರೀ ದೊಡ್ಡ ಮಟ್ಟದಲ್ಲಿ ವಿರೋಧ ಮತ್ತು ಟೀಕೆಗಳು ವ್ಯಕ್ತವಾಗಿದ್ದವು.
ಮಂಡಿಯೂರುವುದಲಿಲ್ಲ ಎಂದ ಶ್ರೀಲಂಕಾ
ಇದೀಗ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಈ ಅಭಿಯಾನದ ಕುರಿತು ಮಾತನಾಡಿದ್ದು ತಮ್ಮ ತಂಡದ ಆಟಗಾರರು ಕಪ್ಪು ವರ್ಣದ ಜನರ ಬದುಕಿಗೋಸ್ಕರ ಮಂಡಿಯೂರುವ ಅಭಿಯಾನದಲ್ಲಿ ಭಾಗವಹಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಈ ಹಿಂದೆ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಈ ಅಭಿಯಾನದಲ್ಲಿ ತಮ್ಮ ಆಟಗಾರರು ಭಾಗವಹಿಸುವುದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಂಡಿತ್ತು. ಆ ಸಮಯಕ್ಕೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತೆಗೆದುಕೊಂಡಿದ್ದ ಈ ನಿರ್ಧಾರದ ವಿರುದ್ಧ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು.
ಸದ್ಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಕೂಡ ತನ್ನ ಹಳೆಯ ನಿಲುವನ್ನೇ ಮುಂದುವರಿಸಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಈ ಟೂರ್ನಿಯಲ್ಲಿಯೂ ಸಹ ತಮ್ಮ ತಂಡದ ಆಟಗಾರರು ಈ ಅಭಿಯಾನದಲ್ಲಿ ಭಾಗವಹಿಸುವುದಿಲ್ಲ ಎಂದು ಮುಕ್ತವಾದ ಹೇಳಿಕೆ ನೀಡಿದೆ. "ಆಟಗಾರರು ಈ ಅಭಿಯಾನದಲ್ಲಿ ಭಾಗವಹಿಸುವುದಿಲ್ಲ ಎಂಬುದು ನಮ್ಮ ದೀರ್ಘಕಾಲದ ನಿಲುವಾಗಿದೆ ಮತ್ತು ನಮ್ಮ ತಂಡದ ಆಟಗಾರರು ಇಲ್ಲಿಯವರೆಗೂ ಆ ನಿರ್ದೇಶನವನ್ನು ಗೌರವಿಸಿದ್ದು ವಿಶ್ವಕಪ್ನಲ್ಲಿಯೂ ಸಹ ಅದನ್ನು ಗೌರವಿಸುವುದನ್ನು ಮುಂದುವರಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಈ ಅಭಿಯಾನದಲ್ಲಿ ಭಾಗವಹಿಸದೇ ಇದ್ದ ಕ್ವಿಂಟನ್ ಡಿಕಾಕ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು, ಇದೀಗ ಅದೇ ರೀತಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕೂಡ ಈ ಅಭಿಯಾನದಿಂದ ಹಿಂದೆ ಸರಿದಿದ್ದು ಮತ್ತೆ ಯಾವ ರೀತಿಯ ವಿವಾದಗಳು ಹುಟ್ಟಿಕೊಳ್ಳುತ್ತವೆಯೋ ಏನೋ ಕಾದು ನೋಡಬೇಕಿದೆ.