ಅಫ್ಘಾನಿಸ್ತಾನ ಟಿ ಟ್ವೆಂಟಿಯಲ್ಲಿ ಹೆದರುವುದಿಲ್ಲ
"ಹೌದು, ಅಫ್ಘಾನಿಸ್ತಾನದ ಒಂದು ಭಯಾನಕ ತಂಡ ಎಂದೇ ಹೇಳಬಹುದು. ಏಕೆಂದರೆ ಅವರು ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಾರೆ, ಆ ತಂಡದ ಆಟಗಾರರು ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಂದೆ ನುಗ್ಗಿ ಬ್ಯಾಟ್ ಬೀಸುತ್ತಾರೆ ಹಾಗೂ ತಂಡದಲ್ಲಿ ಅತ್ಯುನ್ನತ ಸ್ಪಿನ್ ಬೌಲರ್ಗಳಿದ್ದಾರೆ. ಅಫ್ಘಾನಿಸ್ತಾನ ಬಾಳೆಹಣ್ಣಿನ ಸಿಪ್ಪೆ ಇದ್ದಂತೆ, ಅವರನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಬಲಿಷ್ಠ ತಂಡಗಳೇ ಜಾರಿ ಬೀಳಬೇಕಾಗುತ್ತದೆ" ಎಂದು ಸುನೀಲ್ ಗವಾಸ್ಕರ್ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.
ಆ ಇಬ್ಬರು ಬೌಲರ್ಗಳ ಬಗ್ಗೆ ಎಚ್ಚರ
ಅಫ್ಘಾನಿಸ್ತಾನವನ್ನು ಕಡೆಗಣಿಸಬೇಡಿ ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿರುವ ಸುನಿಲ್ ಗವಾಸ್ಕರ್ ಆ ತಂಡದ ಇಬ್ಬರು ಬೌಲರ್ಗಳ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದಾರೆ. "ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಬೌಲಿಂಗ್ಗೆ ವಿಭಿನ್ನವಾದ ಯೋಜನೆಗಳನ್ನು ಹಾಕಿಕೊಂಡು ಕಣಕ್ಕಿಳಿಯಿರಿ. ಇಲ್ಲದಿದ್ದರೆ ಆ ಇಬ್ಬರು ತಮ್ಮ ಪಾಲಿನ 4 ಓವರ್ಗಳನ್ನು 25ರಿಂದ 30 ರನ್ ನೀಡಿ ಮುಗಿಸಿಬಿಡುತ್ತಾರೆ. ಹೀಗೆ 8 ಓವರ್ಗಳಲ್ಲಿ ಕೇವಲ 50ರಿಂದ 60 ರನ್ ಸಿಗಲಿದ್ದು ಟೀಮ್ ಇಂಡಿಯಾಗೆ ಹಿನ್ನಡೆಯಾಗಲಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
ಈ ಪಂದ್ಯ ಸೋತರೆ ಅಧಿಕೃತವಾಗಿ ಸೆಮಿಫೈನಲ್ ರೇಸ್ನಿಂದ ಹೊರಬೀಳಲಿದೆ ಟೀಮ್ ಇಂಡಿಯಾ
ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯ ಇಂದು ( ನವೆಂಬರ್ 3 ) ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದ್ದೇ ಆದಲ್ಲಿ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.