ಬೇಗನೆ 3 ವಿಕೆಟ್ ಕಳೆದುಕೊಂಡೆವು, ಅವರು ನಮಗೆ ಅವಕಾಶವನ್ನು ಕೊಡಲಿಲ್ಲ
"ನಾವು ಅಂದುಕೊಂಡಂತೆ ಆರಂಭವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. 20 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡೆವು. ಹೀಗೆ ಸಂಕಷ್ಟದಲ್ಲಿದ್ದ ನಮಗೆ ದೊಡ್ಡ ಹೊಡೆತಗಳನ್ನು ಬಾರಿಸಲಾಗಲಿಲ್ಲ. ಇನ್ನು 10 ಓವರ್ ನಂತರ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣ ನಮಗೆ ಬೇಕಾಗಿದ್ದ 15ರಿಂದ 20 ಅಧಿಕ ರನ್ ಪಡೆದುಕೊಳ್ಳಲಾಗಲಿಲ್ಲ. ಇನ್ನು ಪಾಕ್ ಬ್ಯಾಟಿಂಗ್ ವೇಳೆ ಅವರ ಮೊದಲ 3 ವಿಕೆಟ್ಗಳನ್ನು ವೇಗವಾಗಿ ಪಡೆಯಬೇಕಾಗಿದ್ದ ಅನಿವಾರ್ಯತೆ ಇತ್ತು. ಆದರೆ ಆ ಅವಕಾಶವನ್ನು ಎದುರಾಳಿ ತಂಡ ನಮಗೆ ನೀಡಲೇ ಇಲ್ಲ, ಅವರು ಉತ್ತಮ ಕ್ರಿಕೆಟ್ ಆಡಿದರು" ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ದ್ವಿತೀಯಾರ್ಧದಲ್ಲಿ ಇಬ್ಬನಿ ತೊಂದರೆ
"ಹೊಸ ಚೆಂಡನ್ನು ಟಿ ಟ್ವೆಂಟಿ ಪಂದ್ಯಗಳಲ್ಲಿ ಯಾವ ರೀತಿ ಉಪಯೋಗಿಸಬೇಕೋ ಅದನ್ನು ಶಾಹಿನ್ ಅಫ್ರಿದಿ ಯಶಸ್ವಿಯಾಗಿ ಮಾಡಿದರು. ಹೊಸ ಚೆಂಡನ್ನು ಬಳಸಿ ಚಾಣಾಕ್ಷತನದಿಂದ ವಿಕೆಟ್ ಕಬಳಿಸಿದರು, ಹೀಗಾಗಿ ಆತನಿಗೆ ಕ್ರೆಡಿಟ್ ಸಲ್ಲಬೇಕು. ಇನ್ನು ನಮ್ಮ ತಂಡದ ಬೌಲಿಂಗ್ ವೇಳೆ ಇಬ್ಬನಿಯ ತೊಂದರೆ ಇದ್ದ ಕಾರಣ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ. ನಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಿದೆವು, ಎದುರಾಳಿ ತಂಡವನ್ನು ಕಟ್ಟಿಹಾಕಲು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ ಎದುರಾಳಿ ತಂಡದ ಆಟಗಾರರು ಅದಕ್ಕೆಲ್ಲಾ ಉತ್ತರ ನೀಡಿದರು. ಹಾಗೂ ಎದುರಾಳಿ ತಂಡ ನಮಗಿಂತ ಉತ್ತಮ ಆಟವನ್ನು ಆಡಿತು ಎಂಬ ಸತ್ಯವನ್ನು ಒಪ್ಪಿಕೊಳ್ಳುವಲ್ಲಿ ಯಾವುದೇ ನಾಚಿಕೆ ಇರಬಾರದು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕಳಪೆ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಬದಲು ಇಶಾನ್ ಕಿಶನ್ ಆಯ್ಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಕೊಹ್ಲಿ ಹೇಳಿದ್ದಿಷ್ಟು
ಹೀಗೆ ಪಂದ್ಯ ಮುಗಿದ ನಂತರ ಸಂದರ್ಶನದಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿಗೆ ಪಾಕ್ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಬದಲು ಮುಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರಿಗೆ ಆರಂಭಿಕ ಆಟಗಾರನ ಸ್ಥಾನ ನೀಡುತ್ತೀರಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆ ಎದುರಾದ ಕೂಡಲೇ ನಕ್ಕ ವಿರಾಟ್ ಕೊಹ್ಲಿ "ಟಿ ಟ್ವೆಂಟಿ ತಂಡದಿಂದ ರೋಹಿತ್ ಶರ್ಮಾ ಅವರನ್ನು ನಿಮ್ಮಿಂದ ಹೊರಗಿಡಲಾಗುತ್ತಾ, ಕಳೆದ ಪಂದ್ಯದಲ್ಲಿ ತಂಡಕ್ಕೆ ಆತ ನೀಡಿದ ಕೊಡುಗೆ ಏನೆಂಬುದನ್ನು ತಿಳಿದಿದ್ದರೂ ಸಹ ಈ ರೀತಿಯ ನಿರ್ಧಾರ ಕೈಗೊಳ್ಳಲು ಆಗುತ್ತಾ" ಎಂದು ಮರು ಪ್ರಶ್ನೆ ಕೇಳಿದರು. ಹಾಗೂ ಇನ್ನೂ ಮುಂದುವರೆದು ಮಾತನಾಡಿದ ಕೊಹ್ಲಿ "ಈ ವಿಷಯದ ಕುರಿತಾಗಿ ವಿವಾದ ಸೃಷ್ಟಿಸುವ ಇಚ್ಛೆ ಇದ್ದರೆ ಮೊದಲೇ ಹೇಳಿ" ಎಂದು ನೇರ ಉತ್ತರವನ್ನು ನೀಡಿದರು.