ಹೆಚ್ಚಿನ ರನ್ ಬಾರಿಸಿದ್ದಕ್ಕಲ್ಲ, ತಂಡವನ್ನು ಗೆಲ್ಲಿಸಿದ್ದಕ್ಕಾಗಿ ವಾರ್ನರ್ ಸರಣಿಶ್ರೇಷ್ಠ ಪಡೆದರು
ಡೇವಿಡ್ ವಾರ್ನರ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಲಭಿಸಿರುವುದು ಕುರಿತು ಮಾತನಾಡಿರುವ ವಾಸಿಂ ಅಕ್ರಂ "ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವುದಿಲ್ಲ. ಯಾವ ಆಟಗಾರ ಟೂರ್ನಿಯುದ್ದಕ್ಕೂ ತನ್ನ ತಂಡಕ್ಕೋಸ್ಕರ ಪ್ರದರ್ಶನವನ್ನು ನೀಡುತ್ತಾನೋ ಅಂತಹ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ" ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯಾಗಿ ಹೇಳುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಮ್ ಡೇವಿಡ್ ವಾರ್ನರ್ ಅವರಿಗಿಂತ ಹೆಚ್ಚಿನ ರನ್ ಬಾರಿಸಿದ್ದರೂ ಸಹ ಡೇವಿಡ್ ವಾರ್ನರ್ ತನ್ನ ತಂಡಕ್ಕೋಸ್ಕರ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಕಾರಣದಿಂದ ಆತನಿಗೆ ಸರಣಿಶ್ರೇಷ್ಠ ಲಭಿಸಿತು ಎಂಬುದನ್ನು ತಿಳಿಸಿದ್ದಾರೆ.
ಬಾಬರ್ ಅಜಮ್ ಅವರಿಗೆ ಸರಣಿಶ್ರೇಷ್ಠ ಸಿಗದೇ ಇದ್ದದ್ದು ಅನ್ಯಾಯ ಎಂದಿದ್ದ ಅಖ್ತರ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೇಬ್ ಅಖ್ತರ್ ಡೇವಿಡ್ ವಾರ್ನರ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಲಭಿಸಿದ ನಂತರ ಮಾತನಾಡಿದ್ದು ಐಸಿಸಿ ಆಯ್ಕೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ನಿಜಕ್ಕೂ ಬಾಬರ್ ಅಜಂ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನವಾಗುವುದನ್ನು ಎದುರು ನೋಡುತ್ತಿದ್ದೆ. ಖಂಡಿತಾ ಇದು ನ್ಯಾಯಯುವಲ್ಲದ ನಿರ್ಧಾರ" ಎಂದು ಟ್ವಿಟ್ಟರ್ನಲ್ಲಿ ಬರೆದು ಕೊಳ್ಳುವುದರ ಮೂಲಕ ಶೋಯೆಬ್ ಅಖ್ತರ್ ಡೇವಿಡ್ ವಾರ್ನರ್ ಬದಲು ಬಾಬರ್ ಅಜಮ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಬೇಕಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಾರ್ನರ್ ಪರ ಬ್ಯಾಟ್ ಬೀಸಿದ ಇರ್ಫಾನ್ ಪಠಾಣ್
ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ವಿಷಯದ ಕುರಿತಾಗಿ ಟ್ವೀಟ್ ಒಂದನ್ನು ಮಾಡಿ ಡೇವಿಡ್ ವಾರ್ನರ್ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡುವುದೇ ಬೇರೆ, ಆಟಗಾರ ತನ್ನ ತಂಡಕ್ಕೊಸ್ಕರ ಅತ್ಯುತ್ತಮ ಪ್ರದರ್ಶನ ನೀಡುವುದೇ ಬೇರೆ. ಎರಡನ್ನೂ ಬೆರೆಸುವ ಕೆಲಸ ಮಾಡಬೇಡಿ. ಆಟಗಾರನೋರ್ವನಿಗೆ ತನ್ನ ತಂಡವೇ ಯಾವಾಗಲೂ ಮೊದಲನೇ ಆದ್ಯತೆಯಾಗಿರುತ್ತದೆ" ಎಂದು ಟ್ವೀಟ್ ಮಾಡುವ ಮೂಲಕ ಇರ್ಫಾನ್ ಪಠಾಣ್ ಡೇವಿಡ್ ವಾರ್ನರ್ ಅವರು ತಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಬೆಂಬಲಿಸಿದ್ದಾರೆ.