ವೀರೇಂದ್ರ ಸೆಹ್ವಾಗ್, 2012ರ ವಿಶ್ವಕಪ್
ಭಾರತ ಅಂತಾರಾಷ್ಟ್ರೀಯ ಟಿ20 ತಂಡದ ಮೊದಲ ನಾಯಕ ವೀರೇಂದ್ರ ಸೆಹ್ವಾಗ್. ಇವರು ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯವನ್ನು 2012ರ ಟಿ20 ವಿಶ್ವಕಪ್ನಲ್ಲಿ ಕೊನೆಗೊಳಿಸಿದರು. ಈ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ ಅಂತಿಮ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ 14 ಎಸೆತ ಎದುರಿಸಿದ್ದ ವೀರೇಂದ್ರ ಸೆಹ್ವಾಗ್ 17 ರನ್ಗಳಿಸಿದ್ದರು. ನಂತರ ರಾಬಿನ್ ಪೀಟರ್ಸನ್ಗೆ ಸೆಹ್ವಾಗ್ ವಿಕೆಟ್ ಒಪ್ಪಿಸಿದ್ದರು.
ಜೋಗಿಂದರ್ ಶರ್ಮಾ, 2007ರ ವಿಶ್ವಕಪ್
2007ರ ಚೊಚ್ಚಲ ಆವೃತ್ತಿಯ ವಿಶ್ವಕಪ್ನಲ್ಲಿ ಭಾರತ ಗೆದ್ದು ಬೀಗಿದ ಕ್ಷಣವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಆ ಪಂದ್ಯದ ಅಂತಿಮ ಓವರ್ ಎಸೆದಿದ್ದ ಜೋಗಿಂದರ್ ಶರ್ಮಾ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವನ್ನು ಸಾರಿದ್ದರು. ಆದರೆ ಭಾರತೀಯ ಕ್ರಿಕೆಟ್ನ ಬಹುತೇಕ ಅಭಿಮಾನಿಗಳಿಗೆ ತಿಳಿಯದ ಸಂಗತಿಯೆಂದರೆ ಆ ಪಂದ್ಯದ ಬಳಿಕ ಜೋಗಿಂದರ್ ಶರ್ಮಾ ಭಾರತದ ಪರವಾಗಿ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ. ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. ಈ ನಾಲ್ಕು ಪಂದ್ಯಗಳು ಕೂಡ 2007ರ ಟಿ20 ವಿಶ್ವಕಪ್ನಲ್ಲಿ ಆಡಿದ ಪಂದ್ಯಗಳಾಗಿದೆ. ಹೀಗಾಗಿ 2007ರ ವಿಶ್ವಕಪ್ನ ಫೈನಲ್ ಪಂದ್ಯವೇ ಜೋಗಿಂದರ್ ಶರ್ಮಾ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಆರ್ಪಿ ಸಿಂಗ್, 2009ರ ವಿಶ್ವಕಪ್
2007ರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಮತ್ತೋರ್ವ ಸದಸ್ಯ ರುದ್ರ ಪ್ರತಾಪ್ ಸಿಂಗ್. ಆದರೆ ಆರ್ಪಿ ಸಿಂಗ್ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಅಂತ್ಯವಾಗಿದ್ದು 2009ರ ವಿಶ್ವಕಪ್ನಲ್ಲಿ. ನಾಟಿಂಗ್ಹ್ಯಾಮ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರ್ಪಿ ಸಿಂಗ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದರು.
ಅಜಿತ್ ಅಗರ್ಕರ್, 2007ರ ವಿಶ್ವಕಪ್
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಿತ್ ಅಗರ್ಕರ್ 2007ರ ವಿಶ್ವಕಪ್ನಲ್ಲಿ ತಮ್ಮ ಅಂತಿಮ ಅಂತಾರಾಷ್ಟ್ರೀಯ ಚುಟಕು ಪಂದ್ಯವನ್ನಾಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ನ ಉದ್ಘಾಟನಾ ಆವೃತ್ತಿಯ ಸೂಪರ್ 8ರ ಘಟ್ಟದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಗರ್ಕರ್ ಕೊನೆಯ ಪಂದ್ಯವನ್ನು ಆಡಿದರು. ಈ ಟೂರ್ನಿಯಲ್ಲಿ ಭಾರತ ಸೋಲು ಕಂಡ ಏಕೈಕ ಪಂದ್ಯ ಇದಾಗಿತ್ತು ಎಂಬುದು ಗಮನಾರ್ಹ.
ಲಕ್ಷ್ಮೀಪತಿ ಬಾಲಾಜಿ, 2012ರ ವಿಶ್ವಕಪ್
ಟಿ20 ವಿಶ್ವಕಪ್ನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಜೀವನ ಅಂತ್ಯಗೊಳಿಸಿದ ಮತ್ತೋರ್ವ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ. 2012ರ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಪಂದ್ಯದ ನಂತರ ಬಾಲಾಜಿ ಭಾರತದ ಪರವಾಗಿ ಒಂದೇ ಒಂದು ಟಿ20 ಪಂದ್ಯವನ್ನು ಕೂಡ ಆಡುವ ಅವಕಾಶ ದೊರೆಯಲಿಲ್ಲ. ಅಂತಿಮ ಪಂದ್ಯದಲ್ಲಿ ಬಾಲಾಜಿ 3.5 ಓವರ್ ಎಸೆದಿದ್ದು 37 ರನ್ ನೀಡಿ 3 ವಿಕೆಟ್ ಪಡೆದಿದ್ದರು.
ಜಹೀರ್ ಖಾನ್, 2012ರ ವಿಶ್ವಕಪ್
ಅಚ್ಚರಿಯೆಂಬಂತೆ ಭಾರತ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿರುವ ಜಹೀರ್ ಖಾನ್ ಕೂಡ 2012ರ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ. ಲಕ್ಷ್ಮೀಪತಿ ಬಾಲಾಜಿ ರೀತೊಯಲ್ಲಿಯೇ ಜಹೀರ್ ಖಾನ್ ಕೂಡ ಈ ಪಂದ್ಯದ ನಂತರ ಒಂದೇ ಒಂದು ಅವಕಾಶವನ್ನು ಪಡೆದುಕೊಂಡಿಲ್ಲ. ಈ ಪಂದ್ಯದಲ್ಲಿ ಜಹೀರ್ ಖಾನ್ ನಾಲ್ಕು ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದುಕೊಂಡಿದ್ದರು.
ಇರ್ಫಾನ್ ಪಠಾಣ್, 2012ರ ವಿಶ್ವಕಪ್
2007ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಇರ್ಫಾನ್ ಪಠಾಣ್ 2012ರ ವಿಶ್ವಕಪ್ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಯೇ ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಕೂಡ ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯವನ್ನು ಭಾರತ 1 ರನ್ಗಳ ಅಂತರದಿಂದ ಗೆದ್ದುಕೊಂಡಿದ್ದರು ಕೂಡ ಟೂರ್ನಿಯಿಂದ ಹೊರಬಿದ್ದಿತ್ತು. ಈ ಪಂದ್ಯದ ನಂತರ ಇರ್ಫಾನ್ ಪಠಾಣ್, ಝಹೀರ್ ಖಾನ್, ಲಕ್ಷ್ಮೀಪತಿ ಬಾಲಾಜಿ ಹಾಗೂ ವೀರೇಂದ್ರ ಸೆಹ್ವಾಗ್ ಈ ನಾಲ್ವರು ಕ್ರಿಕೆಟಿಗರು ಕೂಡ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಕೂಡ ಆಡುವ ಅವಕಾಶ ದೊರೆಯಲಿಲ್ಲ. ಇರ್ಫಾನ್ ಪಠಾಣ್ ಈ ಪಂದದ್ಯದಲ್ಲಿ 3 ಓವರ್ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದುಕೊಂಡಿದ್ದರು.