ಭಾರತ ತಂಡವನ್ನು ಹೆಸರಿಸಿದ ಗಂಭೀರ್
ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ದುಬೈನ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಅಕ್ಟೋಬರ್ 24ರಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಯಾವ ರೀತಿಯ ಆಡುವ ಬಳಗದೊಂದಿಗೆ ಕಣಕ್ಕಿಳಿಯಬೇಕು ಎಂಬುದಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಉತ್ತರವನ್ನು ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಬಲಿಷ್ಠ ಆಡುವ ಬಳಗ ಹೇಗಿರಬೇಕು ಎಂದು ಗಂಭೀರ್ ಹೆಸರಿಸಿದ್ದಾರೆ.
ಗಂಭೀರ್ ಹೆಸರಿಸಿದ ತಂಡ
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೆಸರಿಸಿದ ಭಾರತೀಯ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಅಚ್ಚರಿಯ ಬದಲಾವಣೆಗಳು ಇಲ್ಲ. ಆರಂಭಿಕರಾಗಿ ಭಾರತದ ಖಾಯಂ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರನ್ನು ಗಂಭೀರ್ ಹೆಸರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿಯನ್ನು ಸೂಚಿಸಿದರೆ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಐದನೇ ಕ್ರಮಾಂಕಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಹೆಸರು ಸೂಚಿಸಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್.
ಗಂಭೀರ್ ತಂಡದಲ್ಲಿ ಅಶ್ವಿನ್ಗಿಲ್ಲ ಸ್ಥಾನ
ಕುತೂಹಲಕಾರಿ ಸಂಗತಿಯೆಂದರೆ ಗೌತಮ್ ಗಂಭೀರ್ ಹೆಸರಿಸಿದ ಈ ತಂಡದಲ್ಲಿ ಅನುಭವು ಆರ್ ಅಶ್ವಿನ್ಗೆ ಸ್ಥಾನವನ್ನು ನೀಡಿಲ್ಲ. ಇವರ ಬದಲಿಗೆ ವರುಣ್ ಚಕ್ರವರ್ತಿಯನ್ನು ಸ್ಪಿನ್ನರ್ ಆಗಿ ಹೆಸರಿಸಿದ್ದಾರೆ. ರವೀಂದ್ರ ಜಡೇಜಾರನ್ನು ಕೂಡ ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಹೆಸರಿಸಲಾಗಿದೆ. ಇನ್ನು ಈ ಆಡುವ ಬಳಗದಲ್ಲಿ ಮೂವರು ವೇಗಿಗಳನ್ನು ಸೇರಿಸಿಕೊಂಡಿದ್ದು ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬೂಮ್ರಾ ವೇಗದ ಬೌಲಿಂಗ್ ಜವಾಬ್ಧಾರಿ ನೀಡಲಾಗಿದೆ.
ಗಂಭೀರ್ ಹೆಸರಿಸಿದ ಸಂಪೂರ್ಣ ತಂಡ ಹೀಗಿದೆ
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ