ಕೆಎಲ್ ರಾಹುಲ್ ಮೇಲೆ ಬ್ರೇಟ್ ಲೀಗೆ ಭರವಸೆ
ಈ ಭಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರವಾಗಿ ಕೆಎಲ್ ರಾಹುಲ್ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ ಎಂದು ಬ್ರೇಟ್ ಲೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಶ್ವಕಪ್ನಲ್ಲಿ ರಾಹುಲ್ ಸುತ್ತ ತಂಡವನ್ನು ಬೆಳೆಸಬೇಕಿದ್ದು ಇದರಿಂದಾಗಿ ನಾಯಕ ವಿರಾಟ್ ಕೊಹ್ಲಿಯ ಮೇಲಿರುವ ಒತ್ತಡ ಕೂಡ ಕಡಿಮೆಯಾಗಲಿದೆ ಎಂದಿದ್ದಾರೆ. "ಕೆಎಲ್ ರಾಹುಲ್ ಮುಂಬರುವ ಟಿ20 ವಿಶ್ವಕಪ್ನಲ್ಲಿಯೂ ಅತ್ಯಂತ ಹೆಚ್ಚು ರನ್ಗಳಿಸುವ ಆಟಗಾರನಾಗಲಿದ್ದಾರೆ ಎಂದು ನಾನು ವಿಶ್ವಾಸವನ್ನು ಹೊಂದಿದ್ದೇನೆ. ಅವರು ಐಪಿಎಲ್ನಲ್ಲಿ ಅದ್ಭುವಾದ ಪ್ರದರ್ಶನ ನೀಡಿದ್ದರು" ಎಂದಿದ್ದಾರೆ ಬ್ರೇಟ್ ಲೀ.
ಕೆಎಲ್ ರಾಹುಲ್ ತಂಡಕ್ಕೆ ಆಧಾರಸ್ಥಂಭವಾಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ತಂಡವನ್ನು ಆತನ ಸುತ್ತಲೇ ಕಟ್ಟಬಹುದಾಗಿದೆ. ಯಾಕೆಂದರೆ ಆ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕೆಎಲ್ ರಾಹುಲ್ ಬಳಿಯಿದೆ. ರಾಹುಲ್ ಉತ್ತಮವಾಗಿ ರನ್ಗಳಿಸಿದರೆ ನಾಯಕ ವಿರಾಟ್ ಕೊಹ್ಲಿ ಮೇಲಿರುವ ಒತ್ತಡ ಸಹಜವಾಗಿಯೇ ಕಡಿಮೆಯಾಗಲಿದೆ" ಎಂದು ಬ್ರೇಟ್ ಲೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಪ್ರದರ್ಶನದ ಮೇಲೆ ಪ್ರಭಾವ ಬೀರಲಿದೆ ರಾಹುಲ್ ಆಟ
ಇನ್ನು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೆಎಲ್ ರಾಹುಲ್ ಉತ್ತಮ ಆಟವನ್ನು ಪ್ರದರ್ಶಿಸಿದರೆ ಅದು ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆಯೂ ಪರಿಣಾಮ ಬೀರಲಿದೆ ಎಂದು ಬ್ರೇಟ್ ಲೀ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಉತ್ತಮ ಪ್ರದರ್ಶನ ನೀಡಿದರೆ ವಿರಾಟ್ ಕೊಹ್ಲಿ ತಮ್ಮ ಸ್ವಾಭಾವಿಕ ಆಟವನ್ನು ಆಡಲು ಸಾಧ್ಯವಿದೆ. ಅಲ್ಲದೆ ಇದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೊನೆಯ ಟಿ20 ವಿಶ್ವಕಪ್ ಆಗಿರುವ ಕಾರಣದಿಂದಾಗಿ ಆತ ಅತ್ಯುತ್ತಮ ಪ್ರದರ್ಶನ ನೀಡಲು ಹಾತೊರೆಯುತ್ತಿದ್ದಾರೆ ಎಂದು ಬ್ರೇಟ್ ಲೀ ಹೇಳಿಕೆ ನೀಡಿದ್ದಾರೆ.
ಐಪಿಎಲ್ನ ಎರಡನೇ ಚರಣದ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅಮೋಘ ಆಟವನ್ನು ಪ್ರದರ್ಶಿಸಿದ್ದಾರೆ. ಯುಎಇನಲ್ಲಿ ಆಡಿದ 6 ಪಂದ್ಯಗಳಲ್ಲಿ ಕೆಎಲ್ ರಾಹುಲ್ 295 ರನ್ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ಗೆ ಅತ್ಯುತ್ತಮ ಫಾರ್ಮ್ನೊಂದಿಗೆ ಸಜ್ಜಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ಬಗ್ಗೆಯೂ ಲೀ ಭರವಸೆಯ ಮಾತು
ಇನ್ನು ಇದೇ ಸಂದರ್ಭದಲ್ಲಿ ಈ ವರ್ಷ ಟೀಮ್ ಇಂಡಿಯಾದ ಪರವಾಗಿ ಮೊದಲ ಬಾರಿಗೆ ಆಡುವ ಅವಕಾಶ ಪಡೆದುಕೊಂಡ ಸೂರ್ಯಕುಮಾರ್ ಯಾದವ್ ಭಾರತ ತಂಡದ ಭವಿಷ್ಯದ ಅತ್ಯುತ್ತಮ ಆಟಗಾರನಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನೀವು ಉತ್ತಮ ಆಟಗಾರರ ಬಗ್ಗೆ ಮಾತನಾಡುತ್ತೀರಾದರೆ ಸೂರ್ಯಕುಮಾರ್ ಯಾದವ್ ಹೆಸರನ್ನು ಆಯ್ದುಕೊಳ್ಳಲೇಬೇಕು. ಆತ ಭವಿಷ್ಯದಲ್ಲಿ ಭಾರತದ ಅದ್ಭುತ ಆಟಗಾರನಾಗಬಲ್ಲ ಕ್ರಿಕೆಟಿಗ. ಭಾರತ ಖಂಡಿತವಾಗಿಯೂ ಅದ್ಭುತವಾದ ಆಯ್ಕೆಯೊಂದನ್ನು ಮಾಡಿದೆ. ಈ ಆಯ್ಕೆಯಲ್ಲಿ ಭಾರತ ಗೆಲ್ಲುವ ವಿಶ್ವಾಸ ನನಗಿದೆ" ಎಂದಿದ್ದಾರೆ ಬ್ರೇಟ್ ಲೀ.
ಟ್ರೋಫಿ ಗೆಲ್ಲುವ ಸ್ಪರ್ಧೆಯಲ್ಲಿ ಭಾರತ ಮುಂದಿದೆ
ಇನ್ನು ಇದೇ ಸಂದರ್ಭದಲ್ಲಿ ಈ ಬಾರಿಯ ವಿಶ್ವಕಪ್ ಗೆಲ್ಲುವ ಸ್ಪರ್ಧೆಯಲ್ಲಿ ಭಾರತ ಅತ್ಯಂತ ಬಲಿಷ್ಠವಾದ ತಂಡವಾಗಿದೆ ಎಂಬ ಮಾತನ್ನು ಕೂಡ ಬ್ರೇಟ್ ಲೀ ಹೇಳಿದ್ದಾರೆ. ಭಾರತ 2007ರಲ್ಲಿ ಚಿಚ್ಚಲ ಟಿ20 ವಿಶ್ವಕಪ್ಅನ್ನು ಗೆದ್ದುಕೊಂಡಿತ್ತು. ಈ ಬಾರಿ ಭಾರತದ ಟಿ20 ವಿಶ್ವಕಪ್ನ ಅಭಿಯಾನ ಪಾಕಿಸ್ತಾನ ತಂಡದ ವಿರುದ್ಧ ಅಕ್ಟೋಬರ್ 24ರಂದು ನಡೆಯುವ ಮೂಲಕ ಆರಂಭವಾಗಲಿದೆ.