ಭಾರತೀಯ ಅಭಿಮಾನಿಗಳಿಗೆ ಕಾಡಿದ ಚಾಹಲ್ ಅನುಪಸ್ಥಿತಿ
"ಯುಜುವೇಂದ್ರ ಚಾಹಲ್ ಈ ಪಂದ್ಯದಲ್ಲಿ ಇರಬೇಕಿತ್ತು. ಆತ ಇದ್ದಿದ್ರೆ ಪಾಕಿಸ್ತಾನದ ಆರಂಭಿಕ ಜೋಡಿಯ ಜೊತೆಗಾರಿಕೆಯನ್ನು ಮುರಿಯುತ್ತಿದ್ದ. ಇದು ಭಾರತದ ಮೇಲುಗೈಗೆ ಕಾರಣವಾಗ್ತಿತ್ತು" ಹೀಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅನುಭವಿ ಸ್ಪಿನ್ನರ್ನ ಅನುಪಸ್ಥಿತಿಗೆ ಬೇಸರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಚಾಹಲ್ ಇರಬೇಕುತ್ತು ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಟೀಮ್ ಇಂಡಿಯದ ಬೌಲರ್ಗಳಿಂದ ವಿಕೆಟ್ ಪಡೆಯಲು ಅಸಾಧ್ಯವಾಗಿದ್ದು ಅಭಿಮಾನಿಗಳ ಅಭಿಪ್ರಾಯಕ್ಕೆ ಕಾರಣವಾಗಿದೆ.
ಐಪಿಎಲ್ನಲ್ಲಿ ಮಿಂಚಿದ್ದ ಚಾಹಲ್
ಇನ್ನು ಈ ಸಂದರ್ಭದಲ್ಲಿ ಯುಜುವೇಂದ್ರ ಚಾಹಲ್ ಅಭಿಮಾನಿಗಳೀಗೆ ಹೆಚ್ಚು ಕಾಡಲು ಕಾರಣವೂ ಇಲ್ಲದಿಲ್ಲ. ಟೀಮ್ ಇಂಡಿಯಾದ ಪರವಾಗಿ ಯಾವಾಗಲೂ ವಿಕೆಟ್ ಪಡೆಯುವಂತಾ ಬೌಲರ್ ಆಗಿದ್ದ ಚಾಹಲ್ ಈ ಬಾರಿಯ ಐಪಿಎಲ್ಗೂ ಹಿಂದಿನ ಕೆಲ ಸೀಮಿತ ಓವರ್ಗಳ ಸರಣಿಯಲ್ಲಿ ಮಂಕಾದಂತೆ ಕಂಡು ಬಂದಿದ್ದರು. ಶ್ರೀಲಂಕಾ ಸರಣಿಯಲ್ಲಿಯೂ ಚಾಹಲ್ ಪರಿಣಾಮಕಾರಿಯೆನಿಸಿರಲಿಲ್ಲ. ಹೀಗಾಗಿ ಯುಎಇಯ ನಿಧಾನಗತಿಯ ಪಿಚ್ನಲ್ಲಿ ಚಾಹಲ್ಗಿಂತ ಯುವ ಬೌಲರ್ ರಾಹುಲ್ ಚಹರ್ ಉತ್ತಮ ಆಯ್ಕೆ ಎಂದು ಆಯ್ಕೆ ಸಮಿತಿ ನಿರ್ಧರಿಸಿತ್ತು. ಆದರೆ ಐಪಿಎಲ್ನ ಎರಡನೇ ಚರಣದಲ್ಲಿ ಯುಜುವೇಂದ್ರ ಚಾಹಲ್ ತನ್ನ ಹಳೆಯ ಫಾರ್ಮ್ ಕಂಡುಕೊಂಡಿದ್ದರು. ಆರ್ಸಿಬಿ ಪರವಾಗಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿ ಹರಿಸಲು ಯಶಸ್ವಿಯಾಗಿದ್ದರು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಚಾಹಲ್ ಇದ್ದಿದ್ದರೆ ಭಾರತದ ಪರವಾಗಿ ಫಲಿತಾಂಶ ಬರುತ್ತಿತ್ತೇನೋ ಎಂಬುದು ಅಭಿಮಾನಿಗಳ ಲೆಕ್ಕಾಚಾರ.
ಹರ್ಷಲ್ ಇರಬೇಕಿತ್ತು, ಅಶ್ವಿನ್ ಆಡಿಸಬೇಕಿತ್ತು, ಶಾರ್ದೂಲ್ ಕೂಡ ಬೇಕಿತ್ತು!
ಇನ್ನು ಭಾರತೀಯ ಅಭಿಮಾನಿಗಳು ಯುಜುವೇಂದ್ರ ಚಾಹಲ್ ನಂತರ ಹರ್ಷಲ್ ಪಟೇಲ್ ಬೌಲಿಂಗ್ ಕೂಡ ಮಿಸ್ ಮಾಡಿಕೊಂಡಿದ್ದಾರೆ. ಐಪಿಎಲ್ನಲ್ಲಿ ಮಿಂಚಿದ್ದ ಹರ್ಷಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡಿದ್ದರೆ ವಿಕೆಟ್ ಪಡೆಯುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೊತೆಗೆ ಆರ್ ಅಶ್ವಿನ್, ಶಾರ್ದೂಲ್ ಠಾಕೂರ್ ಆಡುವ ಬಳಗದಲ್ಲಿ ಸ್ಥಾನ ಪಡೆಯಬೇಕಿತ್ತು ಎಂಬಂತಾ ಅಭಿಪ್ರಾಯಗಳು ಕೂಡ ಜೋರಾಗಿ ವ್ಯಕ್ತವಾಗುತ್ತಿದೆ.
ಹಾರ್ದಿಕ್ ಯಾಕೆ? ಭುವಿ ಬೇಡ!
ಇನ್ನು ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡ ಕೆಲ ಆಟಗಾರರ ಬಗ್ಗೆಯೂ ಕೆಲ ಕ್ರಿಕೆಟ್ ಪ್ರೇಮಿಗಳ ಬೇಸರ ವ್ಯಕ್ತವಾಗುತ್ತಿದೆ. ಬೌಲಿಂಗ್ ಮಾಡಲು ಅಸಮರ್ಥರಾಗಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ನಲ್ಲಿಯೂ ಫಾರ್ಮ್ನಲ್ಲಿಲ್ಲ. ಯುಎಇನ ಸ್ಲೋ ಪಿಚ್ನಲ್ಲಿ ಹಾರ್ದಿಕ್ ಬ್ಯಾಟಿಂಗ್ಗೆ ಪರದಾಡುತ್ತಿದ್ದಾರೆ. ಹೀಗಾಗಿ ಆಡುವ ಬಳಗದಿಂದ ಹಾರ್ದಿಕ್ ಪಾಂಡ್ಯ ಹೊರಗಿಟ್ಟಿದ್ದರೆ ಚೆನ್ನಾಗಿತ್ತು. ಭುವನೇಶ್ವರ್ ಕುಮಾರ್ ಫಾರ್ಮ್ನಲ್ಲಿಲ್ಲದಿದ್ದರೂ ಆಡುವ ಬಳಗಕ್ಕೆ ಸೇರ್ಪಡೆಗೊಳಿಸಿದ್ದು ದುಬಾರಿಯಾಯಿತು ಎಂಬುದು ಕ್ರಿಕೆಟ್ ಪ್ರೇಮಿಗಳ ಸೋಲಿನ ವಿಮರ್ಶೆಯಾಗಿದೆ.