ಭಾರತದ ಲೆಕ್ಕಾಚಾರ ತಪ್ಪಿದ್ದು ಆತನಿಂದ
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ಸಲ್ಮಾನ್ ಬಟ್ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ವರುಣ್ ಚಕ್ರವರ್ತಿಯನ್ನು ಸೇರ್ಪಡೆಗೊಳಿಸುವ ಮೂಲಕ ತಪ್ಪು ಹೆಜ್ಜೆಯಿಟ್ಟಿತು ಎಂದಿದ್ದಾರೆ. ವರುಣ್ ಚಕ್ರವರ್ತಿಯ ಬೌಲಿಂಗ್ ಶೈಲಿ ಪಾಕಿಸ್ತಾನದ ಆಟಗಾರರ ಪಾಲಿಗೆ ಮಿಸ್ಟರಿ ಬೌಲಿಂಗ್ ಆಗಿರಲಿಲ್ಲ. ಯಾಕೆಂದರೆ ಆ ರೀತಿಯ ಬೌಲಿಂಗ್ಅನ್ನು ಪಾಕಿಸ್ತಾನದ ಆಟಗಾರರು ಬಹಳಷ್ಟು ಎದುರಿಸಿದ್ದಾರೆ ಎಂದು ಸಲ್ಮಾನ್ ಬಟ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನುಭವಿ ಆರ್ ಅಶ್ವಿನ್ ಬದಲಿಗೆ ವರುಣ್ ಚಕ್ರವರ್ತಿಯನ್ನು ಆಡುವ ಬಳಗಕ್ಕೆ ಸೇರ್ಪಡೆಗೊಳಿಸಿತ್ತು ಭಾರತ. ಐಪಿಎಲ್ನಲ್ಲಿ ಅದ್ಭುತ ಬೌಲಿಂಗ್ ಮೂಲಕ ಮಿಂಚಿದ್ದ ವರುಣ್ ಪಾಕಿಸ್ತಾನದ ವಿರುದ್ಧ ಪರಿಣಾಮಕಾರಿಯಾಗಿರಲಿಲ್ಲ. ನಾಲ್ಕು ಓವರ್ಗಳಲ್ಲಿ ವರುಣ್ 33 ರನ್ ನೀಡಿದ್ದರು.
ಪ್ರತಿ ಬೀದಿಯಲ್ಲೂ ಇಂತಾ ಬೌಲರ್ಗಳಿದ್ದಾರೆ
ಸಲ್ಮಾನ್ ಬಟ್ ವರುಣ್ ಚಕ್ರವರ್ತಿ ಬೌಲಿಂಗ್ ಬಗ್ಗೆ ವಿಮರ್ಶೆ ಮಾಡುತ್ತಾ ನಾಲಿಗೆ ಹರಿಬಿಟ್ಟಿದ್ದಾರೆ. "ವರುಣ್ ಚಕ್ರವರ್ತಿ ಮಿಸ್ಟ್ರಿ ಬೌಲರ್ ಆಗಿರಬಹುದು. ಆದರೆ ಆತನ ಬೌಲಿಂಗ್ನಿಂದ ನಮಗೆ ಯಾವುದೇ ಆಶ್ಚರ್ಯವಾಗಿಲ್ಲ. ಪಾಕಿಸ್ತಾನದಲ್ಲಿ ಮಕ್ಕಳು ಪ್ರತಿ ರಸ್ತೆಯಲ್ಲಿ ಕೂಡ ಇಂತಾ ಬೌಲಿಂಗ್ ದಾಳಿಯನ್ನು ಎದುರಿಸುತ್ತಾರೆ. ಅದರಲ್ಲೇನೂ ವಿಶೇಷತೆಯಿಲ್ಲ" ಎಂದಿದ್ದಾರೆ ಸಲ್ಮಾನ್ ಬಟ್. ಈ ಮೂಲಕ ಭಾರತದ ಯುವ ಪ್ರತಿಭಾನ್ವಿತ ಬೌಲರ್ ಬಗ್ಗೆ ಗೆದ್ದ ಉತ್ಸಾಹದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಹಗುರವಾಗಿ ಮಾತನಾಡಿದ್ದಾರೆ.
ಸಮರ್ಥನೆ ನೀಡಿದ ಸಲ್ಮಾನ್
ಇನ್ನು ಸಲ್ಮಾನ್ ಬಟ್ ತನ್ನ ಈ ಮಾತಿಗೆ ಸಮರ್ಥನೆಯನ್ನು ಕೂಡ ನೀಡಿದ್ದಾರೆ. "ವೃತ್ತಿ ಜೀವನದ ಆರಂಭದಲ್ಲಿ ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್ ಕೂಡ ಹಲವಾರು ದೇಶಗಳ ವಿರುದ್ಧ ಇದೇ ಶೈಲಿಯ ಮಿಸ್ಟ್ರಿ ಬೌಲಿಂಗ್ ಮೂಲಕ ಭಾರೀ ಯಶಸ್ಸು ಸಾಧಿಸಿದ್ದರು. ಆದರೆ ಪಾಕಿಸ್ತಾನದ ವಿರುದ್ಧ ಅವರ ದಾಖಲೆ ಉತ್ತಮವಾಗಿಲ್ಲ. ನಮಗೆ ಯಾವತ್ತಿಗೂ ಆತನ ಬೌಲಿಂಗ್ ಮಿಸ್ಟ್ರೀ ಎನಿಸಲಿಲ್ಲ. ಯಾಕೆಂದರೆ ನಾವು ಅಂತಾ ಬೌಲಿಂಗ್ಅನ್ನು ಬಾಲ್ಯದಿಂದಲೇ ಎದುರಿಸಿಕೊಂಡು ಬೆಳೆದಿದ್ದೇವೆ" ಎಂದಿದ್ದಾರೆ ಸಲ್ಮಾನ್ ಬಟ್.
ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧ
ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಾಡಲಿದೆ. ಈ ಪಂದ್ಯ ಮುಂದಿನ ಭಾನುವಾರ ನಡೆಯಲಿದ್ದು ಬಲಿಷ್ಠ ಕಿವೀಸ್ ಪಡೆಯ ಮುಂದೆ ಭಾರತ ಗೆಲ್ಲಬೇಕಿದೆ. ಈ ಮೂಲಕ ಭಾರತ ಕಮ್ಬ್ಯಾಕ್ ಮಾಡುವುದು ಅಗತ್ಯವಾಗಿದೆ. ಇನ್ನು ಪಾಕಿಸ್ತಾನಕ್ಕೂ ಕೂಡ ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧವೇ ನಡೆಯಲಿದೆ. ಈ ಪಂದ್ಯ ಒಆಕಿಸ್ತಾನ ಭಾರತಕ್ಕಿಂತ ಮೊದಲು ಅಂದರೆ ಮುಂದಿನ ಬುಧವಾರವೇ ಕಿವೀಸ್ ಪಡೆಯನ್ನು ಎದುರಿಸಲಿದೆ.