ಮೆಲ್ಬರ್ನ್ನಲ್ಲಿ ಪಂದ್ಯ ನಡೆಯುತ್ತಿರುವುದು ಖುಷಿ
ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಮಾತನಾಡಿದ್ದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಅಲ್ಲದೆ ಮೆಲ್ಬರ್ನ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿರುವುದು ತನಗೆ ಖುಷಿ ನೀಡಿದೆ ಎಂದಿದ್ದಾರೆ. "ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಿದರೆ ನನ್ನ ವಿರುದ್ಧ ಭಾರತಕ್ಕೆ ಆಡಲು ಸುಲಭವಿಲ್ಲ. ವಿಶ್ವಕಪ್ ಪಂದ್ಯ ಮೆಲ್ಬರ್ನ್ನಲ್ಲಿ ನಡೆಯುತ್ತಿರುವ ಕಾರಣ ನನಗೆ ಬಹಳ ಖುಷಿಯಾಗಿದೆ. ಅದು ನನ್ನ ತವರು ಅಂಗಳವಾಗಿದೆ ಯಾಕೆಂದರೆ ನಾನು ಮೆಲ್ಬರ್ನ್ ಸ್ಟಾರ್ಸ್ ತಂಡದ ಪರವಾಗಿ ಆಡುತ್ತೇನೆ" ಎಂದಿದ್ದಾರೆ ಹ್ಯಾರಿಸ್ ರೌಫ್.
ಈಗಾಗಲೇ ಪ್ಲಾನಿಂಗ್ ಸಿದ್ಧ
ಮುಂದುವರಿದು ಮಾತನಾಡಿದ ರೌಫ್, "ಮೆಲ್ಬರ್ನ್ ಮೈದಾನದ ಪರಿಸ್ಥಿತಿ ನನಗೆ ಬಹಳ ಚೆನ್ನಾಗಿ ಅರಿವಿದೆ. ಅಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿರುವುದು ನನ್ನ ನೆರವಿಗೆ ಬರಲಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬುದಕ್ಕೆ ನಾನು ಈಗಾಗಲೇ ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ" ಎಂದಿದ್ದಾರೆ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್. ಭಾರತ ಹಾಗೂ ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲವಾದರೂ ಮೆಲ್ಬರ್ನ್ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುವ ಮೂಲಕ ಈ ವರ್ಷದಲ್ಲಿ ಮೂರನೇ ಬಾರಿಗೆ ಈ ಎರಡು ತಂಡಗಳು ಹಣಾಹಣಿ ನಡೆಸಿದಂತಾಗುತ್ತದೆ.
ಏಷ್ಯಾ ಕಪ್ನಲ್ಲಿ ಆಡಿದ್ದ ಹ್ಯಾರಿಸ್ ರೌಫ್
ಪಾಕಿಸ್ತಾನದ ಹ್ಯಾರಿಸ್ ರೌಫ್ ಏಷ್ಯಾ ಕಪ್ನಲ್ಲಿ ಭಾರತದ ವಿರುದ್ಧ ಆಡಿದ್ದ ಎರಡು ಪಂದ್ಯದಲ್ಲಿಯೂ ಕಣಕ್ಕಿಳಿದ್ದರು. ಲೀಗ್ ಹಂತದಲ್ಲಿ ಆಡಿದ್ದ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನಿಡಿದ್ದು ಈ ಪಂದ್ಯದಲ್ಲಿ ಹ್ಯಾರಿಸ್ ರೌಫ್ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದರು. ಆದರೆ ಸೂಪರ್ 4 ವಿಭಾಗದಲ್ಲಿ ತಂಡದ ಪ್ರಮುಖ ಆಟಗಾರ ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಯಶಸ್ಸು ಸಾಧಿಸಿದ್ದರು.
ಕಳೆದ ವಿಶ್ವಕಪ್ನಲ್ಲಿ ಒತ್ತಡದಿಂದ ಆಡಿದ್ದೆ ಎಂದ ರೌಫ್
ಇನ್ನು ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಒತ್ತಡದ ಬಗ್ಗೆ ಪಾಕಿಸ್ತಾನದ ಈ ವೇಗಿ ಹೇಳಿಕೊಂಡಿದ್ದಾರೆ. "ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಯಾವಾಗಲೂ ಅತ್ಯಂತ ಒತ್ತಡದ ಪಂದ್ಯವಾಗಿರುತ್ತದೆ. ಕಳೆದ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಆಡಿದ್ದ ಪಂದ್ಯದ ಸಂದರ್ಭದಲ್ಲಿ ನಾನು ಸಾಕಷ್ಟು ಒತ್ತಡವನ್ನು ಅನುಭವಿಸಿದ್ದೆ. ಆದರೆ ಕಳೆದ ಏಷ್ಯಾಕಪ್ನಲ್ಲಿ ನಡೆದ ಎರಡು ಪಂದ್ಯದಲ್ಲಿಯೂ ನನಗೆ ಒತ್ತಡದ ಅನುಭವವಾಗಿಲ್ಲ. ಯಾಕೆಂದರೆ ನನ್ನ ಅತ್ಯುತ್ತಮ ಪ್ರದರ್ಶನವನ್ನು ನಾನು ನೀಡಬೇಕು ಎಂಬುದು ನನಗೆ ಅರಿವಾಗಿತ್ತು" ಎಂದಿದ್ದಾರೆ.