ಅಗ್ರಕ್ರಮಾಂಕ ಬ್ಯಾಟರ್ಗಳ ಪ್ರದರ್ಶನ ಸಮಾಧಾನ
ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಇತ್ತೀಚೆಗೆ ತನ್ನಲ್ಲಿನ ಬಹುತೇಕ ಕೊರತೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಗ್ರ ಕ್ರಮಾಂಕದ ನಾಲ್ವರು ಆಟಗಾರರು ಕೂಡ ಅದ್ಭುತ ಫಾರ್ಮ್ನಲ್ಲಿದ್ದು ತಂಡದ ಯಶಸ್ಸಿನಲ್ಲಿ ಸ್ಥಿರವಾಗಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆತಂಭಿಕ ಸ್ಥಾನದ ಗೊಂದಲಕ್ಕೆ ಪೂರ್ಣವಿರಾಮವಿಟ್ಟಿದ್ದಾರೆ. ಕೆಎಲ್ ರಾಹುಲ್ ಕಳೆದ ಎರಡು ಪಂದ್ಯಗಳಲ್ಲಿ ನೀಡಿದ ಸಮಯೋಚಿತ ಪ್ರದರ್ಶನಗಳು ತಂಡಕ್ಕೆ ಹೊಸ ಹುಮ್ಮಸ್ಸು ನೀಡಿದೆ. ಇನ್ನು ಆಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ಮುಂದುವರಿದಿದ್ದರೆ ಸೂರ್ಯಕುಮಾರ್ ಅಬ್ಬರಕ್ಕೂ ಅಡಿವಾಣ ಹಾಕುವುದು ಎದುರಾಳಿಗಳಿಗೆ ಅಸಾಧ್ಯವಾಗುತ್ತಿದೆ. ಈ ಮೂಲಕ ಟೀಮ್ ಇಂಡಿಯಾ ಬ್ಯಾಟಿಂಗ್ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸುತ್ತಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಕೂಡ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವುದು ಗಮನಾರ್ಹ.
ವಿಕೆಟ್ ಕೀಪರ್ ಬ್ಯಾಟರ್ ಬಗ್ಗೆ ಗೊಂದಲ
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಸದ್ಯಕ್ಕೆ ಗೊಂದಲಕಾರಿಯಾಗಿ ಕಾಣಿಸುತ್ತಿರುವುದು ವಿಕೆಟ್ ಕೀಪರ್ ಬ್ಯಾಟರ್ ಸ್ಥಾನ. ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಈ ಸ್ಥಾನಕ್ಕೆ ತೀವ್ರ ಪೈಪೋಟಿಯಲ್ಲಿದ್ದಾರೆ. ಆದರೆ ಟಿ20 ಮಾದರಿಯಲ್ಲಿ ಉತ್ತಮವಾಗಿ ಪ್ರದರ್ಶನ ನಿಡಲು ವಿಫಲವಾಗಿರುವುದು ಸ್ಥಾನ ಪಡೆಯಲು ಹಿಂದುಳಿಯುವಂತೆ ಮಾಡಿದೆ. ಮತ್ತೊಂದೆಡೆ ದಿನೇಶ್ ಕಾರ್ತಿಕ್ ಅಂತಿಮ ಐದು ಓವರ್ಗಳಲ್ಲಿ ನೀಡುತ್ತಿರುವ ಪ್ರದರ್ಶನ ಅಮೋಘವಾಗಿದ್ದು ತಂಡಕ್ಕೆ ಬಹಳಷ್ಟು ನೆರವಾಗುತ್ತಿದೆ. ಹಾಗಿದ್ದರೂ ರವೀಂದ್ರ ಜಡೇಜಾ ತಂಡದಲ್ಲಿ ಇಲ್ಲದಿರುವ ಕಾರಣದಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ ಎಡಗೈ ಆಟಗಾರನನ್ನು ಮ್ಯಾನೇಜ್ಮೆಂಟ್ ನಿರೀಕ್ಷಿಸುತ್ತಿದೆ. ಹೀಗಾಗಿ ಪಂತ್ ಹಾಗೂ ಡಿಕೆ ಮಧ್ಯೆ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಮುಂದುವರಿದಿದೆ.
ಬೌಲಿಂಗ್ ವಿಭಾಗದ್ದೇ ಆತಂಕ
ಟೀಮ್ ಇಂಡಿಯಾ ಅತಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರುವ ವಿಭಾಗವೇ ಬೌಲಿಂಗ್ ವಿಭಾಗ. ವಿಶ್ವಕಪ್ಗೆ ಆಯ್ಕೆಯಾಗಿರುವ ಬೌಲರ್ಗಳ ಪೈಕಿ ಜಸ್ಪ್ರೀತ್ ಬೂಮ್ರಾ ಗಾಯಗೊಂಡಿರುವುದು ವಿಶ್ವಕಪ್ಗೆ ಭಾಗಿಯಾಗುವುದೇ ಅನುಮಾನವಾಗಿರುವುದು ಒಂದು ಅಂಶವಾದರೆ ಮತ್ತೊಂದೆಡೆ ಇತರ ಬೌಲರ್ಗಳು ಭಾರೀ ರನ್ ಬಿಟ್ಟುಕೊಡುವ ಮೂಲಕ ಕಳವಳಕ್ಕೆ ಕಾರಣವಾಗುತ್ತಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಲಯಕ್ಕೆ ಮರಳಿದಂತೆ ಕಂಡುಬಂದಿದ್ದರೂ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಯಶಸ್ಸಿನ ಹೊರತಾಗಿಯೂ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಭಾರೀ ನಿರಾಸೆ ಮೂಡಿಸಿತು. ಅಂತಿಮವಾಗಿ ಭಾರತ ತಂಡ 16 ರನ್ಗಳ ಅಂತರದಿಂದ ಈ ಪಂದ್ಯವನ್ನು ಗೆದ್ದಿದ್ದರೂ ತಂಡಕ್ಕೆ ಸಮಾಧಾನಕರವಾಗುವ ಗೆಲುವು ಇದಾಗಿರಲಿಲ್ಲ. ವಿಶ್ವಕಪ್ಗೆ ಮುನ್ನ ಒಂದು ಅಂತಾರಾಷ್ಟ್ರೀಯ ಪಂದ್ಯ ಹಾಗೂ ಎರಡು ಅಭ್ಯಾಸ ಪಂದ್ಯಗಳು ಮಾತ್ರವೇ ಬಾಕಿಯಿದ್ದು ಆಸಿಸ್ ನೆಲದಲ್ಲಿ ಯಾವ ಬೌಲರ್ಗಳನ್ನು ಆಡುವ ಬಳಗದಲ್ಲಿ ಕಣಕ್ಕಿಳಿಸಬೇಕು? ಯಾವ ರೀತಿಯ ಪ್ರದರ್ಶನ ಬರಬಹುದು ಎಂಬುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ನಾಯಕ ರೋಹಿತ್ ಮೇಲೆ ಹೆಚ್ಚಿನ ಹೊಣೆ
ಟೀಮ್ ಇಂಡಿಯಾದ ಆಡುವ ಬಳಗವನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು ಆಯ್ಕೆಯಾಗಿರುವ ಜಸ್ಪ್ರೀತ್ ಬೂಮ್ರಾ ಸ್ಥಾನದ ಬಗ್ಗೆ ಮಾತ್ರವೇ ಗೊಂದಲವಿದೆ. ಅದೊಂದು ಹೊರತುಪಡಿಸಿದರೆ ಉಳಿದಂತೆ ಯಾವುದೇ ಬದಲಾವಣೆಗಳು ನಡೆಯುವ ಸಾಧ್ಯತೆಗಳು ಇಲ್ಲ. ಹೀಗಾಗಿ ವಿಶ್ವಕಪ್ನ ಸಂದರ್ಭದಲ್ಲಿ ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಲೀಯುವಂತೆ ಮಾಡುವ ಹೊಣೆಗಾರಿಕೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮೇಲಿದೆ. ಇನ್ನು ಟೀಮ್ ಇಂಡಿಯಾ ಸತತವಾಗಿ ದ್ವಿಪಕ್ಷೀಯ ಟಿ20 ಸರಣಿಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಾ ದಾಖಲೆ ಬರೆದಿದ್ದರೂ ಕಳೆದ ಏಷ್ಯಾಕಪ್ನಲ್ಲಿ ಲೀಗ್ ಫೈನಲ್ ಹಂತಕ್ಕೇರುವಲ್ಲಿ ವಿಫಲವಾಗುವ ಮೂಲಕ ವೈಫಲ್ಯವನ್ನು ಅನುಭವಿಸಿತ್ತು. ಹೀಗಾಗಿ ಅಲ್ಲಿ ಮಾಡಿದ ಎಡವಟ್ಟುಗಳು ಮತ್ತೆ ಪುನಾವರ್ತನೆಯಾದರೆ ಟೀಕೆಗಳಿಗೆ ಗುರಿಯಾಗುವುದು ನಿಶ್ಚಿತ.