ಭಾರತದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನದ ಆಟಗಾರರು ಹಾಗೂ ಅಭಿಮಾನಿಗಳು ಗೆಲುವಿನ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಸುದೀರ್ಘ ಕಾಲದಿಂದ ಕಾದಿದ್ದ ಈ ಗೆಲುವು ಸಹಜವಾಗಿಯೇ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದೆ. ಈ ಗೆಲುವಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ತಂಡದ ಸಹ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಮಾತನಾಡಿದ ಬಾಬರ್ ಅಜಂ ತಂಡದ ಸಹ ಆಟಗಾರರಿಗೆ ಸಲಹೆಯನ್ನು ನೀಡಿದ್ದಾರೆ.
ಭಾರತದ ವಿರುದ್ಧ ದಾಖಲಿಸಿದ ಅಮೋಘ ಗೆಲುವಿನ ನಂತರ ಬಾಬರ್ ಅಜಂ ಗೆಲುವನ್ನು ಸಂಭ್ರಮಿಸೋಣ ಆದರೆ ಅತ್ಯುತ್ಸಾಹ ಬೇಡ ಎಂದು ಸಲಹೆಯನ್ನು ನೀಡಿದ್ದಾರೆ. ಜೊತೆಗೆ ತಮ್ಮ ಮುಂದಿರುವ ಗುರಿ ಒಂದೇ ಈ ಬಾರಿ ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳುವುದಾಗಿದೆ ಎಂದು ಬಾಬರ್ ಅಜಂ ಹೇಳಿದ್ದಾರೆ. ಪಾಕಿಸ್ತಾನ್ ಕ್ರಿಕೆಟ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಡ್ರಸ್ಸಿಂ ರೂಮ್ನ ಒಳಗಿನ ಸಂವಾದವನ್ನು ಹಂಚಿಕೊಳ್ಳಲಾಗಿದೆ.
ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ
ಪಾಕಿಸ್ತಾನ ಈ ಹಿಂದೆ ತನ್ನ ಏಕಾಗ್ರತೆಯನ್ನು ಕಳೆದುಕೊಂಡಿತ್ತು ಎಂದು ಹೇಳಿರುವ ಪಾಕಿಸ್ತಾನ ತಂಡದ ನಾಯಕ ಅಜಂ ತನ್ನ ಆಟಗಾರರ ಮೇಲೆ ತನಗೆ ನಂಬಿಕೆಯಿದ್ದು ಆ ಅಭ್ಯಾಸವನ್ನು ಬದಲಾಯಿಸುವ ವಿಶ್ವಾಸವಿದೆ ಎಂದಿದ್ದಾರೆ. ಈ ಮೂಲಕ ಗೆಲುವು ಸಾಧಿಸುತ್ತಾ ಮುನ್ನುಗ್ಗಲು ಪಾಕಿಸ್ತಾನ ತಂಡದ ಆಟಗಾರರಿಗೆ ಬಾಬರ್ ಅಜಂ ಪ್ರೇರೇಪಿಸಿದ್ದಾರೆ.
"ಇದು ಯಾವುದೇ ವೈಯಕ್ತಿಕ ಪ್ರದರ್ಶನವಲ್ಲ. ನಾವು ಈ ಪಂದ್ಯವನ್ನು ಒಟ್ಟಾರೆ ತಂಡವಾಗಿ ಗೆದ್ದಿದ್ದೇವೆ. ನಮ್ಮ ಕೂಯಲ್ಲಿರುವ ಈ ಕ್ಷಣವನ್ನು ಕಳೆದುಕೊಳ್ಳುವುದು ಬೇಡ. ಇದು ಕೇವಲ ಆರಂಭ ಮಾತ್ರ. ಈ ಗೆಲುವನ್ನು ಉತ್ಸಾಹದಿಂದ ಅನುಭವಿಸಿ. ಆದರೆ ಅತ್ಯುತ್ಸಾಹ ಬೇಡ" ಎಂದು ಬಾಬರ್ ಅಜಂ ತಂಡದ ಸಹ ಆಟಗಾರರಿಗೆ ಸಲಹೆ ನೀಡಿದ್ದಾರೆ. "ನಾವು ನಾಳೆ ನಮ್ಮ ಸಂಭ್ರಮವನ್ನು ಮುಂದುವರಿಸಬಹುದು. ಆದರೆ ನಾವು ಮತ್ತೆ ನಮ್ಮ ಏಕಾಗ್ರತೆಯನ್ನು ಹೊಂದಬೇಕಿದೆ. ಯಾಕೆಂದರೆ ನಮಗೆ ನಾಡಿದ್ದು ಮತ್ತೊಂದು ಪಂದ್ಯವಿದೆ. ಈ ಪಂದ್ಯ ಈಗ ಅಂತ್ಯವಾಗಿದೆ. ಈಗ ನಮ್ಮ ಗುರಿ ಒಂದೆ. ನಾವು ಈ ಬಾರಿಯ ವಿಶ್ವಕಪ್ಅನ್ನು ಗೆಲ್ಲಲೇ ಬೇಕಿದೆ" ಎಂದಿದ್ದಾರೆ ಬಾಬರ್ ಅಜಂ.
ಭಾರತ vs ಪಾಕ್: "ಪಾಕಿಸ್ತಾನ ಗೆಲ್ಲಬೇಕೆಂದರೆ ಈ ಒಬ್ಬ ಆಟಗಾರನನ್ನು ತಂಡದಿಂದ ಹೊರಗಿಡಲೇಬೇಕು!"
"ನಾವು ಈ ಪಂದ್ಯದ ನಂತರ ನಿರಾಳರಾಗಬೇಕಿಲ್ಲ. ಅದು ಬೌಲಿಂಗ್ ಆಗಿರಬಹುದು, ಬ್ಯಾಟಿಂಗ್ ಆಗಿರಬಹುದು ಅಥವಾ ಫಿಲ್ಡಿಂಗ್ ಆಗಿರಬಹುದು. ನಾವು ನಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡಬೇಕಿದೆ. ತಂಡವಾಗಿ ನಾವು ಗೆಲುವು ಸಾಧಿಸಬೇಕು. ನಾವಿದನ್ನು ಕುಟುಂಬವಾಗಿ ಸಂಭ್ರಮಿಸಬೇಕು. ಆದರೆ ಅತಿಯಾಗಿ ಉತ್ಸಾಹ ಪಡುವುದು ಬೇಡ. ದಯವಿಟ್ಟು ಎಲ್ಲರಲ್ಲಿಯೂ ನಾನು ಮನವಿ ಮಾಡಿಕೊಳ್ಳುವುದಿಷ್ಟೇ ನಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳದೆ ಇರೋಣ. ನಮಗೆ ಅದೊಂದು ಅಭ್ಯಾಸ ಇದೆ. ನಾವು ಆ ಅಭ್ಯಾಸವನ್ನು ಬದಲಾಯಿಸುವ ಅಗತ್ಯವಿದೆ. ನಾವು ಅದನ್ನು ಬದಲಾಯಿಸಲು ಸಾಧ್ಯವಿದೆ" ಎಂದಿದ್ದಾರೆ ಬಾಬರ್ ಅಜಂ. ಈ ಮೂಲಕ ಪಾಕಿಸ್ತಾನ ಏಕಾಗ್ರತೆಯನ್ನು ಕಳೆದುಕೊಳ್ಳದಿದ್ದರೆ ಈ ಬಾರಿಯ ವಿಶ್ವಕಪ್ ಗೆದ್ದು ಬೀಗಲು ಅವಕಾಶವಿದೆ ಎಂದು ಆಟಗಾರರಿಗೆ ಉತ್ಸಾಹ ತುಂಬಿದ್ದಾರೆ
ಭಾರತ ನೀಡಿದ 152 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಯಾವುದೇ ವಿಕೆಟ್ ಕಳೆದುಕೊಳ್ಳದೆ ಈ ಪಂದ್ಯದಲ್ಲಿ ಗೆದ್ದು ಬೀಗಿದೆ. ಸ್ವತಃ ನಾಯಕ ಬಾಬರ್ ಅಜಂ ನೀಡಿದ ಅರ್ಧ ಶತಕದ ಪ್ರದರ್ಶನ ಹಾಗೂ ಮಹಮ್ಮದ್ ರಿಜ್ವಾನ್ ಪ್ರದರ್ಶನ ಪಾಕಿಸ್ತಾನದ ಗೆಲುವನ್ನು ಸಾರಿದೆ. ಬಾಬರ್ ಅಜಂ ಈ ಪಂದ್ಯದಲ್ಲಿ 55 ಎಸೆತಗಳಲ್ಲಿ 68 ರನ್ ಬಾರಿಸಿದರೆ, ಮೊಹಮ್ಮದ್ ರಿಜ್ವಾನ್ 55 ಪಂದ್ಯಗಳಲ್ಲಿ 79 ರನ್ಗಳಿಸಿದೆ. ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ತಂಡದ ವಿರುದ್ಧ ಬುಧವಾರ ಆಡಲಿದೆ. ಕಿವೀಸ್ ವಿರುದ್ಧವೂ ಈ ಪ್ರದರ್ಶನ ಮುಂದುವರಿಸುವ ಉತ್ಸಾಹದಲ್ಲಿದೆ ಬಾಬರ್ ಪಡೆ.