ಧೋನಿ ವಿರುದ್ಧ ದೂರು ನೀಡಿದ ಹಿತಾಸಕ್ತಿ ಸಂಘರ್ಷ
ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಎಂಎಸ್ ಧೋನಿ ಅವರನ್ನು ಮಾರ್ಗದರ್ಶಕರೆಂದು ಘೋಷಣೆ ಮಾಡಿರುವ ಬಿಸಿಸಿಐ ವಿರುದ್ಧ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ಗೆ ಹಿತಾಸಕ್ತಿ ಸಂಘರ್ಷ ದೂರು ನೀಡಿದೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ನ ಮಾಜಿ ಸದಸ್ಯ ಸಂಜೀವ್ ಗುಪ್ತಾ ಅಪೆಕ್ಸ್ ಕೌನ್ಸಿಲ್ ಸದಸ್ಯರಿಗೆ ಪತ್ರವನ್ನು ಬರೆದಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಎಂಎಸ್ ಧೋನಿ ಭಾರತ ತಂಡದ ಮಾರ್ಗದರ್ಶಕನಾಗಿ ಕೆಲಸ ನಿರ್ವಹಿಸುವುದು ನಿಯಮದ ಪ್ರಕಾರ ತಪ್ಪು ಎಂದು ಬಿಸಿಸಿಐ ಕೈಗೊಳ್ಳಲು ಮುಂದಾಗಿರುವ ತೀರ್ಮಾನದ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಧೋನಿ ವಿರುದ್ಧದ ದೂರಿಗೆ ಕಾರಣವಿದು
ಒಬ್ಬ ಕ್ರಿಕೆಟಿಗ ಏಕಕಾಲಕ್ಕೆ ಎರಡೆರಡು ಹುದ್ದೆಗಳನ್ನು ಹೊಂದುವಂತಿಲ್ಲ ಎಂಬುದು ಬಿಸಿಸಿಐನ ಕಠಿಣ ನಿಯಮಗಳಲ್ಲಿ ಒಂದು. ಹೀಗಾಗಿ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಎಸ್ ಧೋನಿ ಟೀಮ್ ಇಂಡಿಯಾದ ಮಾರ್ಗದರ್ಶಕನಾಗಿ ಕೆಲಸ ನಿರ್ವಹಿಸುವುದು ಬಿಸಿಸಿಐನ ಪ್ರಮುಖ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ಗೆ ಎಂಎಸ್ ಧೋನಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ವಿರುದ್ಧ ದೂರನ್ನು ದಾಖಲಿಸಲಾಗಿದೆ.
ಟೀಮ್ ಇಂಡಿಯಾ ಮೆಂಟರ್ ಆಗುವುದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ತ್ಯಜಿಸುತ್ತಾರಾ ಧೋನಿ?
ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಿದ್ದ ಎಂ ಎಸ್ ಧೋನಿ ವಿರುದ್ಧ ಇದೀಗ ದೂರು ದಾಖಲಾಗಿದ್ದು, ಎಂಎಸ್ ಧೋನಿ ಟೀಮ್ ಇಂಡಿಯಾ ಮೆಂಟರ್ ಆಗಿ ಕಾರ್ಯನಿರ್ವಹಿಸುವುದಕ್ಕೋಸ್ಕರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ನೀಡುತ್ತಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ..