ಲೌಡರ್ಹಿಲ್(ಫ್ಲೋರಿಡಾ), ಆಗಸ್ಟ್ 05: ಭಾರತ ತಂಡದ ಪರ ಪದಾರ್ಪಣೆಯ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ 3 ವಿಕೆಟ್ ಪಡೆದು ಟಿ20 ಸರಣಿಯಲ್ಲಿ ಶುಭಾರಂಭ ತಂದುಕೊಟ್ಟು ಪಂದ್ಯಶ್ರೇಷ್ಠ ಗೌರವ ಪಡೆದ ನವದೀಪ್ ಸೈನಿ, ಅದೇ ಪಂದ್ಯದಲ್ಲಿ ವಿಕೆಟ್ ಪಡೆದ ವೇಳೆ ಅತಿಯಾಗಿ ವರ್ತಿಸಿದ್ದಕ್ಕೆ ಇದೀಗ ಐಸಿಸಿಯಿಂದ ಎಚ್ಚರಿಕೆ ಪಡೆದಿದ್ದಾರೆ.
ಕಳೆದ ಶನಿವಾರ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್ ವಿರುದ್ಧದ 4 ಓವರ್ ಬೌಲ್ ಮಾಡಿದ ಸೈನಿ, ಒಂದು ಮೇಡಿನ್ ಸಹಿತ 3 ವಿಕೆಟ್ ಪಡೆದರಲ್ಲದೆ ಕೇವಲ 17 ರನ್ಗಳನ್ನು ಮಾತ್ರವೇ ಬಿಟ್ಟುಕೊಟ್ಟು ತಂಡ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಅಂತಾರಾಷ್ಟ್ರೀಯ ಟಿ20: ಹಿಟ್ಮ್ಯಾನ್ ಮುಡಿಗೆ ಸಿಕ್ಸರ್ಗಳ ವಿಶ್ವದಾಖಲೆ!
ಆದರೆ, ಇನಿಂಗ್ಸ್ನ 5ನೇ ಓವರ್ನಲ್ಲಿ ದಾಳಿಗಿಳಿದ ಸೈನಿ ವಿಂಡೀಸ್ನ ಪ್ರಮುಖ ಬ್ಯಾಟ್ಸ್ಮನ್ನಿಕೊಲಾಸ್ ಪೂರನ್ ಎದುರು ಎರಡನೇ ಎಸೆತದಲ್ಲಿ ಸಿಕ್ಸರ್ ಹೊಡೆಸಿಕೊಂಡಿದ್ದರು. ಆದರೆ ನಾಲ್ಕನೇ ಎಸೆತದಲ್ಲಿ ಉತ್ತಮ ಬೌನ್ಸರ್ ಮೂಲಕ ಪೂರನ್ಗೆ ಶಾಕ್ ನೀಡಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗೆ ಪ್ರಚೋದಿಸುವ ರೀತಿಯಲ್ಲಿ ಸಂಭ್ರಮಿಸಿದ್ದರು.
ಈ ರೀತಿಯ ಪ್ರಚೋದನಾಕಾರಿ ವರ್ತನೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೀತಿ ಸಂಹಿತೆಯ ಆರ್ಟಿಕಲ್ 2.5ರ ನಿಯಮದ ಉಲ್ಲಂಘನೆಯಾಗಿದೆ. ಪ್ರಥಮಿಕ ಹಂತದ ತಪ್ಪಾದ ಕಾರಣ ಸೈನಿಗೆ ಅಧಿಕೃತವಾಗಿ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ದಂಡ ವಿಧಿಸಲಾಗಿಲ್ಲ. ಜೊತೆಗೆ ಒಂದು ಡೀಮೆರಿಟ್ ಅಂಕವನ್ನೂ ನೀಡಲಾಗಿದೆ.
ಕಿಂಗ್ ಕೊಹ್ಲಿ ದಾಖಲೆ ಪುಡಿಗಟ್ಟಿದ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್!
ಇದೇ ವೇಳೆ 26 ವರ್ಷದ ಬಲಗೈ ವೇಗಿ ಸೈನಿ ಮ್ಯಾಚ್ ರೆಫ್ರಿ ಜೆಫ್ ಕ್ರೋವ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಧಿಕೃತ ವಿಚಾರಣೆ ಏನೂ ನಡೆದಿಲ್ಲ.
ಮೊದಲ ಪಂದ್ಯದಲ್ಲಿ ಮಿಂಚಿದ್ದ ಸೈನಿ, ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯಲಾಗದೆ 27 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಪಂದ್ಯ ಮಳೆಗೆ ಆಹುತಿಯಾದ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತ 22 ರನ್ಗಳ ಜಯ ದಾಖಲಿಸಿತು.
ವಿಂಡೀಸ್ ವಿರುದ್ಧದ 2ನೇ ಟಿ20: ಪಂದ್ಯ ರದ್ದಾದರೆ ಭಾರತಕ್ಕೆ ಗೆಲುವು
ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಆಗಸ್ಟ್ 6ರಂದು (ಮಂಗಳವಾರ) ವೆಸ್ಟ್ ಇಂಡೀಸ್ನ ಗಯಾನದಲ್ಲಿ ನಡೆಯಲಿದೆ. ಭಾರತ ಸರಣಿಯನ್ನು ಈಗಾಗಲೇ 2-0 ಅಂತರದಲ್ಲಿ ಗೆದ್ದಿದ್ದು, ಮೂರನೇ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮಹತ್ವ ಪಡೆದಿರುವ ಕಾರಣ ಕಾಯ್ದಿರಿಸಿರುವ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ನೀಡಲು ಮುಂದಾಗುವ ಸಾಧ್ಯತೆ ಹೆಚ್ಚಿದೆ. ದೀಪಕ್ ಚಹರ್ ಮತ್ತು ರಾಹುಲ್ ಚಹರ್ ಸಹೋದರರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವುದನ್ನು ಎದುರು ನೋಡುತ್ತಿದ್ದು, ಈ ಪಂದ್ಯದಲ್ಲಿ ಅವಕಾಶ ಲಭ್ಯವಾಗುತ್ತದೇ ಎಂಬುದನ್ನು ಕಾದು ನೋಡಬೇಕಿದೆ.