ಇತ್ತೀಚಿಗಷ್ಟೆ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗಳಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಅವಕಾಶ ಸಿಗದ ವೃದ್ಧಿಮಾನ್ ಸಹಾ ಕೆಲ ಹೇಳಿಕೆಗಳನ್ನು ನೀಡುವುದರ ಮೂಲಕ ವಿವಾದಗಳನ್ನು ಸೃಷ್ಟಿಸಿದ್ದಾರೆ. ಹೌದು, ಭಾರತ ಕ್ರಿಕೆಟ್ ಕಂಡ ಉತ್ತಮ ವಿಕೆಟ್ ಕೀಪರ್ಗಳಲ್ಲಿ ಒಬ್ಬರಾಗಿರುವ ವೃದ್ಧಿಮಾನ್ ಸಹಾ ಕೂಡ ಬಿಸಿಸಿಐ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಹೌದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ದ್ರಾವಿಡ್ ನಿವೃತ್ತಿ ತೆಗೆದುಕೊಳ್ಳುವಂತೆ ಸಲಹೆಯನ್ನು ನೀಡಿದ್ದರು ಮತ್ತು ತಾನು ಬಿಸಿಸಿಐನ ಅಧ್ಯಕ್ಷನಾಗಿರುವವರೆಗೂ ತಂಡದಲ್ಲಿ ನಿನಗೆ ಸ್ಥಾನ ಖಚಿತ ಎಂದು ಹೇಳಿದ್ದ ಸೌರವ್ ಗಂಗೂಲಿ ಇದೀಗ ಬದಲಾಗಿದ್ದಾರೆ ಎಂಬ ಹೇಳಿಕೆಗಳನ್ನು ನೀಡಿದ್ದ ವೃದ್ದಿಮಾನ್ ಸಹಾ ವಿವಾದಗಳನ್ನು ಹುಟ್ಟುಹಾಕಿದ್ದಾರೆ.
ಇಷ್ಟು ಮಾತ್ರವಲ್ಲದೇ ಇನ್ನೂ ಮುಂದುವರಿದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ವೃದ್ದಿಮಾನ್ ಸಹಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡುವುದರ ಮೂಲಕ ಪತ್ರಕರ್ತನೋರ್ವ ತನ್ನ ವಿರುದ್ಧ ಬೆದರಿಕೆಗಳನ್ನು ಹಾಕಿದ್ದರು ಎಂದು ಆರೋಪಿಸಿ ತನ್ನ ಮತ್ತು ಪತ್ರಕರ್ತರ ನಡುವೆ ನಡೆದಿದ್ದ ಮೊಬೈಲ್ ಚಾಟಿಂಗ್ ಚಿತ್ರಗಳನ್ನು ಹಂಚಿಕೊಂಡಿದ್ದರು. ಹೀಗೆ ವೃದ್ದಿಮಾನ್ ಸಹಾ ಪತ್ರಕರ್ತನೋರ್ವ ತನ್ನ ವಿರುದ್ಧ ಬೆದರಿಕೆಗಳನ್ನು ಹಾಕಿದ್ದರು ಎಂಬ ಟ್ವೀಟ್ ಮಾಡಿದ ನಂತರ ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರೀಡಾಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕೆಲವರು ವೃದ್ಧಿಮಾನ್ ಸಹಾ ಪರ ಬ್ಯಾಟ್ ಬೀಸುತ್ತಿದ್ದರೆ, ಇನ್ನೂ ಕೆಲವರು ವೃದ್ದಿಮಾನ್ ಸಹಾ ವಿರುದ್ಧದ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಪಿಎಸ್ಎಲ್: ಮೈದಾನದಲ್ಲಿಯೇ ಸಹ ಆಟಗಾರ ಕಮ್ರಾನ್ ಕೆನ್ನೆಗೆ ಬಾರಿಸಿದ ಪಾಕ್ ಪ್ರಮುಖ ಆಟಗಾರ!
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ವೃದ್ಧಿಮಾನ್ ಸಹಾ ಪರ ಮಾತನಾಡಿದ್ದರು ಹಾಗೂ ವೃದ್ಧಿಮಾನ್ ಸಹಾ ಆ ಪತ್ರಕರ್ತ ಯಾರು ಎಂಬುದನ್ನು ಬಹಿರಂಗಪಡಿಸಬೇಕು ಮತ್ತು ಬಿಸಿಸಿಐ ವೃದ್ಧಿಮಾನ್ ಸಹಾಗೆ ರಕ್ಷಣೆ ನೀಡಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಇರ್ಫಾನ್ ಪಠಾಣ್ ಕೂಡ ವೃದ್ಧಿಮಾನ್ ಸಹಾ ಪರ ಬ್ಯಾಟ್ ಬೀಸಿದ್ದರು ಹಾಗೂ ಈ ರೀತಿ ಪತ್ರಕರ್ತರು ಟೀಮ್ ಇಂಡಿಯಾ ಆಟಗಾರರಿಗೆ ಬೆದರಿಕೆ ಹಾಕಿರುವುದು ಇದೇ ಮೊದಲೇನಲ್ಲ ಎಂದು ಆಶ್ಚರ್ಯಕರವಾದ ಹೇಳಿಕೆಯನ್ನು ಕೂಡ ಇರ್ಫಾನ್ ಪಠಾಣ್ ನೀಡಿದ್ದರು. ಹೀಗೆ ಸಾಕಷ್ಟು ಬೆಂಬಲಗಳನ್ನು ಪಡೆದುಕೊಳ್ಳುತ್ತಿರುವ ವೃದ್ದಿಮಾನ್ ಸಹಾ ತನಗಾದ ರೀತಿ ಬೇರೆ ಯಾವುದೇ ಕ್ರಿಕೆಟಿಗನಿಗೂ ಕೂಡ ಆಗಬಾರದು ಎಂಬ ಉದ್ದೇಶದಿಂದ ನನ್ನ ಮತ್ತು ಆ ಪತ್ರಕರ್ತರ ನಡುವಿನ ಚಾಟಿಂಗ್ ಚಿತ್ರಗಳನ್ನು ಹಂಚಿಕೊಂಡೆ ಹೊರತು ಆತನ ಅಥವಾ ಆಕೆಯ ಹೆಸರನ್ನು ಬಹಿರಂಗಪಡಿಸಬೇಕು ಎಂದುಕೊಂಡಿರಲಿಲ್ಲ ಎಂದು ವೃದ್ಧಿಮಾನ್ ಸಹಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
Dear Wriddhi, it's not your nature to harm others and you are a wonderful guy. But to prevent such harm from happening to anyone else in the future , it's important for you to name him.
— Virender Sehwag (@virendersehwag) February 22, 2022
Gehri saans le, aur naam bol daal. https://t.co/9ovEUT8Fbm
ಹೀಗೆ ವೃದ್ಧಿಮಾನ್ ಸಹಾ ಮಾಡಿರುವ ಟ್ವೀಟ್ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದು 'ಇತರರಿಗೆ ಕೇಡನ್ನು ಬಯಸಬೇಕೆನ್ನುವ ಬುದ್ಧಿ ನಿನಗೆ ಇಲ್ಲ ಎಂಬುದು ತಿಳಿದಿದೆ. ಆದರೆ ನಿನಗಾದ ರೀತಿ ಬೇರೆ ಯಾವುದೇ ಕ್ರಿಕೆಟಿಗನಿಗೂ ಭವಿಷ್ಯದಲ್ಲಿ ಆಗಬಾರದೆಂದರೆ, ನೀನು ಆ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸದ ಬೇಕಾಗಿರುವುದು ಮುಖ್ಯವಾಗಿದೆ. ಹೀಗಾಗಿ ನಿಟ್ಟುಸಿರನ್ನು ತೆಗೆದುಕೊಂಡು ಆತನ ಹೆಸರನ್ನು ಹೇಳಿಬಿಡು' ಎಂದು ಬರೆದುಕೊಂಡಿದ್ದಾರೆ. ಹೀಗೆ ವೃದ್ಧಿಮಾನ್ ಸಹಾ ಮಾಡಿದ ಆರೋಪಕ್ಕೆ ದಿನದಿಂದ ದಿನಕ್ಕೆ ಪ್ರತಿಕ್ರಿಯೆಗಳು ಹೆಚ್ಚಾಗುತ್ತಿದ್ದು, ಸಹಾ ಆ ಪತ್ರಕರ್ತರ ಹೆಸರನ್ನು ಬಹಿರಂಗಪಡಿಸುತ್ತಾರಾ ಅಥವಾ ಇದೇ ರೀತಿ ಗೌಪ್ಯವಾಗಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.