ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ರಣಜಿ ಪಂದ್ಯ ಕರ್ನಾಟಕದಿಂದ ಕೈ ತಪ್ಪುವ ಸಾಧ್ಯತೆಗಳು ಕಂಡು ಬರುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ 336 ರನ್ ಗಳಿಸಿದ್ದ ಕರ್ನಾಟಕ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 151 ರನ್ ಗಳಿಸಿದೆ. ಈ ಮೂಲಕ ಎದುರಾಳಿ ತಂಡಕ್ಕೆ 181 ರನ್ ಗುರಿಯನ್ನು ನೀಡಿದೆ.ಇದನ್ನು ಬೆನ್ನತ್ತಿರುವ ತಮಿಳುನಾಡು ಉತ್ತಮ ಆರಂಭದ ಹೊರತಾಗಿಯೂ ಹಠಾತ್ ಕುಸಿತಕ್ಕೆ ಒಳಗಾಗಿದ್ದು ಪಂದ್ಯ ರೋಚಕತೆಯನ್ನು ಹೆಚ್ಚಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟವನ್ನು ಪ್ರದರ್ಶಿಸಿತ್ತು. ಕರ್ನಾಟಕ ನೀಡಿದ 336ರನ್ ಬೆನ್ನತ್ತಿದ ತಮಿಳುನಾಡು ತಂಡವನ್ನು 307 ರನ್ಗೆ ಕಟ್ಟಿ ಹಾಕುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾದರು. ಈ ಮೂಲಕ ಕರ್ನಾಟಕ 29ರನ್ಗಳ ಅಲ್ಪ ಮುನ್ನಡೆಯನ್ನು ಪಡೆದುಕೊಂಡಿತು.
ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಯಾವ ಬ್ಯಾಟ್ಸ್ಮನ್ಗಳು ಕೂಡ ಉತ್ತಮ ಆಟವನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ದೇವ್ದತ್ ಪಡಿಕ್ಕಲ್ ಸಿಡಿಸಿದ 39ರನ್ನೇ ವೈಯಕ್ತಿಕ ಅಧಿಕ ಸ್ಕೋರ್ ಆಗಿದೆ. ತಮಿಳುನಾಡು ಪರವಾಗಿ ಆರ್. ಅಶ್ವಿನ್ 4 ವಿಕೆಟ್ ಪಡೆದರೆ ವಿಘ್ನೆಶ್ ಪ್ರಮುಖ ಮೂರು ವಿಕೆಟ್ ಪಡೆದು ಕರ್ನಾಟಕವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
181 ರನ್ಗಳ ಗುರಿ ಬೆನ್ನತ್ತಿರುವ ತಮಿಳುನಾಡು ಉತ್ತಮ ಆರಂಭ ಪಡೆದುಕೊಂಡಿತು. ಇಂದು ಅಂತಿಮ ದಿನವಾಗಿರುವ ಕಾರಣ ಕರ್ನಾಟಕ ನೀಡಿರುವ ಗುರಿ ಮುಟ್ಟಲು ವೇಗವಾಗಿ ರನ್ಗಳಿಸುವ ಪ್ರಯತ್ನ ಮಾಡುತ್ತಿದ್ದು ಆರಂಭಿಕ ಯಶಸ್ಸನ್ನೂ ಸಾಧಿಸಿತು. ಆದರೆ ಆ ಬಳಿಕ ತನ್ನ ಮೂರು ವಿಕೆಟ್ಗಳನ್ನು ಕಳೆದುಕೊಂಡು ತಮಿಳುನಾಡು ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕರಾದ ಮುಕುಂದ್ ಹಾಗೂ ಮುರಳಿ ವಿಜಯ್ ಔಟಾಗದೆ ಅರ್ಧಶತಕದ ಜೊತೆಯಾಟವನ್ನು ನೀಡಿದರು.