ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ನಾಯಕ
ಸತತ ಎರಡು ಸರಣಿಗಳಲ್ಲಿ ಇವರಿಬ್ಬರ ಅನುಪಸ್ಥಿತಿಯಿಂದಾಗಿ ಹಾರ್ದಿಕ್ ಪಾಂಡ್ಯ ಟಿ20 ನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿತ್ತು. ಹಾರ್ದಿಕ್ ಪಾಂಡ್ಯ ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ವಿರುದ್ಧ 2-1 ಟಿ20 ಸರಣಿ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ್ದರು. ಅದೇ ರೀತಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯಗಳಿಗೆ ನಾಯಕರಾಗಿ ನೇಮಕಗೊಂಡಿದ್ದಾರೆ.
ಮಂಗಳವಾರ, ಜನವರಿ 24ರಂದು ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಸೋಮವಾರದಂದು ಮಾತನಾಡಿದ ಮುಖ್ಯ ರಾಹುಲ್ ದ್ರಾವಿಡ್, ಈ ವರ್ಷದ ಅಂತ್ಯದಲ್ಲಿ ಏಕದಿನ ವಿಶ್ವಕಪ್ ತಯಾರಿಯಿಂದಾಗಿ ಭಾರತ ತಂಡವು 50 ಓವರ್ಗಳ ಸ್ವರೂಪಕ್ಕೆ ಆದ್ಯತೆ ನೀಡಲಿದೆ ಎಂದು ಹೇಳಿದರು.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 2-0 ಮುನ್ನಡೆ
"ಭಾರತ ತಂಡವು ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಕೆಲವು ವೈಟ್ ಬಾಲ್ ಸರಣಿಗಳಿಗೆ ನಾವು ಕೆಲವು ಆದ್ಯತೆಗಳನ್ನು ನೀಡಬೇಕಾಗಿದೆ," ಎಂದು ಇಂದೋರ್ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಸುದ್ದಿಗಾರರಿಗೆ ತಿಳಿಸಿದರು.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿ ನಂತರ ಭಾರತ ತಂಡವು ಫೆಬ್ರವರಿ 9ರಿಂದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಲಿದೆ.
ಭಾರತ ತಂಡದ ನಾಯಕತ್ವವನ್ನು ವಿಭಜಿಸುವ ಕುರಿತು ದ್ರಾವಿಡ್ ಮಾತು
"ಕಳೆದ ವರ್ಷದ ಟಿ20 ವಿಶ್ವಕಪ್ ನಂತರ, ಈ ಆರು ಏಕದಿನ ಪಂದ್ಯಗಳಿಗೆ ಆದ್ಯತೆ ನೀಡಲಾಗಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಎಲ್ಲಾ ಆರು ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಸ್ವಲ್ಪ ವಿರಾಮವನ್ನು ಪಡೆಯುತ್ತಾರೆ," ಎಂದು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳನ್ನು ಉಲ್ಲೇಖಿಸಿ ರಾಹುಲ್ ದ್ರಾವಿಡ್ ವಿವರಿಸಿದರು.
ವಿಭಿನ್ನ ಸ್ವರೂಪದ ಆಟಗಳಲ್ಲಿ ಭಾರತ ತಂಡದ ನಾಯಕತ್ವವನ್ನು ವಿಭಜಿಸುವ ಯೋಚನೆ ಕುರಿತು ರಾಹುಲ್ ದ್ರಾವಿಡ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ, "ನೀವು ಆಯ್ಕೆಗಾರರನ್ನು ಕೇಳಬೇಕಾದ ಪ್ರಶ್ನೆಯಾಗಿದೆ. ಆದರೆ ಇದೀಗ, ನಾನು ಆ ರೀತಿ ಯೋಚಿಸುವುದಿಲ್ಲ," ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದರು.