ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಡೆಯುತ್ತಿರುವಂತೆಯೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೊರೊನಾವೈರಸ್ ಪರೀಕ್ಷೆಯಲ್ಲಿ ವೈರಸ್ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮುಖ್ಯ ಕೋಚ್ ರವಿ ಶಾಸ್ತ್ರಿ ಸಹಿತ ಒಟ್ಟು ನಾಲ್ವರು ಸಹಾಯಕ ಸಿಬ್ಬಂದಿಗಳು ಐಸೊಲೇಶನ್ಗೆ ಒಳಗಾಗಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭಕ್ಕೆ ಕೆಲವೇ ಕ್ಷಣಗಳಿರುವಾಗ ಬಿಸಿಸಿಐ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ಬಗ್ಗೆ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ್ದು ಮಾಹಿತಿ ನೀಡಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಹೊರತುಪಡಿಸಿ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
"ರವಿ ಶಾಸ್ತ್ರಿ ಅವರ ಕೊರೊನಾವೈರಸ್ ಪರೀಕ್ಷೆಯ ವರದಿಯು ಪಾಸಿಟಿವ್ ಬಂದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐನ ವೈದ್ಯಕೀಯ ತಂಡ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಬಿ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಫಿಸಿಯೋ ನಿತಿನ್ ಪಟೇಲ್ ಅವರನ್ನು ಪ್ರತ್ಯೇಕವಾಗಿರಿಸಲಾಗಿದೆ" ಎಂದು ಬಿಸಿಸಿಐ ಮಾಹಿತಿಯನ್ನು ನೀಡಿದೆ.
ಭಾರತ vs ಇಂಗ್ಲೆಂಡ್: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ವಿವಿಎಸ್ ಲಕ್ಷ್ಮಣ್
ನಾಲ್ವರು ಕೂಡ ಆರ್ಟಿ ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು ತಂಡದ ಹೋಟೆಲ್ನಲ್ಲಿಯೇ ಉಳಿದುಕೊಳ್ಳಲಿದ್ದಾರೆ. ವೈದ್ಯಕೀಯ ತಂಡದಿಂದ ಖಚಿತವಾಗುವವರೆಗೆ ಟೀಮ್ ಇಂಡಿಯಾ ತಂಡದೊಂದಿಗೆ ಪ್ರಯಾಣಿಸುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಈ ಮಧ್ಯೆ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೂ ಈ ವರದಿಯ ಬಳಿಕ ಎರಡು ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ ರಾತ್ರಿ ಒಂದು ಪರೀಕ್ಷೆ ನಡೆಸಲಾಗಿದ್ದು ಮತ್ತೊಂದು ಇಂದು ಬೆಳಿಗ್ಗೆ ನಡೆಸಲಾಗಿದೆ. ಎಲ್ಲಾ ಆಟಗಾರರ ವರದಿ ಕೂಡ ನೆಗೆಟಿವ್ ಬಂದಿದ್ದು ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಭಾಗಿಯಾಗಲು ತಮಡದ ಆಟಗಾರರಿಗೆ ಅವಕಾಶ ದೊರೆತಿದೆ.
ಇನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅಲಭ್ಯತೆಯಲ್ಲಿ ಸಹಾಯಕ ಕೋಚ್ ವಿಕ್ರಮ್ ರಾಥೋರ್ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಆದರೆ ತಂಡಕ್ಕಿರುವ ದೊಡ್ಡ ಸವಾಲೆಂದರೆ ತಂಡದ ಫಿಸಿಯೋ ಕೂಡ ಅಲಭ್ಯವಾಗಿರುವುದು ಅನುವಾರ್ಯ ಸಂದರ್ಭಗಳಲ್ಲಿ ಸವಾಲಾಗಲಿದೆ. ಹೀಗಾಗಿ ಗಾಯಗೊಂಡಲ್ಲಿ ಅಥವಾ ಕನ್ಕೂಶನ್ಗೆ ಒಳಗಾದಲ್ಲಿ ವೈದ್ಯಕೀಯ ಸಹಾಯಕ್ಕೆ ಯಾರು ಬರಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.
ಇದಕ್ಕೂ ಮುನ್ನ ಕಳೆದ ಜುಲೈ ನಲ್ಲಿ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್ಗಳ ಸರಣಿಯಲ್ಲಿ ಟೀಮ್ ಇಂಡಿಯಾಗೆ ಕೊರೊನಾವೈರಸ್ ಆಘಾತ ನೀಡಿತ್ತು. ತಂಡದ ಓರ್ವ ಆಟಗಾರ ಕೊರೊನಾವೈರಸ್ಗೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಒಟ್ಟು 9 ಆಟಗಾರರು ಪ್ರತ್ಯೇಕವಾಗುಳಿದಿದ್ದರು. ಹೀಗಾಗಿ ಬಹುತೇಕ ಹೊಸ ಆಟಗಾರರ ತಂಡದೊಂದಿಗೆ ತಂಡ ಆಡಲು ಇಳಿದಿತ್ತು.