ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದೇ ಸೋಲಿಗೆ ಕಾರಣ
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಹೀನಾಯ ಸೋಲಿನ ಕುರಿತು ಮಾತನಾಡಿರುವ ರಶೀದ್ ಲತೀಫ್ ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿದ್ದೇ ಈ ಹೀನಾಯ ಸೋಲಿಗೆ ಕಾರಣ ಎಂದಿದ್ದಾರೆ. ಏಳೆಂಟು ವರ್ಷಗಳ ಕಾಲ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿಯನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿದ್ದು ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದವರ ಯೋಜನೆ ಫ್ಲಾಪ್
ಇನ್ನೂ ಮುಂದುವರಿದು ಮಾತನಾಡಿರುವ ರಶೀದ್ ಲತೀಫ್ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದವರು ಯಾರೇ ಆಗಿರಲಿ ಅವರ ಯೋಜನೆ ನೆಲಕಚ್ಚಿದೆ ಎಂದಿದ್ದಾರೆ. ಹಲವಾರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಅವರ ಯೋಜನೆಗಳ ಬೇರು ಟೀಮ್ ಇಂಡಿಯಾದಲ್ಲಿ ನೆಲೆಯೂರಿದೆ ಹೀಗಾಗಿ ಕೊಹ್ಲಿ ನಾಯಕತ್ವವಿಲ್ಲದ ಟೀಮ್ ಇಂಡಿಯಾ ಇತರೆ ಆಟಗಾರನ ನಾಯಕತ್ವದಲ್ಲಿ ಅಷ್ಟೇ ಮಟ್ಟದ ಪ್ರದರ್ಶನವನ್ನು ನೀಡುವುದು ಅಸಾಧ್ಯ, ಇದೊಂದು ಅವನತಿಯಾಗುತ್ತಿದೆ ಎಂದು ರಶೀದ್ ಲತೀಫ್ ಬೇಸರ ವ್ಯಕ್ತಪಡಿಸಿದ್ದಾರೆ.
ಪರೋಕ್ಷವಾಗಿ ಸೌರವ್ ಗಂಗೂಲಿಗೆ ಕುಟುಕಿದ್ರಾ ರಶೀದ್ ಲತೀಫ್?
ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕೆಟ್ಟ ಯೋಜನೆ ಎಂದು ತೆಗಳಿರುವ ರಶೀದ್ ಲತೀಫ್ ಪರೋಕ್ಷವಾಗಿ ಸೌರವ್ ಗಂಗೂಲಿಗೆ ಟಾಂಗ್ ನೀಡಿದ್ರಾ ಎಂಬ ಅನುಮಾನವನ್ನು ಮೂಡಿಸಿದೆ. ಏಕೆಂದರೆ ವಿರಾಟ್ ಕೊಹ್ಲಿ ನಾಯಕತ್ವದ ವಿಚಾರದಲ್ಲಿ ಸೌರವ್ ಗಂಗೂಲಿ ಹೆಸರು ಯಾವಾಗಲೂ ತಳುಕು ಹಾಕಿಕೊಳ್ಳುತ್ತಿದ್ದು, ಕೊಹ್ಲಿ ಅಭಿಮಾನಿಗಳು ಕೊಹ್ಲಿ ನಾಯಕತ್ವವನ್ನು ಕಸಿದುಕೊಂಡದ್ದು ಗಂಗೂಲಿಯೇ ಎಂದು ಕಿಡಿ ಕಾರುತ್ತಲೇ ಇದ್ದಾರೆ. ಹೀಗಾಗಿ ರಶೀದ್ ಲತೀಫ್ ನೀಡಿರುವ ಈ ಹೇಳಿಕೆ ಸೌರವ್ ಗಂಗೂಲಿ ಅವರಿಗೆ ಅನ್ವಯಿಸುತ್ತಾ ಎಂಬ ಅನುಮಾನ ಮೂಡಿಸುತ್ತಿದೆ.