ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ವೈಫಲ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ವಾಗ್ದಾಳಿ ನಡೆಸಿದ್ದಾರೆ. ತಂಡದ ಆಯ್ಕೆಯ ದೋಷದಿಂದ ಭಾರತ ತಂಡ ಹರಿಣಗಳ ನಾಡಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಅನುಭವದ ಹೆಸರಿನಲ್ಲಿ ಫಾರ್ಮ್ ಇಲ್ಲದ ಹಿರಿಯ ಆಟಗಾರರಿಗೆ ಅವಕಾಶ ನೀಡುವ ಮೂಲಕ ಟೀಂ ಇಂಡಿಯಾ ಬೆಲೆ ತೆರುತ್ತಿದೆ ಎಂದು ಟೀಕಿಸಿದರು. ಈ ತಪ್ಪುಗಳನ್ನು ಇನ್ನಾದರೂ ಸರಿಪಡಿಸಿಕೊಳ್ಳಬೇಕು ಎಂದ ಅವರು, ಜಡವಾಗಿರುವ ಹಿರಿಯ ಆಟಗಾರರನ್ನು ಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು. ಇಎಸ್ಪಿಎನ್ ಕ್ರಿಕ್ಇನ್ಫೋ ಚರ್ಚೆಯಲ್ಲಿ ಭಾಗವಹಿಸಿದ್ದ ಮಂಜ್ರೇಕರ್, ಟೀಂ ಇಂಡಿಯಾ ವೈಫಲ್ಯವನ್ನು ವಿಶ್ಲೇಷಿಸಿದ್ದಾರೆ.
ತಂಡದ ಆಯ್ಕೆಯೇ ಚೆನ್ನಾಗಿಲ್ಲ
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಬಂಧಿಸಿದಂತೆ, ಭಾರತ ತಂಡದ ಆಯ್ಕೆಯಲ್ಲಿ ದೊಡ್ಡ ಲೋಪವಾಗಿದೆ. ಅನೇಕ ಅನುಭವಿ ಮತ್ತು ಫಾರ್ಮ್ಯಿಲ್ಲದ ಆಟಗಾರರನ್ನು ತೆಗೆದುಕೊಂಡಿದ್ದಾರೆ. ಹಿರಿಯ ಆಟಗಾರರು ಕೂಡ ಪರ್ಫಾಮೆನ್ಸ್ ನೀಡುವಲ್ಲಿ ವಿಫಲರಾದರು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಮಿಂಚಬಲ್ಲ ಗುಣಮಟ್ಟದ ಆಟಗಾರರನ್ನು ಸಿದ್ಧಪಡಿಸುವ ಅಗತ್ಯವಿದೆ.
ಏಕದಿನ ಕ್ರಿಕೆಟ್ನಲ್ಲಿ ಇಂತಹ ಆಟಗಾರರನ್ನ ಹುಡುಕುವ ಅವಶ್ಯಕತೆಯಿದೆ. ಆರಂಭಿಕರು ಶತಕಗಳಿರಲಿ ಅಥವಾ ಅರ್ಧ ಶತಕಗಳಿರಲಿ, ತಂಡದ ಯಶಸ್ಸು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಅದೇ ಕೊರತೆ ಇತ್ತು. ಉತ್ತಮ ಆರಂಭ ಪಡೆದರೂ ಅಲ್ಪಾವಧಿಯಲ್ಲಿಯೇ ಪ್ರಮುಖ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಭಾರತ ಸೋಲನುಭವಿಸಿತು ಎಂದು ಸಂಜಯ್ ಮಂಜ್ರೇಕರ್ ಹೇಳಿದರು.
ಭುವನೇಶ್ವರ್ ಕುಮಾರ್ ಬದಲು ಇನ್ಮುಂದೆ ದೀಪಕ್ ಚಹಾರ್ ಅವರನ್ನು ತೆಗೆದುಕೊಳ್ಳಬೇಕು. ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಆಗಬೇಕಿದೆ. ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರು ಹಿಂದಿನ ಲಯವನ್ನು ಕಂಡುಕೊಳ್ಳುವುದು ಬಹುತೇಕ ಕಷ್ಟಕರವಾಗಿದೆ. ಅವರ ಸ್ಥಾನವನ್ನು ದೀಪಕ್ ಚಹಾರ್ ಪೂರ್ಣ ಪ್ರಮಾಣದ ಆಟಗಾರನನ್ನಾಗಿ ಮಾಡಬಹುದು.
ಭುವನೇಶ್ವರ್ ಅಷ್ಟೇ ಅಲ್ಲದೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಷಯದಲ್ಲೂ ಭಾರತ ಪರ್ಯಾಯವನ್ನು ಹುಡುಕಬೇಕಾಗಿದೆ. ಹಲವು ವರ್ಷಗಳ ನಂತರ ಅನಿವಾರ್ಯ ಕಾರಣಗಳಿಂದ ಅಶ್ವಿನ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ಎರಡು ಪಂದ್ಯಗಳನ್ನು ಆಡಿದ್ದರೂ ಸಹ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಯುಜುವೇಂದ್ರ ಚಹಾಲ್ ಕೂಡ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಯುವ ಆಟಗಾರ ಪ್ರಸಿದ್ಧ ಕೃಷ್ಣನಿಗೆ ಹೆಚ್ಚಿನ ಅವಕಾಶ ನೀಡಬೇಕು. ಅಶ್ವಿನ್ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಏಕದಿನ ಮಾದರಿಯಲ್ಲಿ ಆಯ್ಕೆ ಮಾಡಿದರೆ, ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು ಎಂದು ಮಂಜ್ರೇಕರ್ ಹೇಳಿದರು.
ರವಿಚಂದ್ರನ್ ಅಶ್ವಿನ್ ಮೊದಲ ಏಕದಿನ ಪಂದ್ಯದಲ್ಲಿ 53 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್ನಲ್ಲಿ ಕೇವಲ 7 ರನ್ ಕಲೆಹಾಕಿದ್ರು. ಇನ್ನು ಪಾರ್ಲ್ನಲ್ಲೇ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಶ್ವಿನ್ ವಿಕೆಟ್ ಕೂಡ ಪಡೆಯಲು ಸಾಧ್ಯವಾಗದೇ 68 ರನ್ಗಳನ್ನ ಎದುರಾಳಿಗೆ ಬಿಟ್ಟುಕೊಟ್ಟರು.