2013ರ ನಂತರ ಭಾರತ ತಂಡ ಐಸಿಸಿ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದ್ದು, ತವರಿನ ಪರಿಸ್ಥಿತಿಯ ಲಾಭ ಪಡೆದು ಕಪ್ ಗೆಲ್ಲುವ ಅವಕಾಶ ತಂಡಕ್ಕೆ ಸಿಕ್ಕಿದೆ.
ಭಾರತ ಏಕದಿನ ವಿಶ್ವಕಪ್ ಗೆಲ್ಲುವ ಸಾಧ್ಯತೆ ಬಗ್ಗೆ ಮಾತನಾಡಿರುವ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಹಲವು ಸಲಹೆಗಳನ್ನು ನೀಡಿದ್ದಾರೆ. ಈ ವರ್ಷ ಭಾರತ ತಂಡ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ Vs ಬಾಬರ್ ಅಜಂ : ಆತನನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದ ಮಾಜಿ ಪಾಕ್ ಕ್ರಿಕೆಟಿಗ
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ವೈಟ್ವಾಶ್ ಮಾಡಿದ ತಂಡವನ್ನೇ ವಿಶ್ವಕಪ್ವರೆಗೆ ಮುಂದುವರೆಸಬೇಕು ಎಂದು ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ. ಈಗ ಏಕದಿನ ಕ್ರಿಕೆಟ್ ಆಡುತ್ತಿರುವ ತಂಡವನ್ನೇ ಈ ಬಾರಿಯ ವಿಶ್ವಕಪ್ನಲ್ಲಿ ಆಡಿಸಬೇಕು ಎಂದು ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ಗೆ ಸಲಹೆ ನೀಡಿದ್ದಾರೆ.
"ಭಾರತ ಯಾವತ್ತಿಗೂ ದುರ್ಬಲ ತಂಡವಾಗಲು ಸಾಧ್ಯವಿಲ್ಲ. ಇಷ್ಟೊಂದು ಪ್ರತಿಭಾವಂತ ಕ್ರಿಕೆಟಿಗರನ್ನು ಹೊಂದಿರುವ ದೇಶ ದುರ್ಬಲ ತಂಡ ಆಗಲು ಹೇಗೆ ಸಾಧ್ಯ. ಅರ್ಧದಷ್ಟು ಪ್ರತಿಭಾವಂತ ಆಟಗಾರರಿಗೆ ಅವಕಾಶವೂ ಸಿಗುವುದಿಲ್ಲ. ಈಗ ಆಡುತ್ತಿರುವ ತಂಡವನ್ನೇ ವಿಶ್ವಕಪ್ವರೆಗೂ ಮುಂದುವರೆಸಬೇಕು ಎಂದು ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ಆಯ್ಕೆದಾರರ ಬಳಿ ಕೇಳಿಕೊಳ್ಳುತ್ತೇನೆ" ಎಂದು ಹೇಳಿದರು.
ನಿರ್ಭೀತ ಕ್ರಿಕೆಟ್ ಆಡಬೇಕು
ಭಾರತ ತಂಡ ಐಸಿಸಿ ಟೂರ್ನಿಗಳಲ್ಲಿ ಸೌಮ್ಯ ಸ್ವಭಾವದ ಕ್ರಿಕೆಟ್ ಆಡುತ್ತಿದೆ. ದ್ವಿಪಕ್ಷೀಯ ಸರಣಿಗಳಲ್ಲಿ ಆಕ್ರಮಣಕಾರಿಯಾಗಿ ಆಡುವ ಭಾರತ ತಂಡ ಪ್ರಮುಖ ಟೂರ್ನಿಗಳಲ್ಲಿ ಮಾತ್ರ ಸುರಕ್ಷಿತ ಕ್ರಿಕೆಟ್ ಆಡಲು ಮುಂದಾಗುತ್ತದೆ, ಸಾಂಪ್ರದಾಯಿಕ ಕ್ರಿಕೆಟ್ ಆಡಲು ಹೋಗಿ ಅಗ್ರ ತಂಡಗಳ ವಿರುದ್ಧ ಸೋಲನುಭವಿಸಿದೆ ಎಂದಿರುವ ಗಂಗೂಲಿ, ಟೀಂ ಇಂಡಿಯಾ ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಆಕ್ರಣಕಾರಿ ಮತ್ತು ನಿರ್ಭೀತ ಕ್ರಿಕೆಟ್ ಆಡಬೇಕು ಎಂದು ರೋಹಿತ್ ಶರ್ಮಾ ಮತ್ತು ದ್ರಾವಿಡ್ಗೆ ಸಲಹೆ ನೀಡಿದ್ದಾರೆ.
"ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಯಾವುದೇ ಹೊರೆಯಿಲ್ಲದೇ ಆಡಬೇಕು. ಅವರು ವಿಶ್ವಕಪ್ ಗೆಲ್ಲಲೇಬೇಕೆನ್ನುವ ಹೊರೆಯನ್ನು ಬದಿಗಿಟ್ಟು, ನಿರ್ಭೀತ ಕ್ರಿಕೆಟ್ ಆಡಬೇಕು. ಆಗಲೆ ನಾವು ಗೆಲ್ಲಲು ಸುಲಭವಾಗುತ್ತದೆ" ಎಂದು ಗಂಗೂಲಿ ಹೇಳಿದರು.
ತಂಡದ ಬಗ್ಗೆ ಗಂಗೂಲಿ ಮೆಚ್ಚುಗೆ
ಸದ್ಯ ಭಾರತ ತಂಡ ನೀಡುತ್ತಿರುವ ಪ್ರದರ್ಶನಕ್ಕೆ ಸೌರವ್ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಪ್ರತಿಭಾವಂತರ ಕ್ರಿಕೆಟಿಗರನ್ನು ಹೊಂದಿದೆ ಎಂದು ಹೊಗಳಿದ್ದಾರೆ. "ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿಯಂತಹ ಆಟಗಾರರು ತಂಡದಲ್ಲಿದ್ದಾರೆ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಕೂಡ ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ, ಭಾರತ ತಂಡ ಮತ್ತಷ್ಟು ಬಲಿಷ್ಠವಾಗಲಿದೆ" ಎಂದು ಅವರು ಹೇಳಿದ್ದಾರೆ.