ಐಪಿಎಲ್ ಮುಗಿದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳ ಗಮನ ಭಾರತ-ದಕ್ಷಿಣ ಆಫ್ರಿಕಾ ಸರಣಿಯತ್ತ ನೆಟ್ಟಿದೆ. ಜೂನ್ 9 ರಿಂದ ಜೂನ್ 19 ರವರೆಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಆಡಲಿವೆ.
ಇದಕ್ಕಾಗಿ ಭಾರತ ತಂಡದಲ್ಲಿ ವಿವಿಧ ಬದಲಾವಣೆಗಳನ್ನು ಮಾಡಲಾಗಿದೆ. ಮುಂಚೂಣಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಜಡೇಜಾ ಸೇರಿದಂತೆ ಹಲವರು ಇಲ್ಲ. ಕೆಎಲ್ ರಾಹುಲ್ ನೇತೃತ್ವದ ಯುವ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದ್ದು, ಹಾರ್ದಿಕ್ ಪಾಂಡ್ಯ ಸದ್ಯ ತಂಡದ ಬ್ಯಾಟಿಂಗ್ ಪಿಲ್ಲರ್ ಆಗಿ ಕಾಣಿಸಿಕೊಂಡಿದ್ದಾರೆ.
ಗಾಯದ ಸಮಸ್ಯೆಯಿಂದ ಭಾರತ ತಂಡಕ್ಕೆ ಸೇರ್ಪಡೆಯಾಗದ ಹಾರ್ದಿಕ್ ಪಾಂಡ್ಯ ಐಪಿಎಲ್ ಸರಣಿಯಲ್ಲಿ ಉತ್ತಮ ಕಮ್ ಬ್ಯಾಕ್ ನೀಡಿದ್ದಾರೆ. ಅವರು 15 ಪಂದ್ಯಗಳಲ್ಲಿ 487 ರನ್ ಗಳಿಸಿದ್ದಾರೆ. ಅದೇ ರೀತಿ ಬೌಲಿಂಗ್ ನಲ್ಲಿ 8 ವಿಕೆಟ್ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಪಾಂಡ್ಯ ಅವರ ಫಿಟ್ನೆಸ್ ವಿಚಾರವನ್ನ ಸಂಪೂರ್ಣ ನಂಬಬಾರದು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ಬ್ಯಾಟ್ಸ್ಮನ್ ಅಥವಾ ಆಲ್ರೌಂಡರ್ ಆಗಿ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆಯೇ ಎಂಬುದು ತಿಳಿದಿಲ್ಲ. ಆದರೆ ಅವರು 2 ಓವರ್ ಬೌಲ್ ಮಾಡುವಷ್ಟು ಫಿಟ್ ಆಗಿದ್ದಾರೆ. ಆದ್ದರಿಂದ ಅವರನ್ನ ಟಿ20 ಕ್ರಿಕೆಟ್ನಲ್ಲಿ ಮಾತ್ರ ಬಳಸಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಬಳಸಿಕೊಂಡರೆ ಮಾತ್ರ ಅವರು ಟಿ20 ವಿಶ್ವಕಪ್ನಲ್ಲಿ ಸಹಾಯ ಮಾಡುತ್ತಾರೆ. ಅನಗತ್ಯವಾಗಿ ಏಕದಿನ ಕ್ರಿಕೆಟ್ನಲ್ಲಿ ಪಾಂಡ್ಯ ಅವರನ್ನು ಬಳಸಿಕೊಳ್ಳಲು ಪ್ರಯತ್ನಿಸಬೇಡಿ. ಅದು ದೊಡ್ಡ ಅಪಾಯವಾಗಿರುತ್ತದೆ. ಬೌಲಿಂಗ್ನ ಒತ್ತಡದಿಂದ ಮತ್ತೆ ಏನು ಬೇಕಾದರೂ ಆಗಬಹುದು. ಹೀಗಾಗಿ ಅವರನ್ನು ಇದೇ ಫಾರ್ಮೆಟ್ ನಲ್ಲಿ ಸತತವಾಗಿ ಬಳಸಿ, ಉತ್ತಮ ಫಲಿತಾಂಶ ಸಿಗಲಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.