ಕಳೆದ ವಿಶ್ವಕಪ್ನ ಹಿನ್ನಡೆ ಬಳಿಕ..
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ ಹಿನ್ನಡೆ ಅನುಭವಿಸಿದ ಬಳಿಕ ತಂಡದ ಆಟದ ಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಯನ್ನು ಹೇಳಿಕೊಂಡಿದ್ದಾರೆ. "ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ನಾವು ಫೈನಲ್ ಹಂತಕ್ಕೇರಲು ವಿಫಲವಾದ ಬಳಿಕ ಒಂದು ವಿಚಾರವವಾಗಿ ಸ್ಪಷ್ಟತೆಯನ್ನು ಪಡೆದುಕೊಂಡೆವು. ಅದೇನೆಂದರೆ ಆಟದಲ್ಲಿ ನಮ್ಮ ವಿಧಾನ ಹಾಗೂ ಆಟದ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ ಎಂಬುದನ್ನು ನಾವು ಮನಗಂಡಿದ್ದೆವು" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ. ಸ್ಟಾರ್ ಸ್ಪೋರ್ಟ್ಸ್ನ 'ಫಾಲೋ ದಿ ಬ್ಲ್ಯೂಸ್" ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಮಾತನಾಡಿದ್ದಾರೆ.
ಆಕ್ರಮಣಕಾರಿ ಆಟವನ್ನು ಅಳವಡಿಸಿಕೊಂಡಿರುವ ಟೀಮ್ ಇಂಡಿಯಾ
ಇನ್ನು ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ತನ್ನ ಆಡದ ಶೈಲಿಯಲ್ಲಿ ಹೆಚ್ಚಿನ ಆಕ್ರಮಣಶೀಲತೆಯನ್ನು ಅಳವಡಿಸಿಕೊಂಡಿತು. ಇದರಿಂದಾಗಿ ಆಟಗಾರರು ಮತ್ತಷ್ಟು ಹೆಚ್ಚು ಮುಕ್ತವಾಗಿ ಹಾಗೂ ಆತ್ಮವಿಶ್ವಾಸದೊಂದುಗೆ ಬ್ಯಾಟಿಂಗ್ ನಡೆಸುವಂತಾಯಿತು. ಈ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದು ಭಾರತ ಮುಂದೆ ಎರಡು ಪ್ರಮುಖ ಟೂರ್ನಿಗಳಾದ ಏಷ್ಯಾಕಪ್ ಹಾಗೂ ವಿಶ್ವಕಪ್ನಲ್ಲಿ ಆಡುತ್ತಿದ್ದು ಈ ಎರಡು ಮಹತ್ವದ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧತೆಯನ್ನು ನಡೆಸಲಾಗಿದೆ ಎಂದಿದ್ದಾರೆ.
ತಂಡದ ರಣತಂತ್ರ ಬಗ್ಗೆ ರೋಹಿತ್ ಮಾತು
ಇನ್ನು ಇತ್ತೀಚಿನ ಕೆಲ ತಿಣಗಳಿನಿಂದ ಭಾರತ ತಂಡದಲ್ಲಿ ಸಾಕಷ್ಟು ನಾಯಕರ ಬದಲಾವಣೆಯಾಗಿದೆ. ಈ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. "ತಂಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಯಕರನ್ನು ಬೆಳೆಸುವುದು ನಿಜಕ್ಕೂ ಉತ್ತಮವಾದ ಬೆಳವಣಿಗೆ. ಯಾಕೆಂದರೆ ಅದು ಯಾವಾಗಲೂ ಉತ್ತಮ ಬೆಳವಣಿಗೆ. ಆಟಗಾರರು ಒತ್ತಡವನ್ನು ನಿಭಾಯಿಸುವುವುದು, ಆಟವನ್ನು ಅರ್ಥೈಸಿಕೊಳ್ಳಲು ಇದು ಸಹಾಯವಾಗುತ್ತದೆ. ಅಲ್ಲದೆ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ತಂಡವನ್ನು ಮುನ್ನಡೆಸುವುದರಿಂದಾಗಿ ಇದೆಲ್ಲವೂ ತಿಳಿಯುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ. ಭಾರತ ಕಳೆದ ಎಂಡು ತಿಂಗಳುಗಳಲ್ಲಿ ಆರು ನಾಯಕರನ್ನು ಕಂಡಿದೆ. ಬಹುತೇಕ ಎಲ್ಲರೂ ತಮ್ಮ ನಾಯಕತ್ವದ ಗುಣಗಳನ್ನು ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ತೋರಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ
ಇನ್ನು ಪ್ರಸ್ತುತ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಿದ್ದು ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳು ಮುಕ್ತಾಯವಾದಂತೆಯೇ ಭಾರತ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಸರಣಿಯುದ್ದಕ್ಕೂ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಸರಣಿಯನ್ನು ಸುಲಭವಾಗಿ ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸರಣಿಯ ಮೂಲಕ ಭಾರತ ತಂಡ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ಗೆ ಅದ್ಭುತವಾಗಿ ಸಿದ್ಧತೆ ನಡೆಸಿದಂತಾಗಿದೆ.