ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಒತ್ತಡದಲ್ಲಿದ್ದು, ಮೈದಾನದಲ್ಲಿ ಆಟಗಾರರ ವರ್ತನೆಯೊಂದಿಗೆ ಕಾಣಿಸತೊಡಗಿದೆ ಎಂದು ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ಹೇಳಿದ್ದಾರೆ.
ಡಿಆರ್ಎಸ್ ರಿವೀಸ್ ಮೂಲಕ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ನಾಟೌಟ್ ಆದ ತೀರ್ಪು ಕೊಹ್ಲಿ ಮತ್ತು ಉಳಿದ ಆಟಗಾರರನ್ನ ಒತ್ತಡಕ್ಕೆ ಸಿಲುಕಿಸಿದ್ದು, ಪಂದ್ಯದ ಬಿಸಿ ಎದುರಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ಭಾರತ ನೀಡಿರುವ 212 ರನ್ಗಳ ಗುರಿ ಬೆನ್ನಟ್ಟುತ್ತಿರುವಾಗ, ರವಿಚಂದ್ರನ್ ಅಶ್ವಿನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದ ಡೀನ್ ಎಲ್ಗರ್ ಔಟ್ ಎಂದು ಆನ್ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ತೀರ್ಪು ನೀಡಿದ್ರು. ಆದ್ರೆ ಡೀನ್ ಎಲ್ಗರ್ ಅದನ್ನ ರಿವೀವ್ ತೆಗೆದುಕೊಂಡ್ರು.
ಡಿಆರ್ಎಸ್ LBW ನಾಟೌಟ್ ವಿವಾದ: ಜಗತ್ತೇ ನೋಡಿದೆ, ತೀರ್ಪು ಮ್ಯಾಚ್ ರೆಫರಿಗೆ ಬಿಟ್ಟಿದ್ದು ಎಂದ ಬೌಲಿಂಗ್ ಕೋಚ್
ಡಿಆರ್ಎಸ್ ರಿವೀವ್ನಲ್ಲಿ ಚೆಂಡು ಅತ್ಯಂತ ಸ್ಪಷ್ಟವಾಗಿ ಇನ್ಲೈನ್ನಲ್ಲಿ ಬೀಳುತ್ತಿದ್ದು, ಇಂಪ್ಯಾಕ್ಟ್ ಇನ್ ಲೈನ್ನಲ್ಲಿ ಸಾಗಿದ್ರೂ ಸಹ ವಿಕೆಟ್ನಿಂದ ಮೇಲ್ಬಾಗದಲ್ಲಿ ಸಾಗುತ್ತಿರುವುದನ್ನ ತೋರಿಸಿ ನಾಟೌಟ್ ನೀಡಲಾಯಿತು. ಇದನ್ನು ಕಂಡ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಷ್ಟೇ ಅಲ್ಲದೆ, ಸ್ವತಃ ಆನ್ಫೀಲ್ಡ್ನಲ್ಲಿ ಔಟ್ ಎಂದು ತೀರ್ಪು ನೀಡಿದ್ದ ಅಂಪೈರ್ ಮರೈಸ್ ಎರಾಸ್ಮಸ್ ಅಚ್ಚರಿಗೊಳಗಾಗಿದ್ದಾರೆ.
ಡಿಆರ್ಎಸ್ ತೀರ್ಪಿನಿಂದ ರೊಚ್ಚಿಗೆದ್ದ ವಿರಾಟ್ ಕೊಹ್ಲಿ ಮತ್ತು ಟೀಂ ಡಿಆರ್ಎಸ್ ವಿರುದ್ಧ ಕಿಡಿ ಕಾರಿದ್ರು. ಸ್ಟಂಪ್ ಮೈಕ್ ಬಳಿ ತೆರಳಿ ವಿರಾಟ್ ತಮ್ಮ ಅಸಮಾಧಾನ ಹೊರಹಾಕಿದ್ರು. ಪಂದ್ಯ ಪ್ರಸಾರಕರು ಇದರ ಕಡೆಗೂ ಹೆಚ್ಚು ಗಮನಹರಿಸುವಂತೆ ಟೀಕಿಸಿದ್ರು.
ಮೊದಲಿಗೆ ರವಿಚಂದ್ರನ್ ಅಶ್ವಿನ್ ಸ್ಟಂಪ್ ಮೈಕ್ ಬಳಿಗೆ ತೆರಳಿ ಪಂದ್ಯ ಪ್ರಸಾರಕರ ಸೂಪರ್ಸ್ಪೋರ್ಟ್ ವಿರುದ್ಧ ಕಿಡಿಕಾರಿದ್ರೆ, ನಂತರದಲ್ಲಿ ವಿರಾಟ್ ಕೊಹ್ಲಿ ಸ್ಟಂಪ್ ಮೈಕ್ ಬಳಿ ನೇರವಾಗಿ ತೆರಳಿ "ನಿಮ್ಮ ತಂಡವು ಚೆಂಡನ್ನು ಹೊಳೆಸುವಾಗ ಅವರ ಮೇಲೂ ಗಮನವನ್ನ ಕೇಂದ್ರೀಕರಿಸಿ. ಎದುರಾಳಿ ತಂಡವನ್ನ ಮಾತ್ರವಲ್ಲ. ಯಾವಾಗಲೂ ಜನರನ್ನು ಹಿಡಿಯಲು ಪ್ರಯತ್ನಿಸುತ್ತಿರುವಿರಿ "ಎಂದು ಕೊಹ್ಲಿ ಸ್ಟಂಪ್ ಮೈಕ್ಗೆ ಹೇಳಿದರು.
ಈ ಘಟನೆ ನಡೆದು ಒಂಬತ್ತು ಓವರ್ಗಳ ನಂತರ 96 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 30 ರನ್ ಗಳಿಸಿದ ಎಲ್ಗರ್ ಅವರನ್ನು ಜಸ್ಪ್ರೀತ್ ಬುಮ್ರಾ ಔಟ್ ಮಾಡಿದರು. ಕೊನೆಗೂ ವಿಕೆಟ್ ಪಡೆದ ತೃಪ್ತಿಯಲ್ಲಿ ಟೀಂ ಇಂಡಿಯಾ ಮೈದಾನದಿಂದ ಹೊರ ನಡೆಯಿತು. ಆದ್ರೆ ಕೊಹ್ಲಿಯ ಪ್ರತಿಕ್ರಿಯೆಯನ್ನು ಗಮನಿಸಿದರೆ, ಆತಿಥೇಯ ತಂಡವು ಸಾಕಷ್ಟು ಒತ್ತಡದಲ್ಲಿದೆ ಎಂದು ದಕ್ಷಿಣ ಆಫ್ರಿಕಾ ಬೌಲರ್ ಲುಂಗಿ ಎನ್ಗಿಡಿ ಅಭಿಪ್ರಾಯಪಟ್ಟಿದ್ದಾರೆ.
"ಅಂತಹ ಪ್ರತಿಕ್ರಿಯೆಗಳು ಸ್ವಲ್ಪ ಹತಾಶೆಯನ್ನು ತೋರಿಸುತ್ತವೆ ಮತ್ತು ಕೆಲವೊಮ್ಮೆ ತಂಡಗಳು ಅದನ್ನು ಲಾಭ ಮಾಡಿಕೊಳ್ಳುತ್ತವೆ. ನೀವು ಎಂದಿಗೂ ತುಂಬಾ ಭಾವನೆಗಳನ್ನು ತೋರಿಸಲು ಮುಂದಾಗಬಾರದು, ಆದರೆ ಭಾರತ ಪರ ಭಾವನೆಗಳು ಹೆಚ್ಚಿರುವುದನ್ನು ನಾವು ನೋಡಬಹುದು. ಅವರು ಸ್ವಲ್ಪ ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ, "ಎಂದು ಎನ್ಗಿಡಿ ಹೇಳಿದರು.
ಇನ್ನು ದಿನದ ಕೊನೆಯಲ್ಲಿ ಭಾರತದ ಪರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಭಾರತದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಲ್ಲಿ ಏನಾಯಿತು ಎಂಬುದನ್ನ ಎಲ್ಲರೂ ನೋಡಿದ್ದಾರೆ ಎಂದು ಉತ್ತರಿಸಿದ್ದಾರೆ.
"ನಾವು ಅದನ್ನು ನೋಡಿದ್ದೇವೆ, ನೀವು ಅದನ್ನು ನೋಡಿದ್ದೀರಿ, ಎಲ್ಲರೂ LBW ನಿರ್ಧಾರವನ್ನು ನೋಡಿದ್ದಾರೆ, ತೀರ್ಮಾನವನ್ನ ನಾನು ಮ್ಯಾಚ್ ರೆಫರಿಗೆ ಬಿಡುತ್ತೇನೆ. ಈಗ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸುವ ಸಮಯ" ಎಂದು ದಿನದ ಆಟದ ಕೊನೆಯಲ್ಲಿ ಭಾರತೀಯ ಬೌಲಿಂಗ್ ಕೋಚ್ ಹೇಳಿದರು.
ಮೂರನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 101ರನ್ ಕಲಹಾಕಿದ್ದು, ಗೆಲುವಿಗೆ ಇನ್ನು 111 ರನ್ಗಳು ಬಾಕಿ ಉಳಿದಿವೆ. ಅದೇ ಭಾರತದ ಗೆಲುವಿಗೆ 8 ವಿಕೆಟ್ಗಳ ಅವಶ್ಯಕತೆಯಿದ್ದು, ಪಂದ್ಯ ಜಯಿಸಿದ ತಂಡ ಮೂರು ಪಂದ್ಯಗಳ ಸರಣಿಯನ್ನ ಗೆದ್ದು ಬೀಗಲಿದೆ.