ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯ
ಅದು ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನೀಡಿದ್ದ ಸವಾಲಿನ ಮೊತ್ತವನ್ನು ಭಾರತ ಬೆನ್ನಟ್ಟಿತ್ತು. ಈ ಮೊದಲ ಮೂರು ವಿಕೆಟ್ ಉರುಳಿದ ಬಳಿಕ ಕ್ರೀಸ್ಗೆ ಯುವರಾಜ್ ಸಿಂಗ್ ಬರುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕ್ರಿಕೆಟ್ ಅಭಿಮಾನಿಗಳಿಗೆ ಅಲ್ಲಿ ಅಚ್ಚರಿ ಕಾದಿತ್ತು
ಇನ್ಫಾರ್ಮ್ ಆಟಗಾರ ಯುವಿ ಬದಲು ಧೋನಿ
ಇಡೀ ವಿಶ್ವಕಪ್ನುದ್ದಕ್ಕೂ ಅದ್ಭುತ ಫಾರ್ಮ್ ಮೂಲಕ ಟೀಮ್ ಇಂಡಿಯಾದ ಗೆಲುವಿಗೆ ಪ್ರಮುಖ ಕೊಡುಗೆ ನೀಡುತ್ತಿದ್ದ ಯುವರಾಜ್ ಸಿಂಗ್ ಬದಲಿಗೆ ಅವರ ಕ್ರಮಾಂಕದಲ್ಲಿ ಅಂದು ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿದಿದ್ದರು. ಈ ನಿರ್ಧಾರ ಅಚ್ಚರಿಯ ಜೊತೆಗೆ ಗೊಂದಲಕ್ಕೆ ಕಾರಣವಾಗಿತ್ತು. ಧೋನಿ ಯಾಕೆ ಈ ನಿರ್ಧಾರ ತೆಗೆದುಕೊಂಡರು ಎಂಬ ಚರ್ಚೆಯೂ ಆರಂಭವಾಯಿತು.
ಹಾಗೇಯೇ ಉಳಿದುಕೊಂಡಿತ್ತು ಆ ಕುತೂಹಲ
ಆ ಪಂದ್ಯದಲ್ಲಿ ಧೋನಿ ಕ್ರಮಾಂಕವನ್ನು ಬದಲಿಸಿಕೊಂಡಿದ್ದು ಟೀಮ್ ಇಂಡಿಯಾಗೆ ಯಶಸ್ಸನ್ನು ತಂದಿತ್ತು. ಹೀಗಾಗಿ ಈ ನಿರ್ಧಾರದ ಬಗ್ಗೆ ಯಾವುದೇ ನಕಾರಾತ್ಮಕ ಚರ್ಚೆಗೂ ಅವಕಾಶ ದೊರೆತಿರಲಿಲ್ಲ. ಹಾಗೇಯೇ ಈ ನಿರ್ಧಾರದ ಬಗ್ಗೆ ಟೀಮ್ ಈಂಡಿಯಾದ ಕಡೆಯಿಂದಲೂ ಯಾವುದೇ ಸ್ಪಷ್ಟನೆ ದೊರೆತಿರಲಿಲ್ಲ.
ತುಟಿ ಬಿಚ್ಚಿದ ಸಚಿನ್
ಈ ಸಂದರ್ಭದಲ್ಲಿ ವಿಶ್ವದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 2011ರ ವಿಶ್ವಕಪ್ನ ಪ್ರಮುಖ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಅಂದು ಐದನೇ ಕ್ರಮಾಂಕದಲ್ಲಿ ಧೋನಿ ಕಣಕ್ಕಿಳಿದ ಬಗ್ಗೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಆ ನಿರ್ಧಾರವನ್ನು ಧೋನಿಗೆ ಸೂಚಿಸಿದ್ದು ತಾನೇ ಎಂದು ಸಚಿನ್ ಹೇಳಿದ್ದಾರೆ.
ಸಚಿನ್ ನೀಡಿದ್ದ ಸಲಹೆ
2011ರ ವಿಶ್ವಕಪ್ ಫೈನಲ್ ನಲ್ಲಿ ಟೀಮ್ ಇಂಡಿಯಾ ಮೂರನೇ ವಿಕೆಟ್ ಕಳೆದುಕೊಂಡಿತ್ತು. ಐದನೇ ಕ್ರಮಾಂಕದಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದ ಯುವರಾಜ್ ಸಿಂಗ್ ಕ್ರೀಸ್ಗೆ ಇಳಿಯಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ಸ್ವತಃ ಧೋನಿ ಕಣಕ್ಕಿಳಿಯಬೇಕು ಎಂದು ಸಚಿನ್ ತೆಂಡೂಲ್ಕರ್ ಧೋನಿಗೆ ಸೂಚನೆಯನ್ನು ನೀಡಿದ್ದರಂತೆ.
ಎಡ ಬಲ ಕಾಂಬಿನೇಶನ್
ವಿರಾಟ್ ಕೊಹ್ಲಿ ಔಟಾಗುವ ಮುನ್ನ ಕೊಹ್ಲಿ ಮತ್ತು ಗೌತಮ್ ಗಂಭೀರ್ ಕ್ರೀಸ್ನಲ್ಲಿದ್ದರು. ಎಡ ಬಲ ಕಾಂಬಿನೇಶನ್ನ ಈ ಆಟಗಾರರಲ್ಲಿ ಗಂಭೀರ್ ಔಟಾದರೆ ಯುವರಾಜ್ ಸಿಂಗ್ ಮತ್ತು ಕೊಹ್ಲಿ ಔಟಾದರೆ ಧೋನಿ ಕಣಕ್ಕಿಳಿಯಬೇಕು ಎಂದು ಸಚಿನ್ ಮೊದಲೇ ಸೂಚಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಕೊಹ್ಲಿ ಔಟಾಗುತ್ತಿದ್ದಂತೆ ಧೋನಿ ಕಣಕ್ಕೆ
ಅಂತೆಯೇ ವಿರಾಟ್ ಕೊಹ್ಲಿ ಫೈನಲ್ ವಿಕೆಟ್ ನೀಡಿ ನಿರ್ಗಮಿಸಿದ ಸಂದರ್ಭದಲ್ಲಿ ಧೋನಿ ಕಣಕ್ಕಿಳಿದರು. ಗಂಭೀರ್ ಜೊತೆಗೆ ಅದ್ಭುತವಾಗಿ ಇನ್ನಿಂಗ್ಸ್ ಮುಂದುವರಿಸಿದ ಬಳಿಕ ಯುವರಾಜ್ ಜೊತೆಯಾದರು. ಅಂತಿಮವಾಗಿ ಈ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಗಳಿಸಿ ಗೆಲುವಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದರು. ಈ ಅದ್ಭುತ ಆಟಕ್ಕೆ ಧೋನಿ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದುಕೊಂಡರು.