ಹೊಸದಿಲ್ಲಿ, ಜೂನ್ 20: ಗಾಯದ ಸಮಸ್ಯೆ ಕಾರಣ ಬಲವಂತದಿಂದ ವಿಶ್ವಕಪ್ನಿಂದ ಶಿಖರ್ ಧವನ್ ಹೊರಬಿದ್ದಿರುವುದಕ್ಕೆ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮರುಕ ವ್ಯಕ್ತ ಪಡಿಸಿದ್ದು, ಧವನ್ ಟೀಮ್ ಇಂಡಿಯಾಗೆ ಮರಳಿ ಭರ್ಜರಿ ರೀತಿಯಲ್ಲಿ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇದೇ ವೇಳೆ ಧವನ್ ಸ್ಥಾನದಲ್ಲಿ ಟೀಮ್ ಇಂಡಿಯಾ ಸೇರಿಕೊಂಡಿರುವ ಎಡಗೈ ಬ್ಯಾಟ್ಸ್ಮನ್ ಹಾಗೂ ವಿಕೆಟ್ಕೀಪರ್ ರಿಷಭ್ ಪಂತ್ಗೆ ಶುಭವಾಗಲಿ ಎಂದು ಕ್ರಿಕೆಟ್ ದೇವರು ಎಂದೇ ಕರೆಸಿಕೊಂಡಿರುವ ಸಚಿನ್ ಹಾರೈಸಿದ್ದಾರೆ.
ಧವನ್, ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ109 ಎಸೆತಗಳಲ್ಲಿ 117 ರನ್ಗಳ ಅಮೋಘ ಶತಕ ದಾಖಲಿಸಿದ್ದರು. ಇದೇ ಪಂದ್ಯದಲ್ಲಿ ಆಸೀಸ್ನ ವೇಗಿ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್ನಲ್ಲಿ ಎಡಗೈನ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಬಲವಾದ ಹೊಡೆತ ತಿಂದಿದ್ದರು. ಬಳಿಕ ಎಕ್ಸ್-ರೇ ಟೆಸ್ಟ್ನಲ್ಲಿ ಯಾವುದೇ ಸಮಸ್ಯೆ ಕಾಣಿಸದೇ ಇದ್ದರು, ಸಿ.ಟಿ. ಸ್ಕ್ಯಾನ್ನಲ್ಲಿ ಮೂಳೆಯಲ್ಲಿ ಕೂದಲು ಗಾತ್ರದ ಬಿರುಕುಂಟಾಗಿರುವುದು ಪತ್ತೆಯಾಗಿತ್ತು.
ಔಟಾದರೂ ಕೇನ್ ವಿಲಿಯಮ್ಸನ್ ಕ್ರೀಡಾ ಸ್ಫೂರ್ತಿ ಮೆರೆಯಲಿಲ್ಲ ಏಕೆ?
ಇದರಿಂದಾಗಿ ನ್ಯೂಜಿಲೆಂಡ್ (ಜೂನ್ 13), ಪಾಕಿಸ್ತಾನ (ಜೂನ್ 16), ಅಫಘಾನಿಸ್ತಾನ (ಜೂನ್ 22) ಮತ್ತು ವೆಸ್ಟ್ ಇಂಡೀಸ್ (ಜೂನ್ 27) ವಿರುದ್ಧದ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಲು ಹೆಚ್ಚು ಸಮಯ ಬೇಕಾಗಿರುವ ಕಾರಣ ವಿಶ್ವಕಪ್ನಿಂದಲೇ ನಿರ್ಗಮಿಸಿದ್ದಾರೆ ಎಂದು ಬಿಸಿಸಿಐ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು.
"ಧವನ್ ವಿಚಾರದಲ್ಲಿ ಬೇಸರವಾಗುತ್ತಿದೆ. ಚಾಂಪಿಯನ್ ಆಟಗಾರನಂತೆ ಅವರು ಆಡುತ್ತಿದ್ದರು. ವಿಶ್ವಕಪ್ನಂತಹ ಅತ್ಯಂತ ಮಹತ್ವದ ಟೂರ್ನಿಯ ಮಧ್ಯದಲ್ಲೇ ಗಾಯಗೊಂಡು ಹೊರಗುಳಿಯುವಂತಾದದ್ದು, ಹೈದಯವನ್ನು ಕಿತ್ತು ಬರುವಂತೆ ಮಾಡುತ್ತದೆ. ಅವರು ಮತ್ತಷ್ಟು ಬಲಿಷ್ಠವಾಗಿ ತಂಡಕ್ಕೆ ಹಿಂದಿರುಗಲಿದ್ದಾರೆ ಎಂಬ ಆತ್ಮವಿಶ್ವಾಸ ನನಗಿದೆ,'' ಎಂದು ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿದ್ದಾರೆ.
ಧವನ್ ಬಳಿಕ ಆಲ್ರೌಂಡರ್ ವಿಜಯ್ ಶಂಕರ್ಗೂ ಗಾಯದ ಹೊಡೆತ!
"ರಿಷಭ್ ನೀನು ಕೂಡ ಒಬ್ಬ ಚಾಂಪಿಯನ್ ಆಟಗಾರನಂತೆ ಪ್ರದರ್ಶನ ನೀಡಿರುವೆ. ನಿನಗೆ ನಿನ್ನ ಸಾಮರ್ಥ್ಯ ಅನಾವರಣ ಪಡಿಸಲು ಇದಕ್ಕಿಂತಲೂ ದೊಡ್ಡದಾದ ವೇದಿಕೆ ಮತ್ತೊಂದು ಸಿಗಲಾರದು. ಶುಭವಾಗಲಿ,'' ಎಂದು ಸಚಿನ್ ಯುವ ಆಟಗಾರ ರಿಷಭ್ ಪಂತ್ಗೆ ಹಾರೈಸಿದ್ದಾರೆ.
ಭಾರತ ತಂಡ ಈವರೆಗೆ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳಗೆ ಆಹುತಿಯಾದರೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಕಠಿಣ ಪಂದ್ಯಗಳಲ್ಲಿ ಜಯ ದಾಖಲಿಸಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಪಟ್ಟದೊಂದಿಗೆ ಅಂಕಪಟ್ಟಿಯಲ್ಲಿ ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದೆ. ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಕ್ರಿಕೆಟ್ ಕೂಸು ಅಫಘಾನಿಸ್ತಾನ ವಿರುದ್ಧ ಜೂನ್ 22ರಂದು ಸೌಥಂಪ್ಟನ್ನ ರೋಸ್ಬೌಲ್ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.