ನವದೆಹಲಿ, ಸೆ. 28 : ಸಚಿನ್ ಮತ್ತು ಧೋನಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದ ಟೀಂ ಇಂಡಿಯಾ ಕ್ರಿಕೆಟ್ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಸಂದೀಪ್ ಪಾಟೀಲ್ ವಿರುದ್ಧ ಬಿಸಿಸಿಐ ಅಧ್ಯಕ್ಷ ಅನೂರಾಗ್ ಠಾಕೂರ್ ಕಿಡಿ ಕಾರಿದ್ದಾರೆ
'ಪಾಟೀಲ್ ಆಯ್ಕೆ ಸಮಿತಿಯ ಮುಖ್ಯಸ್ಥ ಜವಾಬ್ದಾರಿ ಹೊಂದಿದ್ದಾಗ ಬೇಜವಾಬ್ದಾರಿಯಿಂದ ಮಾತನಾಡ ಬಾರದಿತ್ತು. ಇದು ನ್ಯಾಯಯುತವಲ್ಲ' ಎಂದು ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2012ರಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ಅವರನ್ನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬಲವಂತವಾಗಿ ನಿವೃತ್ತರಾಗುವಂತೆ ಮಾಡಲಾಯಿತು ಎಂದು ಪಾಟೀಲ್ ಇತ್ತೀಚೆಗಷ್ಟೇ ಮಾಧ್ಯಮಗಳ ಮುಂದೆ ಹೇಳಿದ್ದರು. ['ಸಚಿನ್ ನಿವೃತ್ತಿಯಾಗಿರದಿದ್ದರೆ, ಟೀಂ ನಿಂದ ಕಿತ್ತು ಹಾಕ್ತಾ ಇದ್ವಿ!']
2015ರಲ್ಲಿ ದೋನಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕುವ ಕುರಿತು ಚರ್ಚಿಸಲಾಗಿತ್ತು. ಆದರೆ ಐಸಿಸಿ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಬಿಡಲಾಗಿತ್ತು ಎಂದೂ ಪಾಟೀಲ್ ಹೇಳಿದ್ದರು. ಇದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಮುಖ್ಯಸ್ಥ ಎಂದ ಮೇಲೆ ಅವರ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿರುತ್ತದೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಡುವೆ ಬಹಿರಂಗಪಡಿಸಲಾಗದ ಕೆಲ ವಿಶ್ವಾಸಾರ್ಹ ಚರ್ಚೆಗಳೂ ನಡೆದಿರುತ್ತವೆ. ಅದೆನ್ನೆಲ್ಲಾ ಹೇಳುವ ಅಗತ್ಯ ವಾದರೂ ಏನಿತ್ತು. ಪಾಟೀಲ್ ನೈತಿಕ ಜವಾಬ್ದಾರಿಯಿಂದ ನಡೆದುಕೊಳ್ಳ ಬೇಕಿತ್ತು ಎಂದೂ ಠಾಕೂರ್ ಹೇಳಿದ್ದಾರೆ.
ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡಿದವರು ಆ ಸಂಸ್ಥೆಯ ವಿಶ್ವಾಸಾರ್ಹ ವಿಷಯಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಮೊದಲು ಹತ್ತು ಸಲ ಯೋಚನೆ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.