ಸೀಮಿತ ಓವರ್ಗಳ ಸರಣಿಗೆ ಶಿಖರ್ ಧವನ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾಗೆ ಈಗಾಗಲೇ ಪ್ರಯಾಣಿಸಿದೆ. ಈ ಮೂಲಕ ಒಂದೇ ಸಮಯದಲ್ಲಿ ಎರಡು ಭಿನ್ನ ರಾಷ್ಟ್ರಗಳಲ್ಲಿ ಕ್ರಿಕೆಟ್ ಸರಣಿಯನ್ನಾಡಲು ಭಾರತೀಯ ಕ್ರಿಕೆಟ್ ತಂಡ ಸಜ್ಜಾಗಿದೆ. ಈ ಸರಣಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ದೊರೆತ ಅತ್ಯುತ್ತಮ ಅವಕಾಶವಾಗಿದ್ದರೆ ಕೆಲ ಅನುಭವಿ ಆಟಗಾರರಿಗೆ ಮರಳಿ ಸ್ಥಾನಗಳಿಸಲು ಸಿಕ್ಕ ಅವಕಾಶವಾಗಿದೆ.
ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಈ ಸರಣಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ವಿಚಾರವನ್ನು ಸ್ವತಃ ಕುಲ್ದೀಪ್ ಯಾದವ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಶ್ರೀಲಂಕಾ ವಿರುದ್ಧದ ಈ ಸರಣಿ ಭಾರತ ತಂಡದಲ್ಲಿ ತಾನು ಮರಳಿ ಸ್ಥಾನ ಸಂಪಾದಿಸಲು ದೊರೆತ ಅತ್ಯುತ್ತಮ ಅವಕಾಶವಾಗಿದೆ ಎಂದಿದ್ದಾರೆ.
ಐಪಿಎಲ್ 2022ಕ್ಕೆ ಮತ್ತೆರಡು ತಂಡಗಳ ಸೇರ್ಪಡೆ ಆಗುತ್ತಾ?!
"ಈ ಶ್ರೀಲಂಕಾ ಸರಣಿ ಬಹಳ ಬಹಳ ಪ್ರಮುಖವಾಗಿದೆ. ಯಾಕೆಂದರೆ ನಾನೀಗ ಇಂಗ್ಲೆಂಡ್ಗೆ ತೆರಳಿರುವ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ಎರಡನೇಯದಾಗಿ ಆಡಲು ಹಾಗೂ ಉತ್ತಮ ಪ್ರದರ್ಶನವನ್ನು ನೀಡಲು ನನಗೆ ದೊರೆತ ಉತ್ತಮ ಅವಕಾಶವಾಗಿದೆ. ಇದಾದ ನಂತರ ನಾವು ಐಪಿಎಲ್ನಲ್ಲಿಯೂ ಆಡಲಿದ್ದೇವೆ. ಇವು ನನಗೆ ತಂಡಕ್ಕೆ ಮರಳಲು ಮತ್ತೊಂದು ಅವಕಾಶವನ್ನು ನೀಡುತ್ತದೆ" ಎಂದು ಕುಲ್ದೀಪ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನಾನು ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ ಖಂಡಿತವಾಗಿಯೂ ತಂಡಕ್ಕೆ ಹಿಂದಿರುಗುತ್ತೇನೆ ಎಂದು ನನಗೆ ತಿಳಿದಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಟಿ೨೦ ವಿಶ್ವಕಪ್ನಲ್ಲಿ ಆಡುವ ಬಗ್ಗೆ ಹೆಚ್ಚಾಗಿ ಚಿಂತಿಸುತ್ತಿಲ್ಲ. ಯಾಕೆಂದರೆ ಅಂತಿಮವಾಗಿ ನಾನು ಎಷ್ಟು ಉತ್ತಮ ಪ್ರದರ್ಶನವನ್ನು ನೀಡುತ್ತೇನೆ ಎಂಬುದು ಪ್ರಮುಖವಾಗುತ್ತದೆ. ತಂಡದಲ್ಲಿ ಆರೋಗ್ಯಕರವಾದ ಸ್ಪರ್ಧೆಯಿದೆ. ಹೀಗಾಗಿ ನನ್ನ ಕರ್ತವ್ಯ ಏನು ಎಂಬುದರ ಬಗ್ಗೆ ನನಗೆ ತಿಳಿದಿದೆ" ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ.
ಭಾರತದ ತಂಡದ ಪ್ರಮುಖ ಭಾಗವಾಗಿದ್ದ ಕುಲ್ದೀಪ್ ಯಾದವ್ ಇತ್ತೀಚೆಗೆ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯಲು ಕೂಡ ಸಾಧ್ಯವಾಗಿರಲಿಲ್ಲ. ಈ ಬಾರಿಯ ಐಪಿಎಲ್ನ ಮೊದಲಾರ್ಧದ ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡುವ ಬಳಗದಲ್ಲಿ ಕುಲ್ದೀಪ್ ಕಾಣಿಸಿಕೊಂಡಿರಲಿಲ್ಲ. ಬಳಿಕ ಇಂಗ್ಲೆಂಡ್ ಪ್ರವಾಸದಿಂದಲೂ ಅವರನ್ನು ಕೈಬಿಡಲಾಗಿತ್ತು. 2020ರ ಆವೃತ್ತಿಯ ಐಪಿಎಲ್ನಲ್ಲಿಯೂ ಕುಲ್ದೀಪ್ ಕೇವಲ 5 ಪಂದ್ಯಗಳಲ್ಲಿ ಮಾತ್ರವೇ ಆಡುವ ಅವಕಾಶವನ್ನು ಪಡೆದಿದ್ದು ಒಂದು ವಿಕೆಟ್ ಮಾತ್ರವೇ ಪಡೆದುಕೊಂಡಿದ್ದರು.