1. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರುವುದು
ನಿಮಗೆಲ್ಲ ತಿಳಿದಿರುವ ಹಾಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಹಾರ್ದಿಕ್ ಪಾಂಡ್ಯರನ್ನು ಆಲ್ ರೌಂಡರ್ ಆಟಗಾರನೆಂದು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣ ಆರಂಭವಾದ ನಂತರ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿರುವ ಯಾವುದೇ ಪಂದ್ಯದಲ್ಲಿಯೂ ಬೌಲಿಂಗ್ ಮಾಡಿಲ್ಲ. ಗಾಯದ ಸಮಸ್ಯೆಯಿಂದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ತಂಡವನ್ನು ಸೇರಿಕೊಂಡರೂ ಸಹ ಕೆಲ ಗಾಯದ ಸಮಸ್ಯೆಯಿಂದ ಬೌಲಿಂಗ್ ಮಾಡಲಾಗುತ್ತಿಲ್ಲ ಎಂಬ ಸುದ್ದಿಗಳೂ ಇವೆ. ಹೀಗೆ ಸದ್ಯ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಅಭ್ಯಾಸ ಪಡೆದುಕೊಳ್ಳುವುದನ್ನು ಬಿಟ್ಟು, ಬೌಲಿಂಗ್ ಮಾಡದೇ ಇರುವ ಹಾರ್ದಿಕ್ ಪಾಂಡ್ಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದೇ ರೀತಿಯ ಸಮಸ್ಯೆಗೊಳಗಾದರೆ ಭಾರತದ ಆಲ್ ರೌಂಡರ್ ಆಟಗಾರರ ವಿಭಾಗದ ಗತಿಯೇನು ಎಂಬ ಪ್ರಶ್ನೆ ಇದೀಗ ಮೂಡಿದೆ. ಕೇವಲ ಬೌಲಿಂಗ್ ಮಾತ್ರವಲ್ಲದೇ ಹಾರ್ದಿಕ್ ಪಾಂಡ್ಯ ಯುಎಇ ಚರಣದಲ್ಲಿ ಬ್ಯಾಟಿಂಗ್ನಲ್ಲಿಯೂ ವಿಫಲರಾಗಿರುವ ವಿಷಯದ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರುವುದು ಮತ್ತು ಕಳಪೆ ಬ್ಯಾಟಿಂಗ್ ಫಾರ್ಮ್ ಎದುರಿಸುತ್ತಿರುವುದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ.
2. ರಾಹುಲ್ ಚಹರ್ ನೀರಸ ಪ್ರದರ್ಶನ
ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮತ್ತೋರ್ವ ಆಟಗಾರ ರಾಹುಲ್ ಚಹರ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರ ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್ ಚಹರ್ ಶ್ರೀಲಂಕಾ ಪ್ರವಾಸದಲ್ಲಿ ತಾನು ಆಡಿದ ತನ್ನ ಚೊಚ್ಚಲ ಏಕದಿನ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದರು ಮತ್ತು 2 ಟಿ ಟ್ವೆಂಟಿ ಪಂದ್ಯಗಳ ಪೈಕಿ 4 ವಿಕೆಟ್ ಪಡೆದು ಉತ್ತಮ ಪ್ರದರ್ಶನವನ್ನು ನೀಡಿದ್ದರು. ಹೀಗೆ ಆಯ್ಕೆಗಾರರ ಗಮನವನ್ನು ಸೆಳೆದಿದ್ದ ರಾಹುಲ್ ಚಹರ್ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಅನುಭವಿ ಆಟಗಾರ ಯುಜುವೇಂದ್ರ ಚಹಲ್ ಬದಲಾಗಿ ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣದಲ್ಲಿ ಮಾತ್ರ ರಾಹುಲ್ ಚಹರ್ ಅಕ್ಷರಶಃ ಮಂಕಾಗಿದ್ದಾರೆ. ವಿಕೆಟ್ ಪಡೆಯಲು ಒದ್ದಾಡುತ್ತಿರುವ ರಾಹುಲ್ ಚಹರ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿರುವ 11 ಪಂದ್ಯಗಳಲ್ಲಿ ಪಡೆದಿರುವುದು ಕೇವಲ 11 ವಿಕೆಟ್. ಇನ್ನು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ಚಹರ್ ಎದುರಿಸುತ್ತಿರುವ ಕಳಪೆ ಫಾರ್ಮ್ ಮುಂಬೈ ಇಂಡಿಯನ್ಸ್ ತಂಡದ ವಿಫಲತೆಗೆ ಕಾರಣವಾಗಿರುವ ಅಂಶಗಳಲ್ಲೊಂದು ಎಂದರೆ ತಪ್ಪಾಗಲಾರದು. ಹೀಗೆ ಕಳಪೆ ಪ್ರದರ್ಶನ ನೀಡುತ್ತಿರುವ ರಾಹುಲ್ ಚಹರ್ ಕೆಲವೇ ವಾರಗಳಲ್ಲಿ ಆರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದೇ ರೀತಿಯ ಪ್ರದರ್ಶನ ತೋರಿದರೆ ಭಾರತ ತಂಡಕ್ಕೆ ಹಿನ್ನಡೆಯುಂಟಾಗಬಹುದು ಎಂಬ ಸಮಸ್ಯೆ ಇದೀಗ ಎದುರಾಗಿದೆ.
3. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಫ್ಲಾಪ್ ಶೋ
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಜೋಡಿಯಾದ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಚರಣದಲ್ಲಿ ದೊಡ್ಡ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ತಿಳಿದಿರುವ ವಿಷಯವೇ. ಈ ಕಾರಣದಿಂದಾಗಿಯೇ ಇತ್ತೀಚಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಡುವ ಬಳಗದಿಂದ ಇಶಾನ್ ಕಿಶನ್ ಅವರನ್ನು ಕೈಬಿಟ್ಟು ಸೌರಭ್ ತಿವಾರಿಗೆ ಆಡುವ ಅವಕಾಶವನ್ನು ನೀಡಲಾಗಿದೆ. ಇನ್ನು ತಂಡದಿಂದ ಸ್ಥಾನವನ್ನು ಕಳೆದುಕೊಳ್ಳದ ಸೂರ್ಯಕುಮಾರ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 26 ಎಸೆತಗಳಿಗೆ 33 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಪಂದ್ಯದಲ್ಲಿಯೂ ಗಮನಾರ್ಹ ಪ್ರದರ್ಶನವನ್ನು ನೀಡುವಲ್ಲಿ ಸಫಲರಾಗಿಲ್ಲ. ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಮೊದಲನೇ ಭಾಗ ಮತ್ತು ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದ ಈ ಜೋಡಿ ಇತ್ತೀಚಿನ ಐಪಿಎಲ್ ಪಂದ್ಯಗಳಲ್ಲಿ ವಿಫಲತೆಯನ್ನು ಕಂಡಿರುವುದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.
4. ಭುವನೇಶ್ವರ್ ಕುಮಾರ್ ನೀರಸ ಪ್ರದರ್ಶನ
ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಉತ್ತಮ ಬೌಲಿಂಗ್ ಮಾಡುವುದರ ಮೂಲಕ 4 ವಿಕೆಟ್ ಪಡೆದಿದ್ದ ಭುವನೇಶ್ವರ್ ಕುಮಾರ್ ಶ್ರೀಲಂಕಾ ವಿರುದ್ಧದ 2 ಟಿ ಟ್ವೆಂಟಿ ಪಂದ್ಯಗಳಲ್ಲಿ 5 ವಿಕೆಟ್ ಪಡೆದು ಮಿಂಚಿದ್ದರು. ಹೀಗೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣ ಆರಂಭವಾಗುವ ಮುನ್ನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚಿದ್ದ ಭುವನೇಶ್ವರ್ ಕುಮಾರ್ ಸದ್ಯ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 4 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ ಕೇವಲ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದು ಹೆಚ್ಚಿನ ರನ್ ನೀಡಿ ದುಬಾರಿ ಕೂಡ ಆಗಿದ್ದಾರೆ. ಹೀಗೆ ಭುವನೇಶ್ವರ್ ಕುಮಾರ್ ಕಳಪೆ ಫಾರ್ಮ್ ಎದುರಿಸುತ್ತಿರುವುದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಮತ್ತೊಂದು ಸಮಸ್ಯೆಯಾಗುವ ಸೂಚನೆಗಳನ್ನು ನೀಡುತ್ತಿದೆ.
ಆದರೆ ಐಸಿಸಿ ನಿಯಮದ ಪ್ರಕಾರ ಭಾರತ ತಂಡ ಅಕ್ಟೋಬರ್ 10ರೊಳಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಿರುವ ತನ್ನ ತಂಡದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಒಂದುವೇಳೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ದ್ವಿತೀಯ ಭಾಗದಲ್ಲಿ ಆಟಗಾರರು ತೋರಿರುವ ಕಳಪೆ ಪ್ರದರ್ಶನವನ್ನೇನಾದರೂ ಬಿಸಿಸಿಐ ಪರಿಗಣಿಸಿ ತಂಡದಲ್ಲಿ ಬದಲಾವಣೆಯನ್ನು ತರಲು ಮುಂದಾದರೆ ಈ ಮೇಲ್ಕಂಡ ಪಟ್ಟಿಯಲ್ಲಿರುವ ಆಟಗಾರರಲ್ಲಿ ಕೆಲವರಂತೂ ತಂಡದಿಂದ ಹೊರ ಬೀಳುವುದು ಖಚಿತ ಎನ್ನಬಹುದು.