ಇಸ್ಲಮಾಬಾದ್: ಮ್ಯಾನ್ಚೆಸ್ಟರ್ನಲ್ಲಿ ಸೆಪ್ಟೆಂಬರ್ 10ರಂದು ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ರದ್ದಾಗಿ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೆಲವರು ಐದನೇ ಟೆಸ್ಟ್ನಲ್ಲಿ ಆಡುವುದರಿಂದ ಹಿಂದೆ ಸರಿದಿರುವ ಟೀಮ್ ಇಂಡಿಯಾದ ನಿಲುವು ಒಪ್ಪಲಸಾಧ್ಯ ಎಂದರೆ, ಇನ್ನು ಕೆಲವರು ಭಾರತದ ನಿರ್ಧಾರ ಸರಿಯಿದೆ ಎನ್ನುತ್ತಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕೋಪವನ್ನು ಐಪಿಎಲ್ ಮೇಲೆ ಹಾಕಿದ ಸ್ಟಾರ್ ಆಟಗಾರ!
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಝಮಾಮ್ ಉಲ್ ಹಕ್ ಕೂಡ ಭಾರತ vs ಇಂಗ್ಲೆಂಡ್ ಐದನೇ ಟೆಸ್ಟ್ ರದ್ದಾಗಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಕ್ಯಾಂಪ್ನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುವ ಭೀತಿಯಿಂದ ಭಾರತ ತಂಡ ಐದನೇ ಟೆಸ್ಟ್ನಿಂದ ದೂರ ಸರಿದದ್ದು ಸರಿಯಾದ ನಿರ್ಧಾರ ಎಂದು ಹಕ್ ಹೇಳಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳು ಮುಗಿದಿತ್ತು. ಸರಣಿಯಲ್ಲಿ 2-1ರಿಂದ ಭಾರತ ಮುನ್ನಡೆಯಲ್ಲಿತ್ತು. ಆದರೆ ಆ ವೇಳೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಇಬ್ಬರು ಫಿಸಿಯೋಗಳು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಟೀಮ್ ಇಂಡಿಯಾಕ್ಕೆ ಕೋಚ್ಗಳು ಮತ್ತು ಬೆಂಬಲ ಸಿಬ್ಬಂದಿಯೇ ಇಲ್ಲದ್ದರಿಂದ ಟೆಸ್ಟ್ ಆಡಲು ಭಾರತೀಯ ಕ್ರಿಕೆಟಿಗರು ಹಿಂದೇಟು ಹಾಕಿದ್ದರು. ಈ ಕಾರಣದಿಂದ ನಡೆಯಬೇಕಿದ್ದ ಐದನೇ ಟೆಸ್ಟ್ ಅನಿರೀಕ್ಷಿತವಾಗಿ ರದ್ದಾಗಿತ್ತು.
ಟೀಮ್ ಇಂಡಿಯಾ ಮೇಲೆ ಗಂಭೀರ ಆರೋಪ ಹೊರಿಸಿದ ಸ್ಟೀವ್ ಹಾರ್ಮಿಸನ್!
"ಕೋವಿಡ್-19 ಕಾರಣದಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯದಿದ್ದುದು ದುರದೃಷ್ಟಕರ. ಇದೊಂದು ಶ್ರೇಷ್ಠ ಸರಣಿಯಾಗಿತ್ತು. ಆದರೆ ನ್ಯಾಯವಾಗಿ ಹೇಳಬೇಕಾದರೆ, ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಅನ್ನು ಕೋಚ್ ಮತ್ತು ಬೆಂಬಲ ಸಿಬ್ಬಂದಿಗಳು ಇಲ್ಲದೆ ಆಡಿತ್ತು. ಆದರೂ ಭಾರತ ತಂಡ ಮೈದಾನದಲ್ಲಿ ಅದ್ಭುತ ನಿರ್ಣಯ ತೋರಿಸಿದ್ದರು," ಎಂದು ಹಕ್ ಹೇಳಿದ್ದಾರೆ.