ತವರಿಗೆ ಮರಳಿದ ನ್ಯೂಜಿಲೆಂಡ್ ತಂಡ
ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ಸೆಪ್ಟೆಂಬರ್ 17, 19, 21ಕ್ಕೆ ಮೂರು ಏಕದಿನ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಮತ್ತು ಸೆಪ್ಟೆಂಬರ್ 25, 26, 29, ಅಕ್ಟೋಬರ್ 1, 3ಕ್ಕೆ ಲಾಹೋರ್ನಲ್ಲಿ ಐದು ಪಂದ್ಯಗಳ ಟಿ20ಐ ಸರಣಿ ಆಡಲಿತ್ತು. ಆದರೆ ಭದ್ರತೆಯ ಭೀತಿ ಎದುರಾದ ಕಾರಣ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ. ನ್ಯೂಜಿಲೆಂಡ್ ಭದ್ರತಾ ಸಿಬ್ಬಂದಿಗೆ ಭದ್ರತೆಯ ಅಪಾಯದ ಎಚ್ಚರಿಕೆ ಲಭಿಸಿತ್ತಷ್ಟೇ. ಆದರೆ ಪರಿಶೀಲಿಸಿದಾಗ ಭದ್ರತೆಗೆ ಧಕ್ಕೆಯಾಗುವಂಥ ಯಾವುದೇ ಅಂಶಗಳು ಕಂಡುಬಂದಿರಲಿಲ್ಲ. ಈ ಪಂದ್ಯ ಮುಂದೆ ಯಾವಾಗ ನಡೆಯುತ್ತದೆ ಎನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ. ಇದರಿಂದ ಪಾಕಿಸ್ತಾನ ಕ್ರಿಕೆಟ್ಗಂತೂ ದೊಡ್ಡ ಹಿನ್ನಡೆಯಾಗಿದೆ. ಪಾಕ್ನಿಂದ ವಾಪಸ್ಸಾಗಿರುವ ಕಿವೀಸ್ ಸೆಪ್ಟೆಂಬರ್ 22ರ ಬುಧವಾರ ತವರಿಗೆ ತಲುಪಿದೆ. ಒಂದು ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಮೂಲದಿಂದ ನಮಗೆ ಬೆದರಿಕೆಯ ಮಾಹಿತಿ ಲಭಿಸಿತು ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಹೇಳಿದೆಯಾದರೂ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.
ಭಾರತದಿಂದ ಬಂದ ಬೆದರಿಕೆ ಮೇಲ್
"ಸಿಂಗಾಪುರದ ಸ್ಥಳವನ್ನು ತೋರಿಸುವ ಪಿವಿಎನ್ (ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್) ಮೂಲಕ ಭಾರತದಿಂದ ಈ ಇಮೇಲ್ ಅನ್ನು ರಚಿಸಲಾಗಿದೆ," ಎಂದು ಚೌಧರಿ ಪಾಕಿಸ್ತಾನದಲ್ಲಿ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯ ತಕ್ಷಣ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ಹಲವಾರು ಬಾರಿ ಒಂದನ್ನೊಂದು ದ್ವೇಶಿಸುತ್ತ, ಆರೋಪಿಸುತ್ತಿರುತ್ತದೆ. ಭಾರತ ದೇಶ ಪಾಕಿಸ್ತಾನವನ್ನು ದೂರಿದರೆ ಪಾಕ್ ಭಾರತವನ್ನು ದೂರುತ್ತಿರುತ್ತದೆ. ಅದರಲ್ಲೂ ಎರಡೂ ದೇಶಗಳ ಮಧ್ಯೆ ರಾಜಕೀಯ ವಿಚಾರದಲ್ಲಿ ದೊಡ್ಡ ಕಂದಕವಿದೆ. ಪಾಕಿಸ್ತಾನ ಹೇಳುತ್ತಿರುವ ಆರೋಪ ಸುಳ್ಳಾದರೆ ಭಾರತದ ವಿದೇಶಾಂಗ ಸಚಿವಾಲಯ ಪಾಕ್ ಆರೋಪವನ್ನು ತಳ್ಳಿ ಹಾಕಬಹುದಿತ್ತು. ಮೇಲಾಗಿ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಇನ್ನಷ್ಟು ಹಾಳುಗೆಡವಲು ಭಾರತದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿರಲೂಬಹುದು. ಯಾವುದಕ್ಕೂ ಭಾರತದ ಸಚಿವಾಲಯದ ಸ್ಪಷ್ಟನೆಗಾಗಿ ಕಾದು ನೋಡಬೇಕಾಗಿದೆ.
ನ್ಯೂಜಿಲೆಂಡ್ಗೆ ಯಾಕೆ ಇಷ್ಟು ಭಯ?
2002ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ತಂಡ ತಂಗಿದ್ದ ಹೋಟೆಲ್ ಸಮೀಪ ಬಾಂಬ್ ಬ್ಲಾಸ್ಟ್ ಆಗಿತ್ತು. ಅದಾಗಿ ಒಂದು ವರ್ಷದ ಬಳಿಕ ನ್ಯೂಜಿಲೆಂಡ್ ತಂಡ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನೇ ನಿಲ್ಲಿಸಿತ್ತು. ಆ ಘಟನೆ ನಡೆದು ಬರೋಬ್ಬರಿ 18 ವರ್ಷಗಳ ಬಳಿಕ ಮತ್ತೆ ಈ ಬಾರಿ ಕಿವೀಸ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. 2009ರಲ್ಲಿ ಶ್ರೀಲಂಕಾ ತಂಡ ಪಾಕ್ಗೆ ಹೋಗಿದ್ದಾಗ, ಈಗ ನ್ಯೂಜಿಲೆಂಡ್ ತಂಡದ ಕೋಚ್ ಆಗಿರುವ ಥಿಲನ್ ಸಮರವೀರ ಅವರ ಎಡ ತೊಡೆಯ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಅದಾಗಿ ಶಸ್ತ್ರ ಚಿಕಿತ್ಸೆ ನಡೆದು ಮೂರು ತಿಂಗಳ ಬಳಿಕ ಸಮರವೀರ ಮತ್ತೆ ಮೈದಾನಕ್ಕಿಳಿದಿದ್ದರು. ಈಗ 2019ರಿಂದಲೂ ಸಮರವೀರ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಕ್ರಿಕೆಟರ್ಸ್ಗೆ ಪಾಕ್ನಲ್ಲಿ ಭಯೋತ್ಪಾದನಾ ಭೀತಿ ಎದುರಾಗಿದ್ದ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಇದೇ ಕಾರಣಕ್ಕೆ ಈಚಿನ ವರ್ಷಗಳಲ್ಲ ಪಾಕಿಸ್ತಾನ ತಂಡ ಜಿಂಬಾಬ್ವೆ, ಸೌತ್ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳಿಗೆ ಯಶಸ್ವಿಯಾಗಿ ಸರಣಿ ಆಯೋಜಿಸಿತ್ತು.