ಲಂಡನ್, ಸೆಪ್ಟೆಂಬರ್ 1: ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಅನುಭವಿ ಆರ್ ಅಶ್ವಿನ್ ಮೊದಲ ಮೂರು ಪಂದ್ಯಗಳಲ್ಲಿಯೂ ವಿಫಲವಾಗಿದ್ದರು. ಆದರೆ ಆರ್ ಅಶ್ವಿನ್ಗೆ ಆಡುವ ಬಳಗದಲ್ಲಿ ಸ್ಥಾನ ನೀಡಬೇಕೆಂಬ ಒತ್ತಾಯ ಸತತವಾಗಿ ಕೇಳಿ ಬರುತ್ತಲೇ ಇದೆ. ಈಗ ನಾಲ್ಕನೇ ಟೆಸ್ಟ್ನ ಆರಂಬಕ್ಕೂ ಮುನ್ನವೂ ಈ ಒತ್ತಾಯ ಮತ್ತೆ ಹೆಚ್ಚಾಗಿದೆ. ಭಾರತೀಯ ಕ್ರಿಕೆಟ್ನ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕೂಡ ಈ ಅಭಿಪ್ರಾಯಕ್ಕೆ ತಮ್ಮ ಧ್ವನಿ ಸೇರಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಆರ್ ಅಶ್ವಿನ್ ಅವರನ್ನು ಸೇರಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓವಲ್ ಟೆಸ್ಟ್ನಲ್ಲಿ ಆರ್ ಅಶ್ವಿನ್ ಸರಣಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ ಎಂದು ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದಾದ ಟೀಮ್ ಇಂಡಿಯಾದ 3 ಆಟಗಾರರು
ಆರ್ ಅಶ್ವಿನ್ ಕೊನೆಯ ಬಾರಿಗೆ ಓವಲ್ ಅಂಗಳದಲ್ಲಿಯೇ ಸ್ಪರ್ಧೆಗಿಳಿದಿದ್ದರು. ಕಳೆದ ಜುಲೈನಲ್ಲಿ ಕೌಂಟಿ ಪಂದ್ಯದಲ್ಲಿ ಸೆರ್ರೆ ತಂಡದ ಪರವಾಗಿ ಆಡಿದ ಆರ್ ಅಶ್ವಿನ್ ಅದ್ಭುತ ಬೌಲಿಂಗ್ ದಾಳಿ ಮೂಲಕ ಮಿಂಚಿದ್ದರು. ಓವಲ್ ಅಂಗಳದಲ್ಲಿಯೇ ನಡೆದಿದ್ದ ಈ ಪಂದ್ಯದಲ್ಲಿ ಅಶ್ವಿನ್ ಮೊದಲ ಇನ್ನಿಂಗ್ಸ್ನಲ್ಲಿ 99 ರನ್ಗಳನ್ನು ನೀಡಿ 1 ವಿಕೆಟ್ ಪಡೆದಿದ್ದರೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 27 ರನ್ಗಳಿಗೆ 6 ವಿಕೆಟ್ ಕಬಳಿಸಿ ಮಿಂಚಿದ್ದರು.
"ನನ್ನ ಪ್ರಕಾರ ಈ ಸರಣಿಯಲ್ಲಿ ಆರ್ ಅಶ್ವಿನ್ ಮೊದಲ ಬಾರಿಗೆ ಕಣಕ್ಕಿಳಿಯಲು ಕಾಲ ಈಗ ಕೂಡಿಬಂದಿದೆ. ಸಾಂಪ್ರದಾಯಿಕವಾಗಿ ಓವಲ್ ಅಂಗಳದಲ್ಲಿ ಫ್ಲ್ಯಾಟ್ ಪಿಚ್ಗಳನ್ನು ಬಳಸಲಾಗುತ್ತದೆ. ಈ ಬಾರಿಯೂ ಅದು ಭಿನ್ನವಾಗಿಲ್ಲ. ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸರ್ರೆ ತಮಡದ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಈ ಪಂದ್ಯಗಳಲ್ಲಿ 10 ಶತಕಗಳು ದಾಖಲಾಗಿವೆ" ಎಮದು ದಿನೇಶ್ ಕಾರ್ತಿಕ್ ದಿ ಟೆಲಿಗ್ರಾಫ್ಗೆ ಬರೆದಿರುವ ಅಂಗಣದಲ್ಲಿ ವಿವರಿಸಿದ್ದಾರೆ.
"ನಾನೇನಾದರೂ ವಿರಾಟ್ ಕೊಹ್ಲಿಯ ಸ್ಥಾನದಲ್ಲಿದ್ದರೆ ಈ ಮಹತ್ವದ ಟೆಸ್ಟ್ನಲ್ಲಿ ಹೊಸ ಆಯಾಮವನ್ನು ತರಲು ಬಯಸುತ್ತಿದ್ದೆ. ಆರ್ ಅಶ್ವಿನ್ ಅವರ ವೃತ್ತಿ ಜೀವನದ ಯಶಸ್ಸನ್ನು ಗಮನಿಸಿದರೆ ಅವರು ಪರಿಣಾಮಕಾರಿ ಪ್ರದರ್ಶನ ನೀಡುವುದಕ್ಕಾಗಿ ಪಿಚ್ಗಳ ವರ್ತನೆಯನ್ನು ಹೆಚ್ಚಾಗಿ ಅವಲಂಬಿಸಿಲ್ಲ" ಎಂದು ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ.
ಎಡಗೈ ದಾಂಡಿಗರ ವಿರುದ್ಧ ಅಶ್ವಿನ್ ಅಪಾಯಕಾರಿ: ಇನ್ನು ಇದೇ ಸಂದರ್ಣದಲ್ಲಿ ಇಂಗ್ಲೆಂಡ್ ತಂಡದ ಲೈನ್ಅಪ್ನಲ್ಲಿ ಎಡಗೈ ದಾಂಡಿಗರು ಹೆಚ್ಚಾಗಿರುವ ಕಾರಣದಿಮದಾಗಿ ಆರ್ ಅಶ್ವಿನ್ ತಂಡಕ್ಕೆ ಹೆಚ್ಚಿನ ಪರಿಣಾಮಕಾರಿಯಾಗಿರಲಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಆರ್ ಅಶ್ವಿನ್ ಗಾಳಿಯಲ್ಲಿ ಹೆಚ್ಚು ತೂರಲು ಬಿಡುತ್ತಾರೆ. ಅವರ ಕೈ ಬೆರಳುಗಳು ದೊಡ್ಡದಾಗಿರುವ ಕಾರಣ ಇದರ ಲಾಭವನ್ನು ಅವರು ಪಡೆಯುತ್ತಾರೆ. ಇದು ಎಡಗೈ ದಾಂಡಿಗರಿಗೆ ಹೆಚ್ಚಿನ ಅಪಾಯವನ್ನುಂಡು ಮಾಡುತ್ತದೆ ಎಂದು ದಿನೇಶ್ ಕಾರ್ತಿಕ್ ಹೇಳಿಕೆ ನೀಡಿದ್ದಾರೆ.
ಇನ್ನು ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಇನ್ನೋರ್ವ ಸ್ಪಿನ್ನರ್ ರವೀಂದ್ರ ಜಡೇಜಾ ಬಗ್ಗೆ ಪ್ರತಿಕ್ರಿಯಿಸುತ್ತಾ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ತಂಡಕ್ಕೆ ಹೆಚ್ಚಿನ ನೆರವನ್ನು ನೀಡಬೇಕಾಗುತ್ತದೆ ಎಂದಿದ್ದಾರೆ. ಆರ್ ಅಶ್ವಿನ್ ಬೌಲಿಂಗ್ನಲ್ಲಿನ ಪ್ರದರ್ಶನದ ಜೊತೆಗೆ ಬ್ಯಾಟಿಂಗ್ನಲ್ಲಿಯೂ ನೆರವಾಗುವ ಬಲ ಹೊಂದಿದ್ದಾರೆ ಎಂದು ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ.
ಭಾರತದ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ / ಆರ್ ಅಶ್ವಿನ್, ಇಶಾಂತ್ ಶರ್ಮಾ/ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ
ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಜಾನಿ ಬೈರ್ಸ್ಟೊವ್ (ವಿಕೆಟ್ ಕೀಪರ್), ಡೇನಿಯಲ್ ಲಾರೆನ್ಸ್/ ಒಲ್ಲಿ ಪೋಪ್, ಮೊಯೀನ್ ಅಲಿ, ಸ್ಯಾಮ್ ಕರನ್/ಕ್ರಿಸ್ ವೋಕ್ಸ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್ ಮತ್ತು ಕ್ರೇಗ್ ಓವರ್ಟನ್