5. ಹೆಮ್ಮೆ ಮೂಡಿಸಿದ್ದ ಎಂಎಸ್ ಧೋನಿ
2011ರಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಆಡುತ್ತಿತ್ತು. ಟ್ರೆಂಟ್ ಬ್ರಿಡ್ಜ್ನಲ್ಲಿ ದ್ವಿತೀಯ ಟೆಸ್ಟ್ ನಡೆಯುತ್ತಿತ್ತು. ಆವತ್ತು ಟೀ ಬ್ರೇಕ್ಗೂ ಮುನ್ನ ಕಡೇಯ ಎಸೆತ ವಿವಾದ ಹುಟ್ಟು ಹಾಕಿತ್ತು. ಇಂಗ್ಲೆಂಡ್ ಆಟಗಾರರ ಬ್ಯಾಟ್ ತಾಗಿದ್ದ ಚೆಂಡು ಬೌಂಡರಿ ಗೆರೆ ದಾಟುವುದರಲ್ಲಿತ್ತು. ಆದರೆ ಅಲ್ಲಿದ್ದ ಪ್ರವೀಣ್ ಕುಮಾರ್ ಚೆಂಡನ್ನು ಭಾರತದ ಕೀಪರ್ ಎಂಎಸ್ ಧೋನಿಗೆ ತಲುಪಿಸಿದರು. ಆದರೆ ಬ್ಯಾಟಿಂಗ್ ಮಾಡುತ್ತಿದ್ದ ಇಯಾನ್ ಮಾರ್ಗನ್ ಮತ್ತು ಇಯಾನ್ ಬೆಲ್ ಚೆಂಡು ಬೌಂಡರಿ ಗೆರೆ ದಾಟಿದೆ, ಪ್ರವೀಣ್ ಚೆಂಡೆಸೆದಿದ್ದು ಟೀ ಬ್ರೇಕ್ಗೆ ಅಂದುಕೊಂಡಿದ್ದರು. ಇತ್ತ ಚೆಂಡು ಕೈಗೆ ಬರುತ್ತಲೇ ಭಾರತದ ಆಟಗಾರರು ಬೇಲ್ಸ್ ಉರುಳಿಸಿದ್ದರು. ಆ ಹೊತ್ತು ಇಯಾನ್ ಬೆಲ್ ಕ್ರೀಸ್ನಲ್ಲಿ ಇರದಿದ್ದರಿಂದ ಭಾರತ ರನ್ ಔಟ್ಗೆ ಅಪೀಲ್ ಮಾಡಿತು. ಬೆಲ್ ಔಟ್ ಎಂದು ಘೋಷಿಸಲಾಯ್ತು. ಅದಾಗಿ ಇಂಗ್ಲೆಂಡ್ ಅಭಿಮಾನಿಗಳೆಲ್ಲ ಭಾರತ ತಂಡವನ್ನು ಹೀಯಾಳಿಸಿದರು. ಇಂಗ್ಲೆಂಡ್ ಕ್ರಿಕೆಟ್ ಮ್ಯಾನೇಜ್ಮೆಂಟ್ ಕೂಡ ಔಟ್ ಅಪೀಲ್ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಧೋನಿಯಲ್ಲಿ ವಿನಂತಿಸಿತು. ಆವತ್ತು ಕ್ರೀಡಾಸ್ಫೂರ್ತಿ ಮೆರೆದ ಧೋನಿ ಟೀ ಬ್ರೇಕ್ ಬಳಿಕ ಮತ್ತೆ ಬೆಲ್ ಅವರನ್ನು ಬ್ಯಾಟಿಂಗ್ ಮಾಡಲು ಕರೆದರು. ಆ ದಿನ ಧೋನಿಯ ಕ್ರೀಡಾಸ್ಫೂರ್ತಿಯಿಂದಾಗಿ ಇಡೀ ಇಂಗ್ಲೆಂಡ್ ಪ್ರೇಕ್ಷಕರು ಟೀಮ್ ಇಂಡಿಯಾಕ್ಕೆ ಚಿಯರ್ ಮಾಡಿದ್ದರು.
4. ಮನ ಗೆದ್ದಿದ್ದ ಅಜಿಂಕ್ಯ ರಹಾನೆ
2018ರ ಘಟನೆಯಿದು. ತನ್ನ ಚೊಚ್ಚಲ ಏಕಮಾತ್ರ ಟೆಸ್ಟ್ ಪಂದ್ಯವನ್ನಾಡುವುದಕ್ಕಾಗಿ ಅಫ್ಘಾನಿಸ್ತಾನ ತಂಡ ಭಾರತಕ್ಕೆ ಬಂದಿತ್ತು. ಆವತ್ತು ಭಾರತ ತಂಡ ಅಫ್ಘಾನ್ ವಿರುದ್ಧ ಭರ್ಜರಿ 262 ರನ್ನಿಂದ ಗೆದ್ದಿತ್ತು. ಏಕಮಾತ್ರ ಟೆಸ್ಟ್ ಪಂದ್ಯ ಗೆದ್ದ ಬಳಿಕ ಟ್ರೋಫಿ ಟ್ವೀಕರಿಸಿದ, ಭಾರತದ ನಾಯಕತ್ವ ವಹಿಸಿದ್ದ ಅಜಿಂಕ್ಯ ರಹಾನೆ, ಇಡೀ ಅಫ್ಘಾನಿಸ್ತಾನ ತಂಡವನ್ನು ಕರೆದು ವಿನ್ನರ್ಸ್ ತಂಡದ ಜೊತೆ ಫೋಟೋಗಾಗಿ ನಿಲ್ಲುವಂತೆ ಕೋರಿಕೊಂಡಿದ್ದರು. ಆವತ್ತು ಭಾರತ-ಅಫ್ಘಾನ್ ಆಟಗಾರರೆಲ್ಲರೂ ಒಂದೇ ಫೋಟೋ ಫ್ರೇಮ್ನಲ್ಲಿ ನಗುತ್ತ ನಿಂತಿದ್ದರು. ಭಾರತದ ನಾಯಕನ ಕ್ರೀಡಾಸ್ಫೂರ್ತಿಗೆ ವಿಶ್ವ ಕ್ರಿಕೆಟ್ ಆವತ್ತು ಸೆಲ್ಯೂಟ್ ಹೊಡೆದಿತ್ತು.
3. ಸ್ಫೂರ್ತಿ ಮೆರೆದಿದ್ದ ಗಿಲ್ಕ್ರಿಸ್ಟ್
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆ್ಯಡಮ್ ಗಿಲ್ಕ್ರಿಸ್ಟ್ ಕ್ರೀಡಾಸ್ಫೂರ್ತಿಯಾಗಿ ಅತ್ಯುತ್ತಮ ಉದಾಹರಣೆಯಾಗಿ ಕಾಣಿಸಿದ್ದರು. 2003ರ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಎರಡೂ ತಂಡಗಳೂ ಪ್ರತಿಷ್ಠಿತ ಟೂರ್ನಿಯ ಫೈನಲ್ ತಲುಪುವ ಯೋಜನೆಯಲ್ಲಿದ್ದವು. ಆದರೆ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಗಿಲ್ಕ್ರಿಸ್ಟ್ ಇದ್ದಕ್ಕಿದ್ದಂತೆ ಪೆವಿಲಿಯನ್ಗೆ ನಡೆದಿದ್ದರು. ಅದಕ್ಕೂ ಹಿಂದೆ, ಗಿಲ್ಕ್ರಿಸ್ಟ್ ಬ್ಯಾಟಿಂಗ್ ಮಾಡುತ್ತಿದ್ದಾಗ ಗಿಲ್ಕ್ರಿಸ್ಟ್ ದಾಟಿ ಹೋದ ಚೆಂಡು ಲಂಕಾ ಕೀಪರ್ ಕುಮಾರ ಸಂಗಕ್ಕಾರ ಕೈ ಸೇರಿತ್ತು. ಸಂಗಕ್ಕಾರ ಮತ್ತು ಲಂಕನ್ನರು ಅಂಪೈರ್ ರೂಡಿ ಕೊರ್ಟ್ಜೆನ್ ಅವರಲ್ಲಿ ಔಟ್ಗಾಗಿ ಅಪೀಲ್ ಮಾಡಿದರಾದರೂ ಅಂಪೈರ್ ಔಟ್ ತೀರ್ಪು ನೀಡಲಿಲ್ಲ. ಆದರೆ ಚೆಂಡು ತನ್ನನ್ನು ಹಾದು ಹೋಗುವಾಗ ಬ್ಯಾಟಿನ ಅಂಚಿಗೆ ತಾಗಿದ್ದನ್ನು ಗಮನಿಸಿದ್ದ ಗಿಲ್ಕ್ರಿಸ್ಟ್ ಕ್ರೀಡಾಸ್ಫೂರ್ತಿಯಿಂದ ತಾನೇ ಪೆವಿಲಿಯನ್ಗೆ ನಿರ್ಗಮಿಸಿದ್ದರು.
2. ಭಾರತದ ನಾಯಕ ವಿರಾಟ್ ಕೊಹ್ಲಿ
ವಿಶ್ವದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೇವ್ ಸ್ಮಿತ್ ಇಬ್ಬರೂ ಅತ್ಯುತ್ತಮ ಬ್ಯಾಟ್ಸ್ಮನ್ಗಳು. ಕಳೆದ ವರ್ಷ ವಿಶ್ವಕಪ್ಗಾಗಿ ಓವಲ್ ಮೈದಾನಕ್ಕಿಳಿದಿದ್ದ ಆಸ್ಟ್ರೇಲಿಯಾ-ಭಾರತ ತಂಡಗಳು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಭಾರತದ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ಗೆ ಭಾರತದ ಅಭಿಮಾನಿಗಳು ಹೆಚ್ಚಿದ್ದ ಪ್ರೇಕ್ಷಕರ ಸಮೂಹ ಗೇಲಿ ಮಾಡಿತ್ತು. ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇಬ್ಬರೂ ಚೆಂಡು ವಿರೂಪ ಪ್ರಕರಣಕ್ಕಾಗಿ ಒಂದು ವರ್ಷದ ನಿಷೇಧ ಅನುಭವಿಸಿ ಆಗ ಸ್ವಲ್ಪವೇ ಸಮಯವಾಗಿತ್ತಷ್ಟೇ. ಪ್ರೇಕ್ಷಕರು ಗೇಲಿ ಮಾಡಿದ್ದು ಇದೇ ಕಾರಣಕ್ಕೆ. ಆದರೆ ಇನ್ನಿಂಗ್ಸ್ ಆಡುತ್ತಿದ್ದ ಭಾರತದ ನಾಯಕ ಕೊಹ್ಲಿಗೆ ಇದು ಸರಿಕಾಣಲಿಲ್ಲ. ಬೌಂಡರಿ ಲೈನ್ ಸಮೀಪ ಕೊಹ್ಲಿ ಬಂದವರೆ ಅಭಿಮಾನಿಗಳನ್ನುದ್ದೇಶಿಸಿ, 'ಆಟಗಾರನಿಗೆ ಗೇಲಿ ಮಾಡಬೇಡಿ, ಅವರಿಗೆ ಪ್ರೋತ್ಸಾಹಿಸಿ' ಎಂದು ಕೈಸನ್ನೆ ಮೂಲಕ ಕೇಳಿಕೊಂಡಿದ್ದರು. ಇದು ವಿಶ್ವ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
1. ಗ್ರಾಂಟ್ ಎಲಿಯಟ್ ಮತ್ತು ಡೇಲ್ ಸ್ಟೇನ್
2015ರ ವಿಶ್ವಕಪ್ ಪಂದ್ಯಕೂಡ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷವೆನಿಸಿತ್ತು. ಆವತ್ತು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕ್ರೀಡಾಸ್ಫೂರ್ತಿಗಾಗಿ ಗಮನಸೆಳೆದಿದ್ದವು. ಗೆದ್ದ ತಂಡದ ಆಟಗಾರ ಸೋತ ತಂಡದ ಆಟಗಾರನನ್ನು ಸಮಾಧಾನಿಸಿದ್ದ ಆವತ್ತಿನ ಚಿತ್ರಣ ಕ್ರಿಕೆಟ್ ಪ್ರೇಮಿಗಳ ಮನ ಸೆಳೆದಿತ್ತು. ವಿಶ್ವಕಪ್ ಸೆಮಿಫೈನಲ್ಗಾಗಿ ಈಡನ್ ಪಾರ್ಕ್ನಲ್ಲಿ ಕಿವೀಸ್-ಪ್ರೋಟಿಯಾಸ್ ಎದುರಾಗಿದ್ದವು. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಫೈನಲ್ ಪ್ರವೇಶಿಸಿತ್ತು. ಸೋತ ಆಘಾತದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಕುಸಿದಿದ್ದರು. ಆ ಹೊತ್ತಿಗೆ ವೇಗಿ ಡೇಲ್ ಸ್ಟೇನ್ ಬಳಿಗೆ ಬಂದ ಗ್ರಾಂಟ್ ಎಲಿಯಟ್, ಸ್ಟೇನ್ನನ್ನು ಮೇಲೆತ್ತಿದವರೆ ಸಮಾಧಾನಿಸಿದರು. ಈ ಕ್ಷಣ ಕ್ರೀಡಾಭಿಮಾನಿಗಳ ಮನಸೂರೆಗೊಳಿಸಿತ್ತು.